ಬೆಂಗಳೂರಿನಲ್ಲಿ ಒಂದೇ ಗಂಟೆಯಲ್ಲಿ 81 ಮಿ.ಮೀ. ಮಳೆ!
ಬೆಂಗಳೂರು, ಜೂನ್ 04 : ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ರಾಜಧಾನಿ ಬೆಂಗಳೂರಿನಲ್ಲೂ ಶನಿವಾರ ಸಂಜೆ ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ಧಾರಾಕಾರ ಮಳೆ ಸುರಿದಿದೆ.
ಹಲವಾರು ಬಡಾವಣೆಗಳಲ್ಲಿ ಮೊಳಕಾಲು ಮುಳುಗುವವರೆಗೆ ಮಳೆನೀರು ನಿಂತಿದ್ದರಿಂದ ವಾಹನ ಚಾಲಕರು, ಅಡ್ಡಾಡುವವರು ತೊಂದರೆಗೆ ಸಿಲುಕಿದರು. ರಸ್ತೆತುಂಬ ನೀರು ನಿಂತಿದ್ದರಿಂದ ರಸ್ತೆಯಾವುದು ಚರಂಡಿಯಾವುದು ಎಂದು ತಿಳಿಯದಂತಾಗಿತ್ತು. ಮಳೆ ಅಲ್ಪಕಾಲ ಸುರಿದರೂ ಮಾಡಿರುವ ಅನಾಹುತ ಮಾತ್ರ ಅಗಾಧ.
ಶುಕ್ರವಾರ ರಾತ್ರಿ ಸಹ ಬೆಂಗಳೂರಲ್ಲಿ ಮಳೆಯಾಗಿತ್ತು. ಶುಕ್ರವಾರ ಆಗುಂಬೆಯಲ್ಲಿ 10 ಸೆಂಮೀ, ಆಲಮಟ್ಟಿಯಲ್ಲಿ 9, ಹಾವೇರಿಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಹಿರೇಕೆರೂರು, ಶಿಗ್ಗಾವಿ ತಾಲ್ಲೂಕಿನ ಹಳೆಬಂಕಾಪುರ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗಿದೆ.[ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ]
ಧಾರವಾಡ ಜಿಲ್ಲೆಯ ಕಲಘಟಗಿ, ಕುಂದಗೋಳ, ಬೆಳಗಾವಿ ಹಾಗೂ ಸುತ್ತಮುತ್ತ ಶನಿವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ಮಾಕೋನಹಳ್ಳಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್ಪೇಟೆ, ಹೊಸನಗರ, ತೀರ್ಥಹಳ್ಳಿಯಲ್ಲಿ ಮಳೆಯಾಗಿದೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]
ಬೆಂಗಳೂರು: ಕುಮಾರಸ್ವಾಮಿ ಲೇಔಟ್ ನಲ್ಲಿ 81 ಮಿಮೀ ಮಳೆಯಾಗಿದೆ. ಕೋಣನಕುಂಟೆಯಲ್ಲಿ 62 ಮಿಮೀ ಮಳೆಯಾಗಿದೆ. ಶುಕ್ರವಾರ ರಾತ್ರಿ ನಗರದ ಬಹುತೇಕ ಕಡೆ ಮಳೆ ಬಿದ್ದಿದೆ. ಜಯನಗರ, ಬಿಟಿಎಂ, ಕೆಂಗೇರಿ, ಕೆಂಪೇಗೌಡ ಬಸ್ ನಿಲ್ದಾಣ, ಕೆ ಆರ್ ಮಾರುಕಟ್ಟೆ ಭಾಗದಲ್ಲಿಯೂ ಮಳೆಯಾಗಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಬೆಂಗಳೂರಿನ ಹಲವೆಡೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.