ಕರ್ನಾಟಕದ ಕರಾವಳಿಯಲ್ಲಿ ಮುಂದುವರಿಯಲಿದೆ ವರುಣನ ಅಬ್ಬರ
Recommended Video
ಬೆಂಗಳೂರು, ಜುಲೈ 7: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕರ್ನಾಟಕ ಭಾಗಗಳಲ್ಲಿ ಶನಿವಾರ ಭಾರಿ ಮಳೆಯ ಸಾಧ್ಯತೆ ಇದ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿ, ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗದ ಹಲವೆಡೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಮೋಡ ಕವಿದ ಬಾನು,ಇಣುಕುವ ಸೂರ್ಯ, ಪಕ್ಷಿಯ ಸ್ವಚ್ಛಂದ ಹಾರಾಟ
ಬೆಂಗಳೂರು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುವ ನಿರೀಕ್ಷೆಯಿದೆ. ಬಿಸಿಲು ಕೂಡ ಇರಲಿದೆ.
ಕಳೆದ 24 ಗಂಟೆಗಳಲ್ಲಿ ನೈಋತ್ಯ ಮುಂಗಾರು ದಕ್ಷಿಣ ಕೊಂಕಣ ಮತ್ತು ಗೋವಾ ಹಾಗೂ ಕರಾವಳಿ ಕರ್ನಾಟಕದ ಉತ್ತರ ಭಾಗಗಳಲ್ಲಿ ಭಾರಿ ಮಳೆ ಸುರಿಸಿದೆ.
ಕರ್ನಾಟಕ ಒಳನಾಡು, ಕೇರಳ, ಮಧ್ಯಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಅಸ್ಸಾಂ, ಬಿಹಾರ, ಬಂಗಾಳ ಕೊಲ್ಲಿಯ ವಾಯವ್ಯ ಭಾಗ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಡುವಣ ಕರಾವಳಿ ತೀರ, ಛತ್ತೀಸಗಡ ರಾಜ್ಯಗಳಲ್ಲಿ ಚಂಡಮಾರುತದ ಪ್ರಭಾವ ಉಂಟಾಗುವ ಸಾಧ್ಯತೆ ಇದ್ದು, ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರುವ ಅಪಾಯವಿದೆ.
ಅರಬ್ಬಿ ಸಮುದ್ರದ ಕರಾವಳಿಯಲ್ಲಿ ಬಿರು ಮಳೆ ಸುರಿಯಲಿದ್ದು, ಮುಂದಿನ 3-4 ದಿನ ಇದೇ ಪರಿಸ್ಥಿತಿ ಇರಲಿದೆ. ನೈಋತ್ಯ ಮಾರುತಗಳು ಸಂಪೂರ್ಣ ಭಾರತವನ್ನು ಆವರಿಸಿರುವುದರಿಂದ ದೇಶದ ಇತರೆ ಭಾಗಗಳಲ್ಲಿಯೂ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯ ವಾಯವ್ಯ ಭಾಗದಲ್ಲಿನ ಚಂಡಮಾರುತದ ಲಕ್ಷಣಗಳು ಕಂಡುಬಂದಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ವಿಪರೀತ ಮಳೆಯಾಗಲಿದೆ.
ಛತ್ತೀಸಗಡ, ಕೇಂದ್ರ ಭಾರತದ ಕೆಲವು ಭಾಗಗಳು ಮುಂತಾದೆಡೆ ಮುಂದಿನ ಮೂರು ನಾಲ್ಕು ದಿನಗಳಲ್ಲಿ ಮಳೆ ಹೆಚ್ಚಾಗಲಿದೆ.
ಅಮೃತಸರ, ಚಂಡಿಗಡ, ಷಹಜಾನ್ಪುರ, ಗೋರಖ್ಪುರ, ನವಾಡ, ಬಂಕುರ, ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಭಾಗಗಳಲ್ಲಿ ಸಮುದ್ರ ಮಟ್ಟಕ್ಕೆ ಸಮನಾಗಿ ಮಾರುತಗಳು ಆವರಿಸಿವೆ.
ಅರಬ್ಬಿ ಸಮುದ್ರದ ಕೇಂದ್ರ ಭಾಗದಲ್ಲಿ ಕಡಲ ಪರಿಸ್ಥಿತಿ ಮುಂದಿನ 3-4 ದಿನ ಇದೇ ರೀತಿ ಕಠಿಣವಾಗಿರಲಿದೆ. ಈ ನಿರ್ದಿಷ್ಟ ಅವಧಿಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯುವ ಸಾಹಸಕ್ಕೆ ಮುಂದಾಗಬಾರದು ಎಂದು ಸೂಚನೆ ನೀಡಿದೆ.