ಮೈಲಾರ ಧರ್ಮದರ್ಶಿ ವಿರುದ್ದ ಬಾಂಬ್ ಸಿಡಿಸಿದ ಕಾರ್ಣಿಕ ನುಡಿಯುವ ಗೊರವಜ್ಜ
ದೇವರು, ಭವಿಷ್ಯವನ್ನು ಅವಶ್ಯಕತೆಗಿಂತ ಜಾಸ್ತಿ ನಂಬುವ ಜನರನ್ನು ಯಾಮಾರಿಸುವ ಕೆಲಸ ನಡೆಯುತ್ತಲೇ ಇರುತ್ತದೆ. ಕೆಲವರು ಪ್ರಚಾರಕ್ಕಾಗಿ, ಇನ್ನಷ್ಟು ಜನ ದುಡ್ಡಿನ ಆಸೆಗಾಗಿ ಇಂತಹುವುದನ್ನು ಮಾಡುತ್ತಾರೆ. ಅದಕ್ಕೆ, ತಾಜಾ ಉದಾಹರಣೆಯೊಂದು ಸೇರ್ಪಡೆಯಾಗಿದೆ. ಅದು, ಅಂತಿಂತ ಕ್ಷೇತ್ರವಲ್ಲ, ಮೈಲಾರ ಲಿಂಗೇಶ್ವರ ಸನ್ನಿಧಾನ..
ಹೌದು, ಇತ್ತೀಚೆಗೆ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಸುಕ್ಷೇತ್ರ ಮೈಲಾರ ಲಿಂಗೇಶ್ವರನ ಸನ್ನಿಧಾನದ ಧರ್ಮದರ್ಶಿಯೊಬ್ಬರು ರಾಜ್ಯ ರಾಜಕಾರಣದ ಬಗ್ಗೆ ನುಡಿದಿದ್ದರು. ಇದು ದೈವವಾಣಿಯೆಂದೇ ಪ್ರಚಾರ ಪಡೆಯಿತು. ಈ ಬಗ್ಗೆ ಕಾರ್ಣಿಕ ನುಡಿಯುವವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಗಡ್ಡಧಾರಿಯೊಬ್ಬರು ಮುಂದೆ ಸಿಎಂ ಆಗಲಿದ್ದಾರೆ ಎಂದು ಅವರು ನುಡಿದಿದ್ದರು.
ಕೆಲವು ದಿನಗಳ ಹಿಂದೆ ಕೋಲಾರದಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, "ಈಗ ತಾನೇ ಮುಖ್ಯಮಂತ್ರಿಯಾಗಿದ್ದಾರೆ, ಅಪಶಕುನ ನುಡಿಯಲಾರೆ, ಆಷಾಢದಲ್ಲಿ ಹೇಳುವುದಿಲ್ಲ, ಶ್ರಾವಣ ಮಾಸದಲ್ಲಿ ಮಾತನಾಡುತ್ತೇನೆ" ಎಂದು ಪರೋಕ್ಷವಾಗಿ ಬೊಮ್ಮಾಯಿ ಸರಕಾರ ಅಲ್ಪಾಯುಶಿ ಎಂದಿದ್ದರು. ಹಾಗಾಗಿ, ಮೈಲಾರ ಧರ್ಮದರ್ಶಿ ಹೇಳಿದ ಮಾತಿಗೆ ವ್ಯಾಪಕ ಪ್ರಚಾರ ಸಿಕ್ಕಿತ್ತು.
ಇದಕ್ಕೆ ಕಾರಣಿಕ ನುಡಿಯುವ ಗೊರವಜ್ಜ ರಾಮಣ್ಣ ಮತ್ತು ದೇವಾಲಯದ ಸಿಬ್ಬಂದಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಅವರು ಪ್ರಚಾರಕ್ಕಾಗಿ ಸುಮ್ಮನೇ ಹೇಳುತ್ತಾರೆ. ಕಾರ್ಣಿಕ ನುಡಿಯುವುದಕ್ಕೆ ತಲತಲಾಂತರದಿಂದ ಬಂದ ಸಂಪ್ರದಾಯವಿದೆ ಎಂದು ಹೇಳಿದ್ದಾರೆ. ಗೊರವಜ್ಜ ಮತ್ತು ದೇವಾಲಯದ ಸಿಬ್ಬಂದಿ ಹೇಳಿದ್ದು ಹೀಗೆ:

ಮುತ್ತಿನ ರಾಶಿ ಮೂರು ಭಾಗವಾಯಿತೆಲೇ ಪರಾಕ್"ಎನ್ನುವ ಕಾರ್ಣಿಕ ನುಡಿದಿದ್ದೆವು
"ಹನ್ನೊಂದು ದಿನ ನಾವು ಉಪವಾಸ ಇರುತ್ತೇವೆ, ಇದಾದ ಮೇಲೆ ಕಾರ್ಣಿಕ ನುಡಿಯುವವರು ನಾವು. ಸುಮ್ಮನೆ ಪ್ರಚಾರ ಪಡೆದುಕೊಳ್ಳಲು ಧರ್ಮದರ್ಶಿಗಳಾದ ವೆಂಕಪ್ಪ ಒಡೆಯರ್ ಅವರು ಈ ರೀತಿ ಹೇಳುತ್ತಾರೆ. ಇದು ವರ್ಷಕ್ಕೊಮ್ಮೆ ನುಡಿಯಲಾಗುವ ಕಾರಣಿಕ, ವರ್ಷಕ್ಕೆ ಎರಡು ಬಾರಿ ಹೇಳಲು ಸಾಧ್ಯವಿಲ್ಲ. ಮುತ್ತಿನ ರಾಶಿ ಮೂರು ಭಾಗವಾಯಿತೆಲೇ ಪರಾಕ್ ಎನ್ನುವ ಕಾರ್ಣಿಕವನ್ನು ನಾವು ನುಡಿದಿದ್ದೆವು" ಎಂದು ಕಾರ್ಣಿಕ ನುಡಿಯುವ ಗೊರವಜ್ಜ ರಾಮಣ್ಣ ಹೇಳಿದ್ದಾರೆ.

ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ದೈವವಾಣಿ ಎಂದು ನುಡಿದಿದ್ದರು
"ರಾಜಕೀಯಕ್ಕೆ ಸಂಬಂಧ ಪಟ್ಟಂತೆ ನಾವು ಕಾರ್ಣಿಕ ನುಡಿದಿದ್ದು, ರಾಜಕೀಯ ಎನ್ನುವುದು ಮುತ್ತು, ಅದು ಮೂರು ಭಾಗವಾಯಿತು. ಪ್ರಚಾರಕ್ಕಾಗಿ ಇವರು ವರ್ಷಕ್ಕೆ ಎರಡು ಬಾರಿ ಕಾರ್ಣಿಕ ಎಂದು ಹೇಳುತ್ತಾರೆ" ಎಂದು ಗೊರವಜ್ಜ ಹೇಳಿದ್ದಾರೆ. "ಮೈಲಾರದಲ್ಲಿ ಭರತ ಹುಣ್ಣಿಮೆಯಂದು ನುಡಿದ ದೈವವಾಣಿ ‘ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್' ಎಂದಾಗಿತ್ತು. ಈಗಿರುವ ಬಿಜೆಪಿಯ ಸರಕಾರದಲ್ಲಿ ಮೂವರು ಸಿಎಂ ಆಗಲಿದ್ದಾರೆ ಎನ್ನುವುದು ಇದರರ್ಥ. ಗಡ್ಡಧಾರಿಯೊಬ್ಬರು ಮುಂದಿನ ಸಿಎಂ ಆಗಲಿದ್ದಾರೆ"ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದರು.

ಡಿಕೆಶಿಗೆ ಹೆಲಿಕಾಪ್ಟರ್ ಕ್ಷೇತ್ರದ ಮೇಲಿಂದ ಹಾರಿತು, ಬೆಳ್ಳಿಯ ವಿಮಾನ ಕೊಡಬೇಕು ಎಂದು ಹೇಳಿದ್ದರು
ಈಗ ಕಾರ್ಣಿಕ ನುಡಿಯುವವರ ತಂದೆ ಮತ್ತು ಅಣ್ಣ 24 ಬಾರಿ ಕಾರ್ಣಿಕ ನುಡಿದಿದ್ದರು, ಈಗಿನವರು ಏಳು ಬಾರಿ ಕಾರ್ಣಿಕ ನುಡಿದಿದ್ದಾರೆ. ಹಿಂದೆ, ಡಿ.ಕೆ.ಶಿವಕುಮಾರ್ ಅವರಿಗೆ ಹೆಲಿಕಾಪ್ಟರ್ ಕ್ಷೇತ್ರದ ಮೇಲಿಂದ ಹಾರಿತು, ಅದಕ್ಕೆ ಬೆಳ್ಳಿಯ ವಿಮಾನ ಕೊಡಬೇಕು ಎಂದು ಹೇಳಿದ್ದರು. ಅವರು ಅದನ್ನು ತಪ್ಪು ಕಾಣಿಕೆಯಾಗಿ ನೀಡಿದ್ದರು. ಇದೆಲ್ಲಾ ಸುಮ್ಮನೆ ಪ್ರಚಾರಕ್ಕಾಗಿ ವೆಂಕಪ್ಪನವರು ಈ ರೀತಿ ಹೇಳುತ್ತಿದ್ದಾರೆ"ಎಂದು ಕ್ಷೇತ್ರದ ಸಿಬ್ಬಂದಿಯಾದ ನಿಂಗಪ್ಪ ಹೇಳಿದ್ದಾರೆ.
Recommended Video

ಬಸವರಾಜ ಬೊಮ್ಮಾಯಿ ಮತ್ತು ಬೈರತಿ ಬಸವರಾಜು ಬಂದಾಗಲೂ ಸಿಎಂ ಎಂದಿದ್ದರು
"ಇಷ್ಟಲ್ಲದೇ ಯಾರೇ ರಾಜಕಾರಣಿ ಬಂದರೂ ಅವರಿಗೆ ಮುಂದೆ ನೀವು ಸಿಎಂ ಆಗುತ್ತೀಯಾ ಎಂದು ಹೇಳುತ್ತಾರೆ. ಒಮ್ಮೆ, ಈಶ್ವರಪ್ಪನವರು ಬಂದಿದ್ದರು ಅವರಿಗೂ ಅದೇ ಹೇಳಿದ್ದರು. ಇದಾದ ನಂತರ ಬಸವರಾಜ ಬೊಮ್ಮಾಯಿ ಮತ್ತು ಬೈರತಿ ಬಸವರಾಜು ಬಂದಾಗಲೂ ಇದನ್ನೇ ಹೇಳಿದ್ದರು. ಕಾರ್ಣಿಕ ನೀಡುವ ಗೊರವಯ್ಯ ಕುಟುಂಬಕ್ಕೆ ದೇವರು ಕೊಟ್ಟ ವರವದು. ಇದನ್ನು ಧರ್ಮದರ್ಶಿ ವೆಂಕಪ್ಪನವರು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ"ಎಂದು ನಿಂಗಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications