ನನ್ನ ಅಸಲಿ ರಾಜಕೀಯ ಆರಂಭವಾಗುವುದೇ 2023ರಿಂದ: ಏನಿದು ಕುಮಾರಣ್ಣನ ಗೂಡಾರ್ಥ
ಬೆಂಗಳೂರು, ಡಿ 21: ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ ಎನ್ನುವ ಸುದ್ದಿಗೆ ಸಿಕ್ಕಾಪಟ್ಟೆ ಮೈಲೇಜ್ ಸಿಕ್ಕನಂತರ, ಡ್ಯಾಮೇಜ್ ಕಂಟ್ರೋಲಿನ ಮುಂದಿನ ಭಾಗವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸ್ಪಷ್ಟನೆಯನ್ನು ನೀಡಿದ್ದಾರೆ.
ತಮ್ಮ ಜೆ.ಪಿ.ನಗರ ನಿವಾಸದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ರಾಜ್ಯಕ್ಕೆ ಒಳ್ಳೆಯದಾಗುವುದಾದರೆ ವಿಷಯಾಧಾರಿತ ಬೆಂಬಲ ನೀಡಲು ಜೆಡಿಎಸ್ ಬದ್ದವಾಗಿದೆ. ಆದರೆ, ಬಿಜೆಪಿ ಜೊತೆ ವಿಲೀನಗೊಳ್ಳುವ ವಿಚಾರ ಸುಳ್ಳು"ಎಂದು ಸ್ಪಷ್ಟನೆಯನ್ನು ನೀಡಿದರು.
ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಿಲ್ಲ ನಿಜ, ಆದರೂ.....!
ತಮ್ಮ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ದ ಅದರಲ್ಲೂ ಪ್ರಮುಖವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ ಕುಮಾರಣ್ಣ "ಏಕವಚನದಲ್ಲಿ ನಿಮಗಿಂತಲೂ ಚೆನ್ನಾಗಿ ನಾನು ಮಾತನಾಡಬಲ್ಲೆ. ಸುಮ್ಮನೇ ನನ್ನನ್ನು ಕೆದಕಿ ಯಾಕೆ ಮುಜುಗರ ಅನುಭವಿಸುತ್ತೀರಾ"ಎಂದು ಹೇಳಿದರು.
ಸೆಕ್ಯುಲರ್ ಕಾಂಗ್ರೆಸ್ಗೆ ಡಿಚ್ಚಿ ಹೊಡೆಯಲು ಬಿಜೆಪಿ ಹೈಕಮಾಂಡ್ ಪಾಲಿಗೆ ಕುಮಾರಣ್ಣನೇ ಬಂಡೆ
"ನನ್ನ ಅಸಲಿ ರಾಜಕೀಯ ಆರಂಭವಾಗುವುದೇ 2023ರಿಂದ" ಎನ್ನುವ ಕುಮಾರಸ್ವಾಮಿ ಹೇಳಿಕೆ, ಹಲವು ಚರ್ಚೆಗೆ ಕಾರಣವಾಗಿದೆ. 2023ರಲ್ಲಿ ಅಸೆಂಬ್ಲಿ ಚುನಾವಣೆ ಎದುರಾಗಲಿರುವುದರಿಂದ ಈ ಕಾರಣಕ್ಕಾಗಿ ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೋ ಅಥವಾ ಬೇರೆ ಏನಾದರೂ ರಾಜಕೀಯ ಇದರ ಹಿಂದೆ ಇದೆಯೋ?
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು
"ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು ಎಂದು ಹಲವು ಬಾರಿ ಹೇಳಿದ್ದೆ. ಸಿನಿಮಾ ರಂಗದಲ್ಲಿ ಹೆಚ್ಚಾಗಿ ನಾನು ಗುರುತಿಸಿಕೊಂಡವನು. ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಕಾರ್ಯಕರ್ತರ ಪ್ರೀತಿ, ರಾಜ್ಯದ ಜನತೆಯಿಂದ. ನನ್ನನ್ನು ಸಿಎಂ ಮಾಡಿ ಎಂದು ಯಾರ ಮನೆಬಾಗಿಲಿಗೂ ನಾನು ಹೋದವನಲ್ಲ"ಎನ್ನುವ ಮಾತನ್ನು ಕುಮಾರಸ್ವಾಮಿ ಪುನರುಚ್ಚಿಸಿದ್ದಾರೆ.
ನನ್ನ ಅಸಲಿ ರಾಜಕೀಯ ಆರಂಭವಾಗುವುದೇ 2023ರಿಂದ
"ನನ್ನ ಅಸಲಿ ರಾಜಕೀಯ ಆರಂಭವಾಗುವುದೇ 2023ರಿಂದ. ಬೇರು ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ನಾವು ಸಜ್ಜಾಗುತ್ತೇವೆ. ಸ್ವಂತ ಬಲದಿಂದ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವವರಿಗೆ ತಕ್ಕ ಉತ್ತರವನ್ನು ನೀಡಲಿದ್ದೇವೆ. ನಮ್ಮನ್ನೂ ಜನರು ಆಶೀರ್ವದಿಸಬಹುದು"ಎಂದು ಕುಮಾರಸ್ವಾಮಿ ವಿಶ್ವಾಸದ ಮಾತನ್ನಾಡಿದರು.
ಗ್ರಾಮ ಪಂಚಾಯತಿ ಚುನಾವಣೆ
"ಇಷ್ಟು ದಿನದ ನನ್ನ ರಾಜಕೀಯದ ಶೈಲಿ ಬೇರೆ, ಮುಂದಿನ ದಿನಗಳಲ್ಲಿ ನಮ್ಮ ರಾಜಕೀಯವೇ ಬೇರೆ ಇರಲಿದೆ. ಗ್ರಾಮ ಪಂಚಾಯತಿ ಚುನಾವಣೆಯ ಈ ಸಂದರ್ಭದಲ್ಲಿ ನಮ್ಮ ಪಕ್ಷ ವಿಲೀನಗೊಳ್ಳಲಿದೆ ಎನ್ನುವ ಸುದ್ದಿಯನ್ನು ಹರಿಯ ಬಿಡಲಾಯಿತು. ಯಾರ್ಯಾರು ಏನು ಮಾಡುತ್ತಿದ್ದಾರೆ ಎನ್ನುವ ವಿಚಾರ ನಮಗೆ ತಿಳಿದಿದೆ"ಎಂದು ಕುಮಾರಸ್ವಾಮಿ ಹೇಳಿದರು.
ಎರಡ್ಮೂರು ಬಾರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದು ಹೌದು
ನಾನು ಎರಡ್ಮೂರು ಬಾರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದು ಹೌದು. ಇದು ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ ಭೇಟಿಯಾಗಿದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ"ಎಂದು ಹೇಳಿರುವ ಕುಮಾರಸ್ವಾಮಿ, ಇದೇ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ವಿರುದ್ದವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.