ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪ್ರಧಾನಿಗೆ ಅಂಬಿ ಕೇಳಿದ ನಾಲ್ಕು ಪ್ರಶ್ನೆಗಳು
Recommended Video

ಬೆಂಗಳೂರು, ಜ 3: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವವರ ಮತ್ತು ಟೀಕಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನಂತೂ ಈಗ ಚುನಾವಣಾ ವರ್ಷ ಕೇಳಬೇಕಾ.. ಈ ಪಟ್ಟಿಗೆ ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಹೆಸರೊಂದು ಸೇರ್ಪಡೆಯಾಗಿದೆ.
ಮೋದಿಯವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಮಾಜಿ ವಸತಿ ಸಚಿವ, ಹಾಲೀ ಕಾಂಗ್ರೆಸ್ ಶಾಸಕ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ರಾಜ್ಯಕ್ಕೆ ಒಂದು ನಿಯಮ ಇನ್ನೊಂದು ರಾಜ್ಯಕ್ಕೆ ಇನ್ನೊಂದು ನ್ಯಾಯ ಎನ್ನುವ ಕೇಂದ್ರ ಸರಕಾರದ ನಿಲುವು ತಪ್ಪಲ್ಲವೇ ಎಂದು ಅಂಬರೀಶ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ (ಜ 2) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಂಬರೀಶ್, ನೀರಿನ ವಿಚಾರದಲ್ಲಾಗಲಿ, ನೈಸರ್ಗಿಕ ವಿಕೋಪ ಪರಿಹಾರದ ವಿಚಾರದಲ್ಲಾಗಲಿ ಕೇಂದ್ರ ಸರಕಾರ ತೋರುತ್ತಿರುವ ತಾರತಮ್ಯ ಸರಿಯಲ್ಲ ಎಂದು ಅಂಬರೀಶ್ ಹೇಳಿದ್ದಾರೆ.
ವಿರೋಧ ಪಕ್ಷದವರನ್ನು ಹೆಚ್ಚಾಗಿ ದೂರಲು ಹೋಗದ ಮತ್ತು ಇತ್ತೀಚಿನ ದಿನಗಳಲ್ಲಿ ಮಂಡ್ಯ ರಾಜಕಾರಣದತ್ತ ಹೆಚ್ಚು ಒಲವು ತೋರುತ್ತಿರುವ ಅಂಬರೀಶ್, ಕೆಲವೊಂದು ವಿದ್ಯಮಾನಗಳು ನನ್ನನ್ನು ಈ ರೀತಿ ಮಾತನಾಡುವಂತೆ ಮಾಡಿದೆ ಎಂದು ಅಂಬಿ ನೋವು ತೋಡಿಕೊಂಡಿದ್ದಾರೆ.
ಗೌರಿ ಲಂಕೇಶ್ ಮತ್ತು ಗುಜರಾತ್ ಅಸೆಂಬ್ಲಿ ಚುನಾವಣೆ ವಿಚಾರದಲ್ಲಿ ಹಿರಿಯ ನಟ ಪ್ರಕಾಶ್ ರೈ, ಪ್ರಧಾನಿ ಮೋದಿಯವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು. ಶಾಸಕ ಅಂಬರೀಶ್, ಪ್ರಧಾನಿ ಮೋದಿಯವರನ್ನು ಕೇಳಿದ ಪ್ರಶ್ನೆ, ಮುಂದೆ ಓದಿ..

ಕುಡಿಯುವ ನೀರಿನ ವಿಚಾರಕ್ಕೆ ಬಂದಾಗ ಸ್ವಾರ್ಥ ಬಿಡಬೇಕು
ತಮ್ಮತಮ್ಮ ರಾಜ್ಯದ ವಿಚಾರಕ್ಕೆ ಬಂದಾಗ ಎಲ್ಲರೂ ಸ್ವಾರ್ಥರಾಗಿತ್ತಾರೆ, ಅದಕ್ಕೆ ನನ್ನ ತಕರಾರಿಲ್ಲ. ಆದರೆ, ನದಿನೀರಿನ ವಿಚಾರದಲ್ಲಿ ಅದರಲ್ಲೂ ಕುಡಿಯುವ ನೀರಿನ ವಿಚಾರಕ್ಕೆ ಬಂದಾಗ ಸ್ವಾರ್ಥ ಬಿಟ್ಟು, ಎಲ್ಲರೂ ಜೊತೆಯಾಗಿ ಸಾಗಬೇಕಾಗುತ್ತದೆ - ಶಾಸಕ ಅಂಬರೀಶ್. ಮೋದಿಗೆ ಅಂಬಿ ಕೇಳಿದ ಪ್ರಶ್ನೆಗಳು, ಮುಂದಿನ ಸ್ಲೈಡುಗಳಲ್ಲಿ..

ಇಷ್ಟೊಂದು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಇದ್ದರೂ ಏನು ಪ್ರಯೋಜನ?
2014ರ ಲೋಕಸಭಾ ಚುನಾವಣೆಯ ವೇಳೆ ನಿಮ್ಮ ಹವಾದಿಂದ (ನರೇಂದ್ರ ಮೋದಿ) ಕರ್ನಾಟಕದಿಂದ ಹದಿನೇಳು ಬಿಜೆಪಿ ಸಂಸದರು ಆಯ್ಕೆಯಾದರು. ಇಷ್ಟೊಂದು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾದರೂ, ಕಾವೇರಿ ಅಥವಾ ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಏನಾದರೂ ಲಾಭವಾಗಿದೆಯಾ?

ಸ್ವಾರ್ಥವನ್ನು ಬಿಡಿ ಎಂದು ನಿಮ್ಮ ಸಿಎಂಗಳಿಗೆ ಕೇಳಿದ್ದೀರಾ?
ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮದೇ ಸರಕಾರವಿದೆ. ಕನಿಷ್ಠವಾದರೂ ಕುಡಿಯುವ ನೀರಿನ ವಿಚಾರಕ್ಕೆ ಮಾನವೀಯತೆ ದೃಷ್ಟಿಯಿಂದ ಸ್ವಾರ್ಥವನ್ನು ಬಿಡಿ ಎಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಳುವ ಕೆಲಸ ನಿಮ್ಮಿಂದ ಆಗಿದೆಯಾ?

ಕರ್ನಾಟಕದವರು ಭಾರತೀಯರಲ್ಲವೇ?
ಪಕ್ಕದ ತಮಿಳುನಾಡಿನಲ್ಲಿ ಪ್ರಾಕೃತಿಕ ವಿಕೋಪ ಎದುರಾದಾಗ, ಚೆನ್ನೈಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಬಿಡುಗಡೆ ಮಾಡುತ್ತೀರಾ. ಅದಕ್ಕಿಂತ ಹೆಚ್ಚು ವಿಕೋಪಗಳು ಕರ್ನಾಟಕದಲ್ಲಿ ಆಗಿದೆ. ಇಲ್ಲಿಗೆ ಯಾವತ್ತಾದರೂ ನೀವು ಬಂದಿದ್ದೀರಾ, ಕರ್ನಾಟಕದವರು ಭಾರತೀಯರಲ್ಲವೇ?

ನಮ್ಮ ಮೇಲೆ ಮಲತಾಯಿ ಧೋರಣೆ ಸರಿಯೇ?
ಗೋವಾದಲ್ಲಿ ಇಬ್ಬರು, ಮಹಾರಾಷ್ಟ್ರದಲ್ಲಿ 23 ಮತ್ತು ಕರ್ನಾಟಕದಲ್ಲಿ ಬಿಜೆಪಿಯ 17 ಸಂಸದರು ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೂ, ಕರ್ನಾಟಕದ ಮೇಲೆ ಕೇಂದ್ರ ಸರಕಾರ ತೋರುತ್ತಿರುವ ಮಲತಾಯಿ ಧೋರಣೆ ಸರಿಯೇ?












Click it and Unblock the Notifications