ರಾಜ್ಯದೆಲ್ಲಡೆ ಮುಂಗಾರು ಆರಂಭ: ಜೂ.6ರಿಂದ ಮತ್ತಷ್ಟು ಚುರುಕು
ಬೆಂಗಳೂರು, ಜೂನ್ 4: ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಮೂರ್ನಾಲ್ಕು ದಿನ ಕಳೆದಿದೆ. ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದೆ. ಮೇ 29ಕ್ಕೆ ಮುಂಗಾರು ರಾಜ್ಯವನ್ನು ಪ್ರವೇಶಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ವಾಡಿಕೆಗಿಂತ ಸರಾಸರಿ 25 ಮಿ.ಮೀ ನಷ್ಟು ಮಳೆಯಾಗಬೇಕು. ಈ ವರ್ಷ ಸರಾಸರಿ 42 ಮಿ.ಮೀ ಮಳೆಯಾಗಿದೆ.
ಇದು ವಾಡಿಕೆಗಿಂತ ಶೇ.69 ಅಧಿಕವಾಗಿದೆ. ಆರಂಭದಲ್ಲೇ ಮುಂಗಾರು ಚುರುಕಾಗಿದ್ದು, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಜೂ.6ರಿಂದ ರಾಜ್ಯದೆಲ್ಲಡೆ ಮುಂಗಾರು ಮತ್ತಷ್ಟು ಚುರುಕಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರಲ್ಲಿ ಪ್ರವಾಹ ಸ್ಥಿತಿ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಲಬುರಗಿ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ದಾವಣಗೆರೆ ಜಿಲ್ಲೆಗಳಲ್ಲಿ ಜೂ.6ರಿಂದ ಗುಡುಗು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ತುಂತುರು, ಸಾಧಾರಣ ಮಳೆ ಮುಂದುವರೆಯಲಿದೆ.
ಜಲಪಾತ ವೀಕ್ಷಣೆಗೆ ತೆರಳಿದ್ದ ವ್ಯಕ್ತಿ ಬಲಿ: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದೆ. ಈ ಹಿನ್ನೆಲೆಯಲ್ಲಿ ಹತ್ತಿರದ ಹೊಳೆ, ಜಲಪಾತಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಇದೆ. ಭಾನುವಾರ ಜಲಪಾತ ವೀಕ್ಷಣೆಗೆ ತೆರಳಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಇನ್ನು ಮೈಸೂರಿನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಖಾಸಗಿ ಕಂಪನಿ ಉದ್ಯೋಗಿ ನೀರು ಪಾಲಾಗಿದ್ದಾರೆ.