ತಂದೆಯಿಂದ ಅತ್ಯಾಚಾರ, ತಾಯಿಯಿಂದ ಕೊಲೆ
ರಾಮನಗರ, ಜು. 2 : ಮಲತಾಯಿಯೊಬ್ಬಳು ಮಗಳಿಗೆ ವಿಷಹಾಕಿ ಕೊಲೆ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಮಲತಾಯಿ ಮತ್ತು ಮೃತ ಬಾಲಕಿಯ ತಂದೆಯನ್ನು ಮಂಗಳವಾರ ಬಂಧಿಸಿದ್ದಾರೆ.
ಮೃತ ಬಾಲಕಿ ಶಾಂಭವಿ (11) ಮೇಲೆ ತಂದೆ ಹಾಗೂ ಆತನ ಸ್ನೇಹಿತ ಅತ್ಯಾಚಾರ ಮಾಡಿದ್ದರು. ಈ ಘಟನೆಯನ್ನು ಆಕೆ ಬೇರೊಬ್ಬರರಿಗೆ ಹೇಳಬಹುದು ಎಂದು ಶಂಕಿಸಿದ ಮಲತಾಯಿ, ಅನ್ನದಲ್ಲಿ ವಿಷ ಬೆರೆಸಿ ಬಾಲಕಿಗೆ ತಿನ್ನಿಸಿ ಕೊಲೆ ಮಾಡಿದ್ದಾರೆ.

ಬಾಲಕಿ ತಂದೆ ರಾಜಣ್ಣ, ಸ್ನೇಹಿತ ಬಿಸೇಗೌಡ ಹಾಗೂ ಮಲತಾಯಿ ಮುನಿರತ್ನಮ್ಮ ಅವರನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ರಾಮನಗರ ಎಸ್ಪಿ ಅನುಪಮ್ ಅಗರ್ ವಾಲ್ ಹೇಳಿದ್ದಾರೆ. ಜೂ.8ರಂದು ಬಾಲಕಿ ಕೊಲೆಗೆ ಯತ್ನಿಸಲಾಗಿತ್ತು ಅಸ್ವಸ್ಥಗೊಂಡ ಬಾಲಕಿ ಜೂ.19ರಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. [ತಾಯಿ ಕೊಲೆಗಾರನನ್ನು ಪೊಲೀಸರಿಗೆ ಹಿಡಿದುಕೊಟ್ಟ ಮಗ]
ಘಟನೆ ವಿವರ : ರಾಜಣ್ಣ ಹಾಗೂ ಮುನಿರತ್ನಮ್ಮ ಬೆಂಗಳೂರು ಮೂಲದವರಾಗಿದ್ದು, ವಂದಾರಗುಪ್ಪೆ ಗ್ರಾಮದಲ್ಲಿ ಬೆಂಗಳೂರು ಮೂಲದ ಆನಂದ್ ಎಂಬುವವರ ಮಾವಿನ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಮೃತ ಶಾಂಭವಿ, ರಾಜಣ್ಣನ ಮೊದಲ ಪತ್ನಿಯ ಮಗಳು. ತನ್ನ ಮಗಳ ಮೇಲೆ ಮೋಹಗೊಂಡಿದ್ದ ರಾಜಣ್ಣ, ಕೆಲವು ದಿನಗಳ ಹಿಂದೆ ಕುಡಿದು ಬಂದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.
ರಾಜಣ್ಣನ ಸ್ನೇಹಿತರಾಗಿದ್ದ ಬಿಸೇಗೌಡ ಮತ್ತು ಮುನಿರತ್ನಮ್ಮ ನಡುವೆ ಅಕ್ರಮ ಸಂಬಂಧವಿತ್ತು ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ. ಆಗಾಗ್ಗೆ ರಾಜಣ್ಣನ ಮನೆಗೆ ಬಂದು ಹೋಗುತ್ತಿದ್ದ ಬೀಸೇಗೌಡನಿಗೆ ರಾಜಣ್ಣ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ ವಿಷಯ ತಿಳಿದಿತ್ತು.
ಜೂನ್ 7ರಂದು ಶಾಂಭವಿ ಮೇಲೆ ರಾಜಣ್ಣ ಹಾಗೂ ಬಿಸೇಗೌಡ ಇಬ್ಬರೂ ಅತ್ಯಾಚಾರ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಅತ್ಯಾಚಾರದ ವಿಷಯವನ್ನು ಶಾಂಭವಿ ಯಾರಿಗಾದರೂ ಹೇಳಬಹುದು ಎಂಬ ಕಾರಣದಿಂದ ಮುನಿರತ್ನಮ್ಮ ಅನ್ನದಲ್ಲಿ ವಿಷ ಪ್ರಾಶನ ಮಾಡಿ ಶಾಂಭವಿಗೆ ನೀಡಿದ್ದಾರೆ.
ಅಸ್ವಸ್ಥಗೊಂಡ ಶಾಂಭವಿಯನ್ನು ಜೂನ್ 8ರಂದು ರಾಜಣ್ಣ ಮತ್ತು ಮುನಿರತ್ನಮ್ಮ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಪರಾರಿಯಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಜೂನ್ 19ರಂದು ಮೃತಪಟ್ಟಿದ್ದಳು.












Click it and Unblock the Notifications