ಕಾಂಗ್ರೆಸ್ ಜತೆಗಿರುವ ಮುಸ್ಲಿಮರು ಕೊಲೆಗಡುಕರು: ಈಶ್ವರಪ್ಪ ಹೊಸ ವಿವಾದ
ತುಮಕೂರು, ಜನವರಿ 31: ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆಎಸ್ ಈಶ್ವರಪ್ಪ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಕಾಂಗ್ರೆಸ್ ಜತೆ ಕೈ ಜೋಡಿಸಿದ 'ಮುಸ್ಲಿಮರು ಕೊಲೆಗಡುಕರು', ಬಿಜೆಪಿ ಜತೆಗೆ ಸಂಪರ್ಕ ಇರುವವರು ಮಾತ್ರ 'ಒಳ್ಳೆಯ ಮುಸ್ಲಿಮರು' ಎಂದು ಹೇಳಿಕೆ ನೀಡಿದ್ದಾರೆ.
"22 ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿದ ಮುಸ್ಲಿಮರು ಕಾಂಗ್ರೆಸ್ ಜತೆಗಿದ್ದಾರೆ. ಒಳ್ಳೆಯ ಮುಸ್ಲಿಮರೆಲ್ಲಾ ಬಿಜೆಪಿ ಜತೆಗಿದ್ದಾರೆ. ಯಾರೆಲ್ಲಾ ಕೊಲೆಗಡುಕ ಮುಸ್ಲಿಮರಿದ್ದಾರೋ ಅವರೆಲ್ಲಾ ಕಾಂಗ್ರೆಸ್ ಒಟ್ಟಿಗಿದ್ದಾರೆ," ಎಂದು ಈಶ್ವರಪ್ಪ ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕದಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ಮಾಡಲು ಪಿಎಫ್ಐ ಮತ್ತು ಅದರ ರಾಜಕೀಯ ಮುಖ ಎಸ್ ಡಿಪಿಐಗೆ ರಾಜ್ಯ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ಈಶ್ವರಪ್ಪ ಬಾಯಿಯಿಂದ ಈ ಹೇಳಿಕೆ ಹೊರ ಬಿದ್ದಿದೆ.
ಇದೇ ವೇಳೆ ಎಐಎಂಐಎಂ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೋಮವವಾರ ಹೇಳಿಕೆ ನೀಡಿದ್ದ ರಾಮಲಿಂಗಾ ರೆಡ್ಡಿ ನೇರವಾಗಿಯಲ್ಲದಿದ್ದರೂ ಓವೈಸಿ ಜತೆ ಬಿಜೆಪಿ ಪರೋಕ್ಷವಾಗಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳಿದ್ದರು.
ಒಂದೊಮ್ಮೆ ಈ ಹೇಳಿಕೆಗೆ ದಾಖಲೆ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಲು ಅರ್ಹತೆ ಇಲ್ಲದ ಕಾಂಗ್ರೆಸ್ ಸಮಾಜ ಒಡೆಯುವ ರಾಜಕಾರಣ ಮಾಡುತ್ತಿದೆ ಎಂದು ಈಶ್ವರಪ್ಪ ದೂರಿದ್ದಾರೆ.