ಚುನಾವಣಾ ದುಂದು ವೆಚ್ಚ, ಸಂಸದ ಮೊಯ್ಲಿಗೆ ನೋಟಿಸ್
ಬೆಂಗಳೂರು, ಡಿ.2: ಲೋಕಸಭಾ ಚುನಾವಣೆ ವೇಳೆ ಆಯೋಗ ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಹಣ ಬಳಕೆ ಮಾಡಿ ಜಯಭೇರಿ ಬಾರಿಸಿದ ಆರೋಪ ಹೊತ್ತಿರುವ ಚಿಕ್ಕಬಳ್ಳಾಪುರದ ಸಂಸದ ಎಂ.ವೀರಪ್ಪ ಮೊಯ್ಲಿ ಅವರಿಗೆ ಹೈಕೋರ್ಟಿನಿಂದ ನೋಟಿಸ್ ಜಾರಿ ಮಾಡಲಾಗಿದೆ.
ಚುನಾವಣಾ ಆಯೋಗ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಿದ್ದಲ್ಲದೆ, ಖರ್ಚು ವೆಚ್ಚದ ಅಂಕಿ ಅಂಶಗಳ ಮಾಹಿತಿ ನೀಡದ ಮೊಯ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ಇದೇ ಕ್ಷೇತ್ರದಲ್ಲಿ ಪರಾಜಿತರಾಗಿದ್ದ ಬಿಜೆಪಿ ನಾಯಕ ಬಿ.ಎನ್.ಬಚ್ಚೇಗೌಡ ಅವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಗ್ಗೆ ಉತ್ತರಿಸುವಂತೆ ಮೊಯ್ಲಿಯವರಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿದೆ. [ಚಿಕ್ಕಬಳ್ಳಾಪುರದಲ್ಲಿ ಪುನಃ ಗೆದ್ದ ಮೊಯ್ಲಿ]
ಬಿ.ಎನ್.ಬಚ್ಚೇಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಬಿ.ಎಸ್.ಪಾಟೀಲ್ ಅವರಿದ್ದ ನ್ಯಾಯಪೀಠ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಜುನಾವಣಾ ಆಯೋಗ, ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಪ್ರತೀ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಚುನಾವಣಾ ವೆಚ್ಚವಾಗಿ 70 ಲಕ್ಷ ರು ಮಿತಿ ನಿಗದಿ ಪಡಿಸಲಾಗಿದೆ. ಅದರೆ, ಮೊಯ್ಲಿ ಅವರು ಸುಮಾರು 73,28,436 ಲಕ್ಷ ವೆಚ್ಚ ಮಾಡಿದ್ದಾಗಿ ಚುನಾವಣಾ ಛಾಯಾ ತಂಡ(ಶ್ಯಾಡೋ ಟೀಮ್) ವರದಿ ನೀಡಿತ್ತು. ಆಯೋಗಕ್ಕೆ ಕೇವಲ 42 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದಾಗಿ ಅವರು ವರದಿ ಸಲ್ಲಿಸಿದ್ದರು. [ಇತಿಹಾಸದ ಅತ್ಯಂತ ದುಬಾರಿ ಚುನಾವಣೆ]
ಆರ್ ಟಿಐ ಮೂಲಕ ಮಾಹಿತಿ ಸಂಗ್ರಹಿಸಿದ ಬಚ್ಚೇಗೌಡ ಅವರು ಮೊದಲಿಗೆ ಚುನಾವಣಾ ಆಯೋಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು. ಅದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಹೈಕೋರ್ಟ್ ಮೆಟ್ಟಿಲೇರಿದ್ದರು.
'ಚುನಾವಣೆಯಲ್ಲಿ ನೀವು ಮಾಡಿದ ಖರ್ಚಿನ ವಿವರವನ್ನು ನಿಗದಿತ ದಿನದೊಳಗೆ ನೀಡಬೇಕು, ಇಲ್ಲವಾದರೆ ಪಕ್ಷದ ಮಾನ್ಯತೆಯನ್ನೇ ರದ್ದು ಮಾಡಬೇಕಾಗುವುದು' ಎಂದು ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ವಿವಿಧ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. [ವಿವರ ಇಲ್ಲಿ ಓದಿ]