ಮಾತೃಭಾಷೆ ಶಿಕ್ಷಣ ಬೇಗ ಕಲಿಯಲು ಸಹಕಾರಿ: ಥಾವರ್ ಚಂದ್ರ ಗೆಹಲೋಟ್
ರಾಮನಗರ,ಜನವರಿ 17: ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಮಕ್ಕಳು ಬೇಗ ಗ್ರಹಿಸಲು ಹಾಗೂ ಕಲಿಯಲು ಸಹಕಾರಿಯಾಗುತ್ತದೆ. ಹೀಗಾಗಿ ಈ ಕಾರಣದಿಂದ ಮಾತೃಭಾಷಾ ಶಿಕ್ಷಣ ಅವಶ್ಯಕವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ರ ಗೆಹಲೋಟ್ ಅಭಿಪ್ರಾಯಪಟ್ಟರು.
ರಾಮನಗರದ ಜಿಲ್ಲೆಯ ಕನಕಪುರ ತಾಲೂಕಿನ ಹುಯ್ಯಂಬಳ್ಳಿ ಹೋಬಳಿಯ ಮರಳೇಗವಿ ಮಠದಲ್ಲಿ ಹಮ್ಮಿಕೊಂಡಿದ್ದ ನೂತನ ಕಟ್ಟಡಗಳ ಅನಾವರಣ ಹಾಗೂ ಕಾಲಾಗ್ನಿ ರುದ್ರಮುನಿ ಮಹಾಸ್ವಾಮೀಜಿ ಅವರ ೧೪ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆ ಮತ್ತು ಪೈಪೋಟಿ ಯುಗದಲ್ಲಿ ನಮ್ಮ ಮಕ್ಕಳನ್ನು ಶಿಕ್ಷಣ ಸಂಪನ್ನ ಗೊಳಿಸಬೇಕಿದ್ದು, ಮಾತೃಭಾಷೆ ಶಿಕ್ಷಣದ ಮೂಲಕ ಅವರಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಜೊತೆಗೆ ಮಕ್ಕಳ ವಿಕಾಸಕ್ಕೆ ನೆರವಾಗಬೇಕು ಎಂದರು.
ಇನ್ನೂ ಪ್ರಧಾನಮಂತ್ರಿಗಳು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಿಂದಾಗಿ ಭಾರತವನ್ನು ಮತ್ತಷ್ಟು ವಿಶ್ವವಿಖ್ಯಾತ ಗೊಳಿಸಲಾಗುವುದು. ಪ್ರಧಾನ ಮಂತ್ರಿಗಳ ನವ ಭಾರತ, ಶ್ರೇಷ್ಠಭಾರತ, ಆತ್ಮನಿರ್ಭರ ಭಾರತಕ್ಕೆ ಶಿಕ್ಷಣವೇ ಅಡಿಗಲ್ಲಾಗಿದ್ದು, ಶಿಕ್ಷಣ ಕ್ಷೇತ್ರವನ್ನು ಉಜ್ವಲಗೊಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ವಿಶ್ವಗುರುವಾಗಿ ಪ್ರಜ್ವಲಿಸುತ್ತಿರುವ ಭಾರತದ ಕೀರ್ತಿಪತಾಕೆ ಮತ್ತಷ್ಟು ಎತ್ತಕ್ಕಾರಬೇಕು ಎಂದಲ್ಲಿ ಶೈಕ್ಷಣಿಕ ಪ್ರಗತಿ ಬಹುಮುಖ್ಯವಾಗಿದೆ. ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮಠಮಾನ್ಯಗಳು ಸರಕಾರದ ಜೊತೆಗೆ ಕೈಜೋಡಿಸ ಬೇಕು.ವಿಶ್ವಮಟ್ಟದ ಸ್ವರ್ಧೆಗೆ ನಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಿದೆ. ದೇಶವನ್ನು ವಿಶ್ವದ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದಕ್ಕೆ ಇರುವ ಏಕೈಕ ಸಾಧನವೆಂದರೆ ಶಿಕ್ಷಣ ಮಾತ್ರ ಎಂದು ತಿಳಿಸಿದರು.
ದೇಶಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ
ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಾಕಷ್ಟು ಪ್ರಾಚೀನವಾಗಿದ್ದು, ಇಡೀ ಜಗತ್ತಿಗೆ ಮಾದರಿಯಾದ ಸಂಸ್ಕೃತಿಯನ್ನು ನಾವು ಹೊಂದಿದ್ದೇವೆ ಎಂದರೆ ಅದಕ್ಕೆ ನಮ್ಮ ದೇಶದ ಋಷಿಮುನಿಗಳು, ಸಾಧುಸಂತರ ಕೊಡುಗೆ ಕಾರಣ. ನಮ್ಮಲ್ಲಿ ಉತ್ತಮ ಆಧ್ಯಾತ್ಮಿಕ ಭಾವನೆಯನ್ನು ಮೂಡಿಸಿದ ಸಾಧು ಸಂತರ ಸೇವೆಯನ್ನು ನಾವೆಲ್ಲ ಅನುಕಾಲ ಸ್ಮರಿಸಬೇಕು ಎಂದು ಅಭಿಪ್ರಾಯಪಟ್ಟರಲ್ಲದೆ. ಮರಳೆಗವಿ ಮಠದ ಶೈಕ್ಷಣಿಕ ಸಾಧನೆಯ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.
ಕನಕಪುರದ ಮುಕುಟ ಮಣಿಗಳು
ಇನ್ನೂ ಈ ವೇಳೆ ವಸತಿ ಸಚಿವ ವಿ ಸೋಮಣ್ಣ ಮಾತನಾಡಿ, ಈ ನೆಲದಲ್ಲಿ ಅನ್ನ, ಅಕ್ಷರ ಮತ್ತು ಆಶ್ರಯದ ದಾಸೋಹ ನಡೆಸುತ್ತಾ ಬಂದಿರುವ ದೇಗುಲ ಮಠ ಮತ್ತು ಮರಳೇಗವಿ ಮಠ ಮತ್ತು ಎಸ್.ಕರಿಯಪ್ಪ ಅವರು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆ ಕನಕಪುರದ ಮುಕುಟ ಮಣಿಗಳಿದ್ದಂತೆ. ಈನೆಲದಲ್ಲಿ ನಿರಂತರವಾಗಿ ಅರಿವಿನ ಬೀಜ ಬಿತ್ತುತ್ತಾ ಬಂದಿರುವ ಮರಳೇಗವಿ ಮಠದ ಕಾರ್ಯವನ್ನು ತಿಳಿಸಲು ಪದಗಳು ಸಾಲುವುದಿಲ್ಲ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮರಳೇಗವಿ ಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಸಿಇಓ ದಿಗ್ವಿಜಯ್ಬೋಡ್ಕೆ, ಮಠದ ಭಕ್ತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.