ಅಂಬಲಿ ಹಳಸೀತು, ಮೈಲಾರ ಜಾತ್ರೆಯಲ್ಲಿ ಗೊರವಪ್ಪನ ಭವಿಷ್ಯವಾಣಿ
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಳ್ಳಾರಿ ಜಿಲ್ಲೆಯ ಡೆಂಕನಮರಡಿಯಲ್ಲಿ ಐತಿಹಾಸಿಕ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಸೋಮವಾರ (ಫೆ 13) ಮುಕ್ತಾಯಗೊಂಡಿದೆ.
ಹೂವಿನಹಡಗಲಿ, ಫೆ 14: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಲ್ಲಿನ ಡೆಂಕನಮರಡಿಯಲ್ಲಿ ಐತಿಹಾಸಿಕ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಸೋಮವಾರ (ಫೆ 13) ಮುಕ್ತಾಯಗೊಂಡಿದೆ.
ಸೋಮವಾರ ಸಂಜೆ ಐದು ಗಂಟೆ ಸುಮಾರಿಗೆ ಕಾರಣಿಕ ನುಡಿದ ಗೊರವಪ್ಪ, ಹದಿನೈದು ಅಡಿಯ ಧನಸ್ಸನ್ನು ಏರಿ, ಮುಂದಿನ ಒಂದು ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ. (ಮೈಲಾರ ಕ್ಷೇತ್ರದ ಬಗ್ಗೆ)
' ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್' ಎಂದು ಗೊರವಪ್ಪ ಭವಿಷ್ಯ ನುಡಿಯುತ್ತಿದ್ದಂತೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಹನ್ನೊಂದು ದಿನಗಳ ಕಟ್ಟುನಿಟ್ಟಿನ ಉಪವಾಸ ಆಚರಿಸಿ ಗೊರವಪ್ಪ ಹಾಗೂ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನಮರಡಿಗೆ ಬಂದು ಭವಿಷ್ಯ ನುಡಿಯುವುದು ವಾಡಿಕೆ.
ಈ ಕಾರಣಿಕ ನೋಡಲೆಂದೇ ಅಕ್ಕಪಕ್ಕದ ಜಿಲ್ಲೆಗಳ ಲಕ್ಷಾಂತರ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಒಗಟಿನ ರೂಪದಲ್ಲಿ ನುಡಿಯಲಾಗುವ ಭವಿಷ್ಯವನ್ನು ಹಿರಿಯರು ವಿವರಿಸಿ ಹೇಳುತ್ತಾರೆ. ಸೋಮವಾರ ನುಡಿದ ಭವಿಷ್ಯವಾಣಿಯನ್ನು ಅರ್ಥೈಸಿದ್ದು ಹೀಗೆ.. ಮುಂದೆ ಓದಿ..
ದೇವರಗುಡ್ಡ ಗ್ರಾಮದ ಕರಿಯಾಲ
ಹೂವಿನಹಡಗಲಿ ಮೈಲಾರ ಲಿಂಗೇಶ್ವರನ ಜಾತ್ರೆಯ ವೇಳೆಯಲ್ಲಿ ಗೊರವಯ್ಯ ನುಡಿಯುವ ಕಾರ್ಣಿಕದಂತೇ, ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮದ ಕರಿಯಾಲದಲ್ಲಿ ದಸರಾ ಪ್ರಯುಕ್ತ ನಾಗಪಜ್ಜ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಗಲಾಟೆ, ಯುದ್ದದ ಭೀತಿ ದೇಶಕ್ಕೆ ಎದುರಾಗಲಿದೆ ಎಂದು ನಾಗಪಜ್ಜ ಉರ್ಮಿ ಕಳೆದ ದಸರಾದಂದು ಕಾರಣಿಕ ನುಡಿದಿದ್ದರು.
ಭವಿಷ್ಯವಾಣಿ ನುಡಿಯುವ ಗೊರವಪ್ಪ
ಹನ್ನೊಂದು ದಿನಗಳ ಉಪವಾಸದ ನಂತರ ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ ಮೂರ್ತಿಗಳನ್ನು ಮೆರವಣಿಗೆ ಮೂಲಕ ಡೆಂಕನಮರಡಿಗೆ ತಂದು, ಧರ್ಮದರ್ಶಿಗಳ ಆಶೀರ್ವಾದ ಪಡೆದ ಗೊರವಪ್ಪ, ಹದಿನೈದು ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲಕ್ಷಣ ಭಕ್ತಾದಿಗಳನ್ನು ದಿಟ್ಟಿಸಿ, ಸದ್ದಲೇ.. ಎಂದು ದೈವವಾಣಿ ನುಡಿದು ಅಲ್ಲಿಂದ ಜಿಗಿಯುತ್ತಾರೆ.
ಅಂಬಲಿ ಹಳಸೀತು ಕಂಬಳಿ ಬೀಸಿತಲೇ
' ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್' ಇದು ಈ ಬಾರಿ ಭವಿಷ್ಯವಾಣಿ ನುಡಿಯಲಾಯಿತು. ಈ ವರ್ಷ ಮಳೆಬೆಳೆ ಉತ್ತಮವಾಗಿದ್ದರೂ, ಅತಿವೃಷ್ಠಿಯಿಂದ ಬೆಳೆದಿದ್ದೆಲ್ಲಾ ನೀರು ಪಾಲಾಗುವ ಸಾಧ್ಯತೆಯಿದೆ ಎಂದು ಭವಿಷ್ಯವಾಣಿಯನ್ನು ವಿಶ್ಲೇಷಿಸಲಾಗಿದೆ.
ಮುತ್ತಿನಗಂಟು ಮೂರಾದೀತಲೇ
ಮುತ್ತಿನ ಗಂಟು ಮೂರಾದೀತಲೇ ಪರಾಕ್ ಎಂದು ಕಳೆದ ವರ್ಷ ಭವಿಷ್ಯ ನುಡಿಯಲಾಗಿತ್ತು. ರಾಜಕೀಯ, ಸಾಮಾಜಿಕ , ಮುಂಗಾರು ಮತ್ತು ಹಿಂಗಾರು ಮಳೆಯ ವಿಚಾರದಲ್ಲಿ ಈ ಭವಿಷ್ಯ ಅಶುಭ ಎಂದು ವ್ಯಾಖ್ಯಾನಿಸಲಾಗಿತ್ತು.
ಭಕ್ತಾದಿಗಳ ದಂಡೇ ಹರಿದು ಬಂದಿತ್ತು
ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಮೈಲಾರನ ಜಾತ್ರೆಗೆ ಈ ಬಾರಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಕಾರ್ಣಿಕೋತ್ಸವಕ್ಕಾಗಿ ಜಿಲ್ಲಾಡಳಿತ ವಿಶೇಷ ವ್ಯವಸ್ಥೆಯನ್ನು ಮಾಡಿತ್ತು. ಈ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗಿತ್ತು.