ಯತ್ನಾಳ್ ಭವಿಷ್ಯದ ಬಗ್ಗೆ ರೇಣುಕಾಚಾರ್ಯ ಟ್ವೀಟ್!
ಬೆಂಗಳೂರು, ಮಾರ್ಚ್ 30; ಬಸನಗೌಡ ಪಾಟೀಲ್ ಯತ್ನಾಳ್ ಕರ್ನಾಟಕದ ಬಿಜೆಪಿ ನಾಯಕರಿಗೆ ಬಿಸಿತುಪ್ಪವಾಗಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಸದಾ ವಾಗ್ದಾಳಿಯನ್ನು ಅವರು ನಡೆಸುತ್ತಿದ್ದಾರೆ.
ಯತ್ನಾಳ್ ಯಡಿಯೂರಪ್ಪ ವಿರುದ್ಧ ಮಾತನಾಡಿದಾಗ ಮೊದಲು ಮುಖ್ಯಮಂತ್ರಿಗಳನ್ನು ಸಮರ್ಥನೆ ಮಾಡಿಕೊಳ್ಳುವುದು ಎಂ. ಪಿ. ರೇಣುಕಾಚಾರ್ಯ. ಹಲವು ಬಾರಿ ಬಹಿರಂಗವಾಗಿಯೇ ರೇಣುಕಾಚಾರ್ಯ ಯತ್ನಾಳ್ರನ್ನು ಟೀಕಿಸಿದ್ದಾರೆ.
ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಟ್ವೀಟ್ ವೊಂದನ್ನು ಮಾಡಿದ್ದಾರೆ. ಅವರ ಭವಿಷ್ಯದ ಬಗ್ಗೆ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯೊಂದನ್ನು ಉಲ್ಲೇಖಿಸಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ. "ನಿಮ್ಮ 'ಹಣೆಬರಹ' ಎಂಬ ಸಿಡಿ ನಾಡಿನ ಜನರ ಕೈಯಲ್ಲಿದೆ..!!" ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್, "ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೈವಾಡವಿದೆ" ಎಂದು ಆರೋಪಿಸಿದ್ದಾರೆ.
ನಿಮ್ಮ 'ಹಣೆಬರಹ' ಎಂಬ ಸಿಡಿ ನಾಡಿನ ಜನರ ಕೈಯಲ್ಲಿದೆ..!! pic.twitter.com/hOr0SO8vCJ
— M P Renukacharya (@MPRBJP) March 30, 2021
"ಸಿಡಿ ಕೇಸಿನಲ್ಲಿ ಇವರಿಬ್ಬರ ಕೈವಾಡವಿದೆ. ಒಬ್ಬರದು ಈಗಾಗಲೇ ಹೊರಬಂದಿದೆ. ಆದರೆ, ಇನ್ನೊಬ್ಬರು ರಾಜ್ಯದ ಮುಖ್ಯಮಂತ್ರಿಗಳ ಮಗ ಆಗಿರುವುದರಿಂದ ಹೊರಗೆ ಬಂದಿಲ್ಲ" ಎಂದು ಯತ್ನಾಳ್ ದೂರಿದ್ದಾರೆ.
"ಮುಖ್ಯಮಂತ್ರಿ ಹಾಗೂ ಡಿಕೆಶಿ ಅವರ ನಡುವೆ ಒಳ ಒಪ್ಪಂದವಿದೆ. ಡಿ. ಕೆ. ಶಿವಕುಮಾರ್ ಸಿಡಿ ಅವರ ಬಳಿ ಇದೆ. ಅವರ ಸಿಡಿ ಡಿ. ಕೆ. ಶಿವಕುಮಾರ್ ಅವರ ಬಳಿ ಇದೆ" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಎಂ. ಪಿ. ರೇಣುಕಾಚಾರ್ಯ ಅವರು ಈ ಹೇಳಿಕೆಗೆ ಟ್ವೀಟ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೆಯೂ ಹಲವು ಬಾರಿ ರೇಣುಕಾಚಾರ್ಯ ಯತ್ನಾಳ್ ವಿರುದ್ಧ ಟೀಕೆ ಮಾಡಿದ್ದರು.












Click it and Unblock the Notifications