ಹೆಗಲು ಮುಟ್ಟಿ ನೋಡಿಕೊಳ್ಳುವ ಸಚಿವರಿಗೆ ರೇಣುಕಾಚಾರ್ಯ ಪ್ರಶ್ನೆ!
ಬೆಂಗಳೂರು, ಫೆಬ್ರವರಿ 04; "ನಾನು ಶಾಸಕರ ಕೆಲಸಕಾರ್ಯಗಳನ್ನು ಮಾಡಿಕೊಡದ ಸಚಿವರ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿಯ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ತಮ್ಮ ವಿರೋಗಳಿಗೆ ಛಾಟಿ ಬೀಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಮಾತನಾಡಿದ ಅವರು, "ಅನೇಕ ಶಾಸಕರ ಕೆಲಸ ಕಾರ್ಯಗಳನ್ನು ಕೆಲವು ಸಚಿವರು ಮಾಡಿಕೊಟ್ಟಿಲ್ಲ ಎಂಬುದನ್ನು ಮುಖ್ಯಮಂತ್ರಿ ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಗಮನಕ್ಕೆ ತಂದಿದ್ದೇನೆ. ನಾನು ಯಾರ ಮೇಲೆಯೂ ಆರೋಪ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
"ಯಾವ ಸಚಿವರು ಸ್ಪಂದಿಸಿಲ್ಲವೋ, ದೂರವಾಣಿ ಕರೆಗಳನ್ನು ಸ್ವೀಕರಿಸಿಲ್ಲವೋ ಅಂಥವರ ಬಗ್ಗೆ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ನಾನೇನು ಯಾರ ಬಗ್ಗೆಯೂ ಲಿಖಿತವಾಗಿ ದೂರು ಕೊಟ್ಟಿಲ್ಲ. ನಮ್ಮ ಪಕ್ಷದ ಪ್ರಮುಖರ ಜೊತೆ ಹೇಳದೆ ವಿರೋಧ ಪಕ್ಷದ ನಾಯಕರ ಬಳಿ ಹೇಳಲು ಸಾಧ್ಯವೇ?" ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದರು.
'ಬೆಳಗಾವಿ ಶಾಸಕಾಂಗ ಸಭೆ ಹಾಗೂ ಈ ಹಿಂದೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಅನೇಕ ಬಾರಿ ಶಾಸಕಾಂಗ ಸಭೆಯಲ್ಲಿ ಶಾಸಕರ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ನೋವನ್ನು ತೋಡಿಕೊಂಡಿದ್ದರು. ಆಗಲೂ ಕೂಡ ಧ್ವನಿ ಎತ್ತಿದ್ದೆ. ಈಗಲೂ ಕೂಡ ಅದನ್ನೇ ಹೇಳಿದ್ದೇನೆ" ಎಂದು ತಮ್ಮ ಹೇಳಿಕೆಯನ್ನು ರೇಣುಕಾಚಾರ್ಯ ಸಮರ್ಥಿಸಿಕೊಂಡರು.

ಸಚಿವ ಸ್ಥಾನ ಬಿಟ್ಟು ಆಚೆ ಬರಲಿ
"ನಾನು ಇಂಥವರಿಂದ ನೀತಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಮೂರು ಬಾರಿ ಹೊನ್ನಾಳಿ ಕ್ಷೇತ್ರದಿಂದ ಗೆದ್ದು ಆಯ್ಕೆಯಾಗಿ ಬಂದಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಹೇಗೆ?, ಯಾರ ಬಳಿ ನಡೆದುಕೊಳ್ಳಬೇಕೆಂಬ ಕನಿಷ್ಟ ಜ್ಞಾನ ನನಗಿದೆ" ಎಂದು ಅವರು ತಿರುಗೇಟು ನೀಡಿದರು.
"ನಮಗೆ ನೈತಿಕತೆ ಹೇಳುವವರು ಒಂದು ಬಾರಿ ಸಚಿವ ಸ್ಥಾನ ಬಿಟ್ಟು ಆಚೆ ಬಂದು ಮಾತನಾಡಲಿ. ಆವಾಗ ಏನೆಂಬುದು ಗೊತ್ತಾಗುತ್ತದೆ. ನೈತಿಕತೆ ಹೇಳುವವರು ಮೊದಲು ಅವರು ಸರಿಯಾಗಿ ನಡೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ?" ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
"ನಾನು ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾನೆ. ಹೋರಾಟ ಮಾಡಿ ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಮಾಜಿ ಪ್ರಧಾನಿ, ದೇಶ ಕಂಡ ಅಪ್ರತಿಮ ಸಂಸದೀಯ ಪಟು ಅಟಲ್ ಬಿಹಾರಿ ವಾಜಪೇಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನಂತವರು ಆದರ್ಶ ವ್ಯಕ್ತಿಗಳು" ಎಂದು ಹೇಳಿದರು.

ಸೋಮವಾರ ದೆಹಲಿಗೆ ಹೋಗುತ್ತೇನೆ
"ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನನಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಸೋಮವಾರ ದೆಹಲಿಗೆ ಹೋಗುತ್ತೇನೆ. ನಾನು ಅಲ್ಲಿಗೆ ಹೋಗುವುದರಿಂದ ಭಾರೀ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆ ಬೇಡ" ಎಂದರು.
"ನಾನು ಕೆಲವು ಮಾಹಿತಿಯನ್ನು ಹೇಳದಿದ್ದರೆ ಅದು ಆತ್ಮವಂಚನೆಗೆ ಮಾಡಿಕೊಂಡಂತೆ. ದೆಹಲಿಗೆ ಹೋದ ಸಂದರ್ಭದಲ್ಲಿ ಶಾಸಕರ ಕೆಲಸಕಾರ್ಯಗಳನ್ನು ಮಾಡಿಕೊಡದ ಸಚಿವರ ಬಗ್ಗೆ ನೂರಕ್ಕೆ ನೂರರಷ್ಟು ಹೇಳೇತೀರುತ್ತೇನೆ. ಪಕ್ಷದ ವೇದಿಕೆಯಲ್ಲಿ ಹೇಳಲು ನಮಗೇನೂ ಮುಜುಗರವಿಲ್ಲ" ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
"ವರಿಷ್ಠರನ್ನು ಭೇಟಿಯಾದಾಗಲು ಕೆಲವು ಸಚಿವರ ಕಾರ್ಯ ವೈಖರಿಯನ್ನು ಅವರ ಗಮನಕ್ಕೆ ತರುತ್ತೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಕಾರಕ್ಕೆ ಬರಬೇಕೆಂದರೆ ಎಲ್ಲ ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದರು.

ನಮ್ಮ ಕೆಲಸ ಆಗದಿದ್ದರೆ ಹೇಗೆ?
"ನಾವು ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಕೊಡಿ ಎಂದು ಸಚಿವರ ಬಳಿ ಕೇಳುತ್ತೇವೆ. ಇದರಲ್ಲಿ ಯಾವುದೇ ಹಿತಾಸಕ್ತಿಯೂ ಇಲ್ಲ. ನಮ್ಮದೇ ಪಕ್ಷ ಸರ್ಕಾರದಲ್ಲಿದ್ದಾಗ ನಮ್ಮ ಕೆಲಸಗಳು ಆಗದಿದ್ದರೆ ಹೇಗೆ? ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದರು.
"ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆಯುವ ಬದಲು ಯಾವ ಸಚಿವರು ಎಂದು ಹೇಳಲಿ" ಎಂಬ ಸಚಿವ ಬಿ. ಸಿ. ಪಾಟೀಲ್ ಹೇಳಿಕೆಗೂ ತಿರುಗೇಟು ನೀಡಿದ ರೇಣುಕಾಚಾರ್ಯ, "ಮೊದಲು ನಿಮ್ಮ ಇಲಾಖೆಯ ಕೆಲಸಗಳನ್ನು ನೋಡಿಕೊಳ್ಳಿ" ಎಂದು ಕೆಂಡಕಾರಿದರು.

ಸಚಿವರನ್ನು ಕೈ ಬಿಡಲು ಆಗ್ರಹ
ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕಳೆದ ಭಾನುವಾರ ಕೆಲವು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ಶಾಸಕರಿಗೆ ಸುಳ್ಳು ಹೇಳಿಕೊಂಡು, ಜನರ ಕೈಗೆ ಸಿಗದ 15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ" ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.
"ದುರಹಂಕಾರಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದೇನೆ" ಎಂದು ಹೇಳಿಕೆ ನೀಡಿದ್ದರು.












Click it and Unblock the Notifications