ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ,ಡಿಸಿಎಂ ಹೆಸರೇಳುವಂತೆ ಇಡಿ ಒತ್ತಡ: ಬಿ ನಾಗೇಂದ್ರ
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಹೇಳುವಂತೆ ಇಡಿ ತನ್ನ ಮೇಲೆ ಒತ್ತಡ ಹೇರಿತ್ತು ಎಂದು ಮಾಜಿ ಸಚಿವ ಬಿ ನಾಗೇಂದ್ರ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಬುಧವಾರ ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಗರಣದಲ್ಲಿ ನನ್ನ ಪಾತ್ರವೇ ಇಲ್ಲದಿರುವಾಗ ಸಿಎಂ ಮತ್ತು ಡಿಸಿಎಂ ಪಾತ್ರ ಎಲ್ಲಿದೆ? ಸರ್ಕಾರದ ಪಾತ್ರ ಎಲ್ಲಿದೆ? ಬ್ಯಾಂಕ್ ಮತ್ತು ಬ್ಯಾಂಕ್ನಲ್ಲಿ ನಡೆದಿರುವ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಅದನ್ನು ತಿರಸ್ಕರಿಸಿದೆ. ಅದರ ಹೊರತಾಗಿಯೂ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ 'ಮುಡಾ' ಹಗರಣದಲ್ಲಿ ಪಿತೂರಿ ನಡೆಸಿದೆ ಎಂದು ಅವರು ಹೇಳಿದರು.

ಯಾವುದೇ ಲಿಖಿತ ಆದೇಶವಿಲ್ಲದೆ, ಯಾವುದೇ ಆದೇಶಗಳಿಲ್ಲದೆ ಹಣ ವರ್ಗಾವಣೆ ಮಾಡಲಾಗಿದೆ. ನೀತಿ ಸಂಹಿತೆ ಇದ್ದ ಸಮಯದಲ್ಲಿ (ಲೋಕಸಭಾ ಚುನಾವಣೆ ಸಮಯದಲ್ಲಿ) ಬ್ಯಾಂಕ್ ಅಧಿಕಾರಿಗಳು ಕೆವೈಸಿ ಪರಿಶೀಲಿಸದೆ ಮಾಡಿದ್ದಾರೆ, ಇದು ರಾಜ್ಯ ಸರ್ಕಾರದ ಹಗರಣವಲ್ಲ, ಬ್ಯಾಂಕ್ ಹಗರಣದ ಬಗ್ಗೆ ಮುಖ್ಯಮಂತ್ರಿಯಾಗಲಿ ಅಥವಾ ಸಂಬಂಧಿತ ಸಚಿವರಾಗಲಿ ಅನವಶ್ಯಕವಾಗಿ ಅವರ (ಸಿಎಂ) ಹೆಸರನ್ನು ಜೋಡಿಸಲು ಇಡಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಹೇಗಾದರೂ ಅಸ್ಥಿರಗೊಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ, ಮೂರು ತಿಂಗಳ ಕಾಲ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಇಡಿಯಿಂದ ಕಿರುಕುಳ ನೀಡಲಾಯಿತು, ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲದಿದ್ದರೂ, ಎಲ್ಲಾ ಬಿಜೆಪಿಯ ಕೇಂದ್ರ ನಾಯಕರ ಒತ್ತಡದ ಮೇರೆಗೆ ಇಡಿ ನನ್ನನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದೆ ಎಂದು ನಾಗೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸರ್ಕಾರವನ್ನು ಉಳಿಸಿದ್ದೇನೆ ಎಂಬ ಧೈರ್ಯವಿದೆ. ಯಾವುದೇ ಕಾರಣಕ್ಕೂ ಈ ಹೋರಾಟ ಕೊನೆಗೊಳ್ಳುವುದಿಲ್ಲ, ಬಿಜೆಪಿಯನ್ನು ಬೇರು ಸಹಿತ ಕಿತ್ತೊಗೆಯುವ ಕೆಲಸ ಕರ್ನಾಟಕದಿಂದ ಆರಂಭವಾಗಲಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಧೈರ್ಯ ತೋರಿಸುತ್ತೇವೆ. ಶಿಗ್ಗಾಂವ ಮತ್ತು ಚನ್ನಪಟ್ಟಣ ಉಪಚುನಾವಣೆಯಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಇಡಿಯನ್ನ ಕೈ ಗೊಂಬೆ ಮಾಡಿಕೊಂಡಿದ್ದಾರೆ. ಎಲ್ಲಿ ಬಿಜೇಪಿಯೇತರ ಸರ್ಕಾರ ಇರುತ್ತದೋ, ಅಲ್ಲಿ ಸರ್ಕಾರವನ್ನ ತೆಗೆಯುವ ಪ್ರಯತ್ನ ಮಾಡಿದ್ತಿದ್ದಾರೆ. ಮೂರು ತಿಂಗಳಿಂದ ಜೈಲಿನಲ್ಲಿ ಇದ್ದೆ. ಇವತ್ತು ನ್ಯಾಯಾಧೀಶರು ಬಿಡುಗಡೆ ಮಾಡಿದ್ದಾರೆ. ಇವತ್ತು ಬಿಜೆಪಿ 66 ಜನ ಶಾಸಕರಿದ್ದಾರೆ. ಮುಂದೆ ಅದು ಇನ್ನು ಕಡಿಮೆ ಆಗುತ್ತದೆ ಎಂದರು.
'ನಾಗೇಂದ್ರ ಅವರ ಪ್ರಭಾವದಿಂದ ನಿಗಮದ ಖಾತೆಯನ್ನು ಯಾವುದೇ ಸೂಕ್ತ ಅನುಮತಿಯಿಲ್ಲದೆ ಎಂಜಿ ರಸ್ತೆ ಶಾಖೆಗೆ ಸ್ಥಳಾಂತರಿಸಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂ. ಸೇರಿದಂತೆ 187 ಕೋಟಿ ರೂ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಇಡಿ ಹೇಳಿಕೊಂಡಿದೆ.












Click it and Unblock the Notifications