ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಿದ್ದರಾಮಯ್ಯ ಸೂಚಿಸಿದ 3 ಹೆಸರು: ಇವರಲ್ಲಿ ಒಬ್ಬರು ಕನ್ಫರ್ಮ್
ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮೂವರ ಹೆಸರನ್ನು ಸೋನಿಯಾ ಗಾಂಧಿ ಅಂತಿಮಗೊಳಿಸಿದ್ದಾರೆ ಎನ್ನುವ ಮಾಹಿತಿಯಿದೆ.
Recommended Video
ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಜೊತೆಗೆ, ಶಾಸಕಾಂಗ ಪಕ್ಷದ ನಾಯಕನನ್ನೂ ಆರಿಸಬೇಕಾಗಿರುವುದರಿಂದ, ಸೋನಿಯಾ ಗಾಂಧಿ, ರಾಜ್ಯದ ಹಿರಿಯ ಮುಖಂಡರ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ.
ಈ ಆಯಕಟ್ಟಿನ ಹುದ್ದೆಗೆ ಹಲವು ಹಿರಿಯ ಮುಖಂಡರು ಶತಾಯಗತಾಯು ಪ್ರಯತ್ನವನ್ನು ನಡೆಸಿದ್ದರೂ, ರಾಜ್ಯದ ಎರಡು ಪ್ರಬಲ ಸಮುದಾಯದ ಪೈಕಿ ಒಂದು ಸಮುದಾಯದ ನಾಯಕರೊಬ್ಬರು, ಈ ಸ್ಥಾನಕ್ಕೇರುವುದು ಖಚಿತವಾಗಿದೆ.
ಅತಿಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಪ್ರಾಯವನ್ನು, ಸೋನಿಯಾ ಪಡೆದುಕೊಂಡಿದ್ದಾರೆ. ಇವರು ಶಿಫಾರಸು ಮಾಡಿರುವ ಮೂವರಲ್ಲಿ ಒಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿದ್ದರಾಮಯ್ಯ ರೆಕೆಮೆಂಡ್ ಮಾಡಿರುವ ಹೆಸರು ಯಾವುದು?

ಸಿದ್ದರಾಮಯ್ಯ ಸ್ಥಾನ ಅಬಾದಿತ
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ, ರಾಜ್ಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಗಿದ್ದರೂ, ಸಿದ್ದರಾಮಯ್ಯನವರೇ ಈ ಸ್ಥಾನದಲ್ಲಿ ಮುಂದುವರಿಯುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ. ಈ ವಿಚಾರದಲ್ಲಿ ಏನೇ ಪರವಿರೋಧ ನಿಲುವನ್ನು ರಾಜ್ಯ ಮುಖಂಡರು ಹೊಂದಿದ್ದರೂ, ಸಿದ್ದರಾಮಯ್ಯ, ತಾವು ಬಯಸಿದ್ದ ಹುದ್ದೆಯನ್ನು ಉಳಿಸಿಕೊಳ್ಳುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬಂದು ಹೋದ ಹೆಸರು
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬಂದು ಹೋದ ಹೆಸರು ಮತ್ತು ಆಕಾಂಕ್ಷಿಗಳ ಹೆಸರು ಒಂದಲ್ಲಾ..ಎರಡಲ್ಲಾ.. ಪ್ರಮುಖವಾಗಿ, ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ ಮುಂತಾದವು. ಆದರೆ, ಸಿದ್ದರಾಮಯ್ಯ ಶಿಫಾರಸು ಮಾಡಿದ್ದು ಮೂವರ ಹೆಸರನ್ನು...

ಪ್ರಭಾವೀ ಮುಖಂಡ ಎಂ.ಬಿ.ಪಾಟೀಲ್
ರಾಜ್ಯದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದಾದರೆ ಈ ಎರಡು ಹೆಸರನ್ನು ಪರಿಗಣಿಸಬೇಕಾಗಿ ಸಿದ್ದರಾಮಯ್ಯ ಶಿಫಾರಸು ಮಾಡಿದ್ದಾರೆ. ಅದರಲ್ಲಿ ಒಬ್ಬರು, ಸಿದ್ದು ಪರಮಾಪ್ತ, ಉತ್ತರ ಕರ್ನಾಟಕದ ಪ್ರಭಾವೀ ಮುಖಂಡ ಎಂ.ಬಿ.ಪಾಟೀಲ್.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ
ಸಿದ್ದರಾಮಯ್ಯ ಶಿಫಾರಸು ಮಾಡಿರುವ ಇನ್ನೊಂದು ಲಿಂಗಾಯತ ಸಮುದಾಯದ ನಾಯಕನ ಹೆಸರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ. ಸಿದ್ದರಾಮಯ್ಯ ಆಪ್ತಬಣದಲ್ಲಿರುವ ಖಂಡ್ರೆ, ಎಲ್ಲರ ಜೊತೆ, ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಖಚಿತ ಮಾಹಿತಿಗಳ ಪ್ರಕಾರ, ಮಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ಇವರದ್ದೇ. ಇನ್ನೊಂದು ಹೆಸರು, ಒಕ್ಕಲಿಗ ಸಮುದಾಯದ್ದು..

ಒಕ್ಕಲಿಗ ಸಮುದಾಯದ ಕೃಷ್ಣ ಭೈರೇಗೌಡ
ಒಂದು ವೇಳೆ ಒಕ್ಕಲಿಗ ಸಮುದಾಯದ ನಾಯಕನಿಗೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ನೀಡಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದೇ ಆದಲ್ಲಿ, ಕೃಷ್ಣ ಭೈರೇಗೌಡ ಅವರ ಹೆಸರನ್ನು ಪರಿಗಣಿಸಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನುವ ಮಾಹಿತಿಯಿದೆ. ಸಿದ್ದರಾಮಯ್ಯ ಶಿಫಾರಸು ಮಾಡಿರುವ ಮೂರು ಹೆಸರಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಇಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications