ಇ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡಗಳು ಹೊರಕ್ಕೆ : ಸ್ಟೋಟಕ ಹೇಳಿಕೆ ನೀಡಿದ ಶ್ರೀರಾಮುಲು
ಬೆಂಗಳೂರು, ಜುಲೈ 11: ವಾಲ್ಮೀಕಿ ನಿಗಮದ ಹಗರಣದ ಸಂಬಂಧ ಇ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡಗಳು ಹೊರಕ್ಕೆ ಬರಲಿದೆ ಎಂದು ರಾಜ್ಯದ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸ್ಟೋಟಕ ಹೇಳಿಕೆಯನ್ನ ನೀಡಿದ್ದಾರೆ.
ಈ ಕುರಿತು ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದಂತೆ ಎಂಬಂತೆ ಈ ಸರಕಾರ ವರ್ತಿಸುತ್ತಿದೆ. ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಬುಡಕಟ್ಟು ಸಮುದಾಯ, ಪರಿಶಿಷ್ಟ ಸಮುದಾಯಕ್ಕೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಪಡಿಸುವ ಉದ್ದೇಶದಿಂದ ರಚಿಸಲಾಗಿತ್ತು ಎಂದು ನೆನಪಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಎಸ್ಸಿ, ಎಸ್ಟಿ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಹಲವು ತಿಂಗಳಿನಿಂದ ಬಿಜೆಪಿ ಹೋರಾಟ ನಡೆದಿದೆ. ನಾಗೇಂದ್ರ ಅವರ ಮನೆಯ ಮೇಲೆ, ಆಸ್ತಿಗಳ ಮೇಲೆ ಇ.ಡಿ. ದಾಳಿ ಮಾಡಿದೆ. ಅನೇಕ ದಾಖಲಾತಿಗಳ ಪರಿಶೀಲನೆ ನಡೆದಿದೆ ಎಂದು ವಿವರಿಸಿದರು.
ಒಂದೆಡೆ ಎಸ್ಐಟಿ ವಿಚಾರಣೆಯೂ ಇದೆ ಎಂದ ಅವರು, ಇ.ಡಿ. 18 ಕಡೆಗಳಲ್ಲಿ ದಾಳಿ ನಡೆಸಿದೆ. ಯೂನಿಯನ್ ಬ್ಯಾಂಕಿನವರು ಸಿಬಿಐಗೆ ದೂರು ಕೊಟ್ಟ ಕಾರಣ ಅದರ ಆಧಾರದಲ್ಲಿ ಇ.ಡಿ. ದಾಳಿ ನಡೆಯುತ್ತಿರಬಹುದು ಎಂದು ಅವರು ತಿಳಿಸಿದರು.
ವಾಲ್ಮೀಕಿ ನಿಗಮದಿಂದ ನಾಗೇಂದ್ರರ ಪಿ.ಎ. ಆಗಿದ್ದ ಹರೀಶ್ ಎಂಬವರ ಖಾತೆಗೆ 80 ಲಕ್ಷ ಹಣ ವರ್ಗಾವಣೆ ಆಗಿದೆ ಎಂದ ಅವರು, ಇಡಿಯನ್ನು ಆಹ್ವಾನಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ದಾಳಿ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಸರಕಾರವು ಈ ದೊಡ್ಡ ಹಗರಣದ ಭಾಗೀದಾರ ಎಂದು ಆರೋಪಿಸಿದರು.
ರಾಜ್ಯದ ಜನರು ನಾಚಿಕೆ ಇಲ್ಲದ ಸರಕಾರ ಎನ್ನುತ್ತಿದ್ದಾರೆ. ಕಳ್ಳರ ಸರಕಾರ ಎಂದು ಮಾತನಾಡುತ್ತಿದ್ದಾರೆ. ದರೋಡೆ ನಡೆದ ನಂತರ ಕಳ್ಳರನ್ನು ಹಿಡಿಯಬೇಕಿದೆ. ಇ.ಡಿಯವರು ಬಂದು ಕಳ್ಳರ ಉಪಾಧ್ಯಕ್ಷನನ್ನು ಹಿಡಿದಿದ್ದಾರೆ. ಅಧ್ಯಕ್ಷರು ಯಾರು ಎಂದು ಗೊತ್ತಾಗಿಲ್ಲ ಎಂದು ವಿಶ್ಲೇಷಿಸಿದರು. ಅಧ್ಯಕ್ಷರ ಪತ್ತೆಗೆ ಇ.ಡಿ. ಮುಂದಾಗಿದೆ ಎಂದರು.
ಕಾಂಗ್ರೆಸ್ ಸರಕಾರ ದಲಿತ ವಿರೋಧಿ: ಸುನೀಲ್ಕುಮಾರ್
ಕರ್ನಾಟಕದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ದಲಿತ ವಿರೋಧಿ ಎಂಬುದಾಗಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಅಭಿಪ್ರಾಯಪಟ್ಟಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಬಳಕೆ ಆಗಬೇಕಾದ ಹಣವನ್ನು ಕಾಂಗ್ರೆಸ್ ನುಂಗಿಹಾಕಿದೆ. ಅದೇರೀತಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಬಳಸಬೇಕಾದ ಎಸ್ಇಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ದೊಡ್ಡ ಪ್ರಮಾಣದಲ್ಲಿ 2 ಸಮುದಾಯಗಳಿಗೆ ಈ ಸರಕಾರ ಅನ್ಯಾಯ ಮಾಡಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದರು.
ಬಿಜೆಪಿ ಸರಕಾರ ಈ ವರ್ಗಗಳ ಮೀಸಲಾತಿಯನ್ನು ಜಾಸ್ತಿ ಮಾಡಿ ಅವರ ಕಲ್ಯಾಣಕ್ಕೆ ಮುಂದಾಗಿತ್ತು. ಆದರೆ, ಇವತ್ತಿನ ಕಾಂಗ್ರೆಸ್ ಸರಕಾರವು ದಲಿತರ ಹೆಸರನ್ನು ಹೇಳುತ್ತ ದಲಿತರ ಹಣವನ್ನು ನುಂಗಲು ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಇದರ ಪ್ರಯತ್ನದ ಕ್ಯಾಪ್ಟನ್ ಆಗಿ ಸಿದ್ದರಾಮಯ್ಯ ಅವರು ಇದ್ದರೆ, ಸಚಿವ ಸಂಪುಟವು ದಲಿತರ ಹಣವನ್ನು ನುಂಗಿ ಹಾಕಲು ಸಹಮತ ವ್ಯಕ್ತಪಡಿಸಿದ್ದು ವಿಷಾದದ ಸಂಗತಿ ಎಂದು ನುಡಿದರು.
ಇದು ಹಗರಣಗಳ ಸರಕಾರ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಎಸ್ಇಪಿ, ಟಿಎಸ್ಪಿ ಹಗರಣ, ಕಾರ್ಮಿಕ ಇಲಾಖೆಯ ಹಗರಣ- ಇದು ಹಗರಣಗಳ ಸರಮಾಲೆಯ ಮತ್ತು ಅಭಿವೃದ್ಧಿ ಶೂನ್ಯವಾದ ಸರಕಾರ ಎಂದು ಟೀಕಿಸಿದರು.












Click it and Unblock the Notifications