Breaking: ಕರ್ನಾಟಕದಾದ್ಯಂತ ಕ್ಷೀಣಿಸಲಿರುವ ಮುಂಗಾರು ಮಳೆ: IMD
ಬೆಂಗಳೂರು ಸೆಪ್ಟಂಬರ್ 09: ಭಾನುವಾರ(ಸೆ.11)ದವರೆಗೆ ಕರ್ನಾಟಕದ ಕೆಲವು ಜಿಲ್ಲೆಗಳ ಒಂದೆರಡು ಕಡೆ ಮಾತ್ರ ಭಾರಿ ಮಳೆ ನಿರೀಕ್ಷೆ ಇದೆ. ನಂತರ ರಾಜ್ಯಾದ್ಯಂತ ಮುಂಗಾರು ಮಳೆ ಕ್ಷೀಣಿಸುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ಹವಾಮಾನದಲ್ಲಿ ಉಂಟಾದ ತೀವ್ರ ಬದಲಾವಣೆಗಳು ಕರ್ನಾಟಕದ ಮೇಲೂ ಪ್ರಭಾವ ಭೀರಿದೆ. ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಸಮುದ್ರ ಮಟ್ಟದಿಂದ ಸುಮಾರು 6 ಕಿ.ಮೀ. ಎತ್ತರವಿರುವ ಈ ವಾಯುಭಾರ ಕುಸಿತವು ಆಂಧ್ರ ಪ್ರದೇಶದ ಉತ್ತರ ಕರಾವಳಿ, ಒಡಿಶಾ ದಕ್ಷಿಣ ಕರಾವಳಿ ಮಾರ್ಗವಾಗಿ ಸಾಗಲಿದೆ. ಇದೇ ಭಾಗದಲ್ಲಿ ಸಮುದ್ರ ಮೇಲ್ಮೈ ಸುಳಿಗಾಳಿ ಸಹ ವ್ಯಾಪಿಸುತ್ತಿದೆ. ಇನ್ನೂ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸಹ ಸುಳಿಗಾಳಿ ಎದ್ದಿದ್ದು, ಅದು ರಾಜ್ಯದ ಉತ್ತರ ಒಳನಾಡಿನತ್ತ ಬೀಸುತ್ತಿದೆ.
ಈ ಎಲ್ಲ ಕಾರಣಗಳಿಂದ ಕರ್ನಾಟಕದ ಹಲವಡೆ ಮಳೆ ಸಕ್ರಿಯವಾಗಿತ್ತು. ಹವಾಮಾಣದಲ್ಲಿನ ಈ ವೈಪರಿತ್ಯಗಳು ಉಲ್ಬಣಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಹೀಗಾಗಿ ಮುಂದಿನ ಎರಡು ಮೂರು ದಿನ ಕರ್ನಾಟಕದ ಕೆಲವೆಡೆ ಮಾತ್ರ ತುಂತುರು, ಸಾಧಾರಣ, ಕೆಲವೊಮ್ಮೆ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ತಜ್ಞ ಸದಾನಂದ ಅಡಿಗ ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹಗುರದಿಂದ ಸಾಧಾರಣ ಮಳೆ
ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕ್ಷೀಣಿಸಲು ಎರಡು ದಿನ ಹಿಡಿಯಬಹುದು. ಇದಕ್ಕೆ ಪೂರಕವಾಗಿ ಆರೆಂಜ್ ಅಲರ್ಟ್, ರೆಡ್ ಅಲರ್ಟ್ ಪಡೆದಿದ್ದ ಜಿಲ್ಲೆಗಳು ಯೆಲ್ಲೋ ಅಲರ್ಟ್ಗೆ ಬಂದಿವೆ.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮುಂದಿನ ಐದು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದ್ದು, ಶುಕ್ರವಾರದಿಂದ ಎರಡು ದಿನ ಜೋರು ಮಳೆ ಕಂಡು ಬರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಯಾದಗಿರಿ, ವಿಜಯಪುರದ ಒಂದೆರಡು ಕಡೆ ಮುಂದಿನ ಮೂರು ದಿನ ಆಗಾಗ ಭಾರಿ ಮಳೆ ಆಗುವ ಸಂಭವವಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದ.ಒಳನಾಡಿನಲ್ಲಿ ಬಹುತೇಕ ಕಡೆ ಮಳೆ ಇಳಿಕೆ
ದಕ್ಷಿಣ ಒಳನಾಡಿನಲ್ಲಿ ಶನಿವಾರ ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಮತ್ತು ತುಮಕೂರುಗಳಲ್ಲಿ ಮಾತ್ರ ಕೆಲವೆಡೆ ಸಾಧಾರಣದಿಂದ ಭಾರಿ ಮಳೆ ಆಗಬಹುದು. ಇಷ್ಟು ಜಿಲ್ಲೆಗಳಿಗೆ ಒಂದು ದಿನ ಮಾತ್ರ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೀಗೆ ಮೋಡ ಕವಿದ ವಾತಾವರಣವೇ ಕಂಡು ಬರಲಿದ್ದು, ಅಲ್ಲಲ್ಲಿ ತುಂತುರು ಮಳೆ ಆಗಬಹುದು. ಇಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.












Click it and Unblock the Notifications