ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ
ಮೈಸೂರು: ಮುಂಬೈ ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ನಡೆಸಲು ಭಾರತೀಯ ರೈಲ್ವೆ ಇಲಾಖೆ ಅನುಮತಿ ನೀಡಿದ್ದೇ ತಡ ಈ ಬಗ್ಗೆ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗಳು ಆಗುತ್ತಿವೆ. ಇದೀಗ ಸಾಂಸ್ಕೃತಿಕ ಮತ್ತು ಅರಮನೆ ನಗರಿ ಮೈಸೂರಿನಿಂದ ಓಡಿಸುವಂತೆ ಮೈಸೂರು ರಾಜವಂಶಸ್ಥ ಮತ್ತು ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಗ್ರಹಿಸಿದ್ದಾರೆ. ಮೈಸೂರಿನಿಂದ ಏಕೆ ಸಂಚರಿಸಬೇಕು? ಎಂಬುದಕ್ಕೆ ಅವರು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹುಬ್ಬಳ್ಳಿ ಸೇರಿ ವಿವಿಧ ಮಾರ್ಗವಾಗಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಟ ಟರ್ಮಿನಲ್ ವರೆಗೆ ಸಂಚರಿಸುವ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಇತ್ತೀಚೆಗೆ ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆ ಕಲಬುರಗಿ ಮಾರ್ಗವಾಗಿ ಸಂಚರಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಅದರ ಬೆನ್ನಲ್ಲೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಬದಲು ಮೈಸೂರು ನಿಲ್ದಾಣದಿಂದ ಓಡಿಸಲು ಹಾಗೂ ಮುಂಬೈನಿಂದ ಬರುವ ಸ್ಲೀಪರ್ ವಂದೇ ಭಾರತ್ ರೈಲು ಮೈಸೂರು ನಿಲ್ದಾಣದಲ್ಲಿ ಸಂಚಾರ ಕೊನೆಗೊಳಿಸುವಂತೆ ಅವರು ಕೋರಿದ್ದಾರೆ.

ಮೈಸೂರಿನಿಂದ ಯಾಕೆ ಓಡಿಸಬೇಕು?
ಪತ್ರದಲ್ಲಿ 'ದೀರ್ಘ ಪ್ರಯಾಣದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು-ಮುಂಬೈ ಮಧ್ಯೆ ವಂದೇ ಭಾರತ್ ಸ್ಲೀಪರ್ ರೈಲಿಗೆ ಅನುಮತಿ ನೀಡಿದ್ದಕ್ಕೆ ಸಂಸದರು ಧನ್ಯವಾದ ತಿಳಿಸಿದ್ದಾರೆ. ವಂದೇ ಭಾರತ್ ನಂತಹ ರೈಲುಗಳು ಓಡಿಸಲು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೊಂಡಿದೆ. ಇದೆಲ್ಲವು ರೈಲು ಕಾರ್ಯಾಚರಣೆಗೆ ಪೂರಕವಾಗಿದೆ.
ಸದರಿ ಬೆಂಗಳೂರಿನಿಂದ ಮುಂಬೈವರೆಗೆ ಕಾರ್ಯಾಚರಣೆ ಮಾಡಲು ಉದ್ದೇಶಿಸಿರುವ ಸ್ಲೀಪರ್ ವಂದೇ ಭಾರತ್ ರೈಲನ್ನು ಮೈಸೂರಿನಿಂದ ಓಡಿಸಬೇಕು. ಇದರಿಂದ ಮೈಸೂರು, ಕೊಡಗು ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ನಿತ್ಯ ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುವವರ ಪ್ರಮಾಣ ಬಹಳಷ್ಟಿದೆ ಅವರಿಗೆಲ್ಲ ಸಹಾಯವಾಗುತ್ತದೆ ಎಂದಿದ್ದಾರೆ.
ಮೈಸೂರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಮಾತ್ರವಲ್ಲದೇ ಪ್ರವಾಸೋದ್ಯಮ, ಆರ್ಥಿಕ ಕೇಂದ್ರವು ಹೌದು. ಇಲ್ಲಿಗೆ ದೇಶ ಮತ್ತು ವಿದೇಶಗಳಿಂದ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರ ಪ್ರಮಾಣ ಈ ವರ್ಷ ಹೆಚ್ಚಾಗಿದೆ. ಅಲ್ಲದೇ ಬೆಂಗಳೂರು-ಮೈಸೂರು ನಡುವೆ ಜನರ ನಿರಂತರ ಓಡಾಟ ಇದ್ದೆ ಇದೆ. ಮೈಸೂರು-ಬೆಂಗಳೂರು ಮಧ್ಯೆ ಉತ್ತಮ ರೈಲ್ವೆ ಮೂಲಸೌಕರ್ಯವಿದ್ದು, ಸ್ಲೀಪರ್ ವಂದೇ ಭಾರತ್ ರೈಲು ಸಂಚರಿಸಲು ಯೋಗ್ಯವಾಗಿದೆ. ಇಲ್ಲಿಂದ ರೈಲು ಪ್ರಯಾಣಿಸಿದರೆ ಈ ಭಾಗದ ನಾಗರಿಕರಿಗೆ, ಪ್ರವಾಸಿಗರಿಗೆ ಉತ್ತಮ ಮತ್ತು ವೇಗದ ಸಾರಿಗೆ ಸಿಕ್ಕಂತಾಗುತ್ತದೆ. ಈ ಭಾಗದ ಜನರ ಬಯಕೆಯು ಅದೇ ಆಗಿದೆ' ಎಂದು ಅವರು ರೈಲ್ವೆ ಸಚಿವರಿಗೆ ವಿವರಿಸಿದ್ದಾರೆ.
ಕರ್ನಾಟಕಕ್ಕೆ ಸಿಕ್ಕ ಮೊದಲ ಸ್ಲೀಪರ್ ವಂದೇ ಭಾರತ್
ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಗೆ ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರು ಬಿಟ್ಟರೆ, ರಾಯಚೂರು ಮತ್ತು ಕಲಬರಗಿ ಮಾರ್ಗವಾಗಿ ಸಂಚಾರ ಮಾಡಲಿದೆ. ರಾಜ್ಯದ ಮೂರು ಜಿಲ್ಲೆಗಳಿಗೆ ಇದರ ಪ್ರಯೋಜನ ಸಿಕ್ಕರೂ ಸಹಿತ ರಾಜ್ಯಕ್ಕೆ ಮೊದಲ ಸ್ಲೀಪರ್ ವಿಬಿ ರೈಲು ಸಿಕ್ಕಂತಾಗಿದೆ.
ಒಂದು ವೇಳೆ ಮೈಸೂರಿನಿಂದ ಸಂಚಾರ ಆರಂಭಿಸಿದ್ದೇ ಆದಲ್ಲಿ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿ ಹೆಚ್ಚುವರಿ ಜಿಲ್ಲೆಗಳಿಗೆ ಈ ರೈಲಿನ ಸೇವೆ ಸಿಕ್ಕಂತಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಶೀಘ್ರವೇ ಅಧಿಕೃತ ಸಮಯ, ನಿಲ್ದಾಣ, ಮಾರ್ಗದ ಸಂಪೂರ್ಣ ಮಾಹಿತಿ ಇರುವ ವೇಳಾಪಟ್ಟಿ ಪ್ರಕಟವಾಗಲಿದೆ.












Click it and Unblock the Notifications