ನಾಡಗೀತೆ ವಿವಾದ; ಸರ್ಕಾರದ ಶಾಸನಾತ್ಮಕ ಅಧಿಕಾರ ಪ್ರಶ್ನಿಸಿದ ಹೈಕೋರ್ಟ್
ಬೆಂಗಳೂರು, ಸೆ 2 : ನಾಡಗೀತೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸರ್ಕಾರಕ್ಕೆ ಯಾವ ರೀತಿಯ ಶಾಸನಾತ್ಮಕ ಅಧಿಕಾರವಿದೆ ಎಂದು ಪ್ರಶ್ನಿಸಿದೆ. ಸರ್ಕಾರ ಈ ಪ್ರಕರಣದಲ್ಲಿ ವಾದ ಮಂಡಿಸಲು ಯಾವಾಗ ಸಿದ್ಧ ಎಂದು ನ್ಯಾಯಪೀಠಕ್ಕೆ ಮುಂಚಿತವಾಗಿ ಮೆಮೊ ಸಲ್ಲಿಸಿದ ನಂತರ ವಿಚಾರಣೆ ಮುಂದುವರಿಸಲಾಗುವುದು ಎಂದು ಹೇಳಿತು.
ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆ 2 ನಿಮಿಷ 30 ಸೆಕೆಂಡ್ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ಈ ಪ್ರಕರಣದಲ್ಲಿ ಅರ್ಜಿದಾರರು ಎತ್ತಿರುವ ಪ್ರಶ್ನೆಯ ಅನುಸಾರ ಅವರ ತಮ್ಮ ಮನಸ್ಸಿಗೆ ಬಂದ ರಾಗದಲ್ಲಿ ಹಾಡಲು ನೀವೇಕೆ ನಿರ್ಬಂಧಿಸಿದ್ದೀರಿ ಎಂಬುದೇ ಆಗಿದೆ. ಅಂತೆಯೇ, ಸರ್ಕಾರ ಇಂತಹ ಆದೇಶ ಹೊರಡಿಸುವಾಗ ಅದಕ್ಕಿರುವ ಶಾಸನಾತ್ಮಕ ಅಧಿಕಾರಗಳೇನು ಮತ್ತು ಯಾರು, ಯಾವಾಗ ಎಂತಹ ಸಂದರ್ಭಗಳಲ್ಲಿ ನಿಮ್ಮ ಈ ನಿರ್ಬಂಧ ಪಾಲಿಸಬೇಕು ಎಂಬುದನ್ನು ವಿವರಿಸಿತು.
ಅರ್ಜಿದಾರರ ಪರ ವಕೀಲರು, ಜನಸಾಮಾನ್ಯರು ಇಂಥದೇ ರಾಗದಲ್ಲಿ ಹಾಡಬೇಕೆಂಬ ಷರತ್ತು ಸರಿಯಲ್ಲ. ರಾಜ್ಯ ಸರ್ಕಾರ ನಮ್ಮ ಸಂಗೀತದ ಸ್ವಾತಂತ್ರ್ಯ ಕಸಿದುಕೊಂಡಿದೆ. ಹಾಗಾಗಿ, ಸರ್ಕಾರ ಔಚಿತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಹಾಜರಾಗಿ ಸರ್ಕಾರ ಈ ಆದೇಶವನ್ನು ಸಂವಿಧಾನದ 162ನೇ ವಿಧಿಯಡಿ ತನಗಿರುವ ಪರಮಾಧಿಕಾರವನ್ನು ಬಳಸಿ ಇಂತಹುದೇ ರಾಗದಲ್ಲಿ ಹಾಡುವಂತೆ ನಿರ್ಬಂಧ ವಿಧಿಸಿದೆ.
ನಾಡಗೀತೆಗಳನ್ನು 1919ರಲ್ಲಿ ಒರಿಸ್ಸಾ ರಾಜ್ಯದಲ್ಲಿ, 1965ರಲ್ಲಿ ಆಂಧ್ರಪ್ರದೇಶ, 2004ರಲ್ಲಿ ಕರ್ನಾಟಕ ನಂತರ ಏಳು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಇನ್ನೈದು ರಾಜ್ಯಗಳಲ್ಲಿ ಅನಧಿಕೃತ ಶಾಲಾ ಕಾಲೇಜು, ರಾಜ್ಯ ಸರ್ಕಾರ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವ ಪರಿಪಾಠ ಇದೆ ಎಂದರು.
ಆದರೆ, ಯಾವ ರಾಜ್ಯದಲ್ಲೂ ನಾಡಗೀತೆ ಇಂಥದ್ದೇ ಧಾಟಿಯಲ್ಲಿ ಹಾಡಬೇಕೆಂಬುದಕ್ಕೆ ಕೈಗೊಳ್ಳಲಾದ ನಿರ್ಣಯದ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಲಾಗಿಲ್ಲ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹುದೊಂದು ಸಂದಿಗ್ಧವನ್ನು ಹೊಂದಿದ ಪ್ರಕರಣ ಇದಾಗಿದೆ. ಆದ್ದರಿಂದ, ಇದಕ್ಕೆ ತುಂಬಾ ಮಹತ್ವವಿದೆ' ಎಂದು ವಿವರಿಸಿದರು.












Click it and Unblock the Notifications