ಸ್ಥಳೀಯ ನಾಯಕತ್ವದ ಮುಂದೆಯೇ ಮಕಾಡೆ ಮಲಗಿದ ಮೋದಿ ಮೇನಿಯಾ
ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಂದು ಕಾಂಗ್ರೆಸ್ ರಾಜ್ಯದಲ್ಲಿ ಪ್ರಚಂಡ ಜಯ ಗಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇಲ್ಲಿ ಕೆಲಸ ಮಾಡಿಲ್ಲ ಎಂದು ಕಂಡು ಬರುತ್ತಿದೆ. ವಿಶ್ವಗುರು ಎಂಬ ಬಿಜೆಪಿಗರ ನೆಚ್ಚಿನ ಪ್ರಚಾರ ಮುಖವಾದ ಮೋದಿ ಫ್ಯಾಕ್ಟರ್ ಇಲ್ಲಿ ಪ್ರಯೋಜನಕ್ಕೆ ಬಂದಂತೆ ಇಲ್ಲ.
ದಕ್ಷಿಣ ಭಾರತ ಹೆಬ್ಬಾಗಿಲು ಎಂದೇ ಬಿಂಬಿತವಾಗಿದ್ದ ಕರ್ನಾಟಕವನ್ನು ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ ಬಿಜೆಪಿ ಅಷ್ಟು ಸುಲಭಕ್ಕೆ ರಾಜ್ಯವನ್ನು ಬಿಟ್ಟುಕೊಡುವ ಮುನಸ್ಸು ಮಾಡಿರಲಿಲ್ಲ. ಅದಕ್ಕೆಂದೇ ನರೇಂದ್ರ ಮೋದಿ ಅವರಿಂದ ಬರೋಬ್ಬರಿ 20ಕ್ಕೂ ಮೇಲ್ಪಟ್ಟು ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಇದಾವುದು ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದುಕೊಡಲು ಬರಲಿಲ್ಲ.

ಬಿಜೆಪಿ ರಾಷ್ಟ್ರೀಯ ನಾಯಕ ಬಿಎಲ್ ಸಂತೋಷ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಬಳಿಕ ರಾಜ್ಯದ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದ್ದು, ತಾವು 130ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಹೇಳಿದ್ದರು. ಮೋದಿ ಕರ್ನಾಟಕ ಜನರಿಗೆ ಹೆಚ್ಚು ಪ್ರಭಾವ ಬೀರುತ್ತಾರೆ. ಇದಕ್ಕೆ ನಮಗೆ ಸ್ಥಳೀಯ ಬಿಜೆಪಿ ನಾಯಕರ ಅಗತ್ಯ ಇಲ್ಲ ಎನ್ನುವಂತೆ ಮಾತನಾಡಿದ್ದರು. ಆದರೆ ಇದೆಲ್ಲ ಇಲ್ಲಿ ಅವರಿಗೆ ಬ್ಯಾಕ್ ಫೈರ್ ಆಗಿ ಪರಿಣಮಿಸಿದೆ.
ಇನ್ನು ಮೋದಿ ಅವರು ಈ ಚುನಾವಣೆಯಲ್ಲಿ ತಾವು ಹಳೆಯ ಕ್ಯಾಸೆಟ್ ಅನ್ನೇ ಹಾಕಿದ್ದರು. ಕರ್ನಾಟಕದ ಸ್ಥಳೀಯ ಬಿಜೆಪಿ ನಾಯಕರ ಕಾರ್ಯಸಾಧನೆಗಳನ್ನು ಹೇಳದೆಯೇ ತಾವು ಯಾವಾಗಲೂ ಹೇಳುವ ಕುಟುಂಬ ರಾಜಕಾರಣ ಶಾಹಿ ಪರಿವಾರ ಎಂದೇ ಹೊಸ ಹೆಸರು ನೀಡಿ ಅಲ್ಲಗೆಳೆಯಲು ಆರಂಭಿಸಿದ್ದರು. ಇನ್ನು ಮುಂದೆ ಹೋಗಿ ನನಗೆ ಕಾಂಗ್ರೆಸ್ 91 ಬಾರಿ ಬೈದಿದ್ದಾರೆ ಎಂದೂ ಆರೋಪಿದ್ದರು.

ಆದರೆ ಇದಕ್ಕೆ ಕಾಂಗ್ರೆಸ್ನ ಕೌಂಟರ್ ಅಟ್ಯಾಕ್ ತುಂಬಾ ಪ್ರಬಲವಾಗಿತ್ತು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ನೀವು 91 ಬಾರಿ ಬೈದಿದ್ದೀರಿ ಎಂದು ಆರೋಪಿಸಿದ್ದೀರಿ ಆದರೆ ನೀವು ನಮ್ಮ ಕುಟುಂಬವನ್ನು ಬೈದಿರುವುದಕ್ಕೆ ಲೆಕ್ಕವೇ ಇಡಲು ಸಾಧ್ಯವಿಲ್ಲ ಎಂದು ಹೇಳಿ ಕೌಂಟರ್ ಅಟ್ಯಾಕ್ ಮಾಡಿದ್ದರು. ಇದೇ ಮಾದರಿಯ ತಿರುಗೇಟುಗಳು ಈ ಬಾರಿ ಹೆಚ್ಚಾಗಿಯೇ ಕೆಲಸ ಮಾಡಿದವು,
ಕರ್ನಾಟಕ ಚುನಾವಣೆಗೆ ಮೋದಿ ಮಾತ್ರವಲ್ಲದೇ ಬಿಜೆಪಿ ರಾಷ್ಟ್ರೀಯ ನಾಯಕರಾದ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಜೈಶಂಕರ್, ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್ ಅನ್ನು ತಮ್ಮದೇ ಮಾದರಿಯಲ್ಲಿ ಜರೆದಿದ್ದರು. ಆದರೆ ಕರ್ನಾಟಕದಲ್ಲಿ ಇದ್ದ ಆಡಳಿತ ವಿರೋಧಿ ಅಲೇ ಹಾಗೂ ಲಿಂಗಾಯತ ಸಮುದಾಯವನ್ನು ಬಿಜೆಪಿ ಎದುರು ಹಾಕಿಕೊಂಡದ್ದು, ಕಾಂಗ್ರೆಸ್ಗೆ ನೆರವಾಯಿತು.
ಮೋದಿ ಅವರು ಈ ಬಾರಿ ಅಪಾರ ಆತ್ಮವಿಶ್ವಾಸದಿಂದ ಒಬ್ಬರೇ ಕ್ಯಾಂಪೇನ್ ಮಾಡಿದ್ದು ಕೂಡ ಅವರು ಜೊತೆ ಕರ್ನಾಟಕದ ಜನತೆ ಇಲ್ಲ ಎಂದು ಪದೇ ಪದೇ ಸಾಬೀತಾಗುತ್ತಿತ್ತು. ಕೊನೆಯದಾಗಿ ಬೆಂಗಳೂರಿನಲ್ಲಿ ಮಾಡಿದ ರೋಡ್ ಶೋ ತಮಗೆ ಅಪಾರ ಜನಬೆಂಬಲವನ್ನು ತಂದುಕೊಡುತ್ತದೆ ಎಂದು ಭಾವಿಸಿದ್ದರು, ಆದರೆ ಇದೆಲ್ಲ ಕೂಡ ಮೋದಿ ಅವರಿಗೆ ಇಲ್ಲಿ ಹಿಂದೇಟು ಬೀಳುವಂತೆ ಮಾಡಿತು.
ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೋದಿ ಅವರು ತವರು ನೆಲದಲ್ಲಿ ಜರೆದದ್ದು ಕರ್ನಾಟಕದ ಜನ ಮೋದಿ ವಿರುದ್ಧ ಕಣ್ಣುಕೆಂಪಾಗಿಸಲು ಕಾರಣವೂ ಆಯಿತು. ಏಕೆಂದರೆ ಅವರು ಕರ್ನಾಟಕ ಬಹುಸಂಖ್ಯಾತ ಸಮುದಾದಯವಾದ ದಲಿತ ಕಮ್ಯೂನಿಟಿಗೆ ಸೇರಿದದ್ದವರು. ಹೀಗಾಗಿ ಮೋದಿ ಅವರು ತಮ್ಮ ಮೂಲ ಚರಿಷ್ಮಾ ಕಳೆದುಕೊಳ್ಳಲು ಕಾರಣವಾಯಿತು.
ಇನ್ನು ಮುಖ್ಯವಾಗಿ ಎಐಸಿಸಿ ವರಿಷ್ಠೆ ಬಹುದೊಡ್ಡ ಕರ್ನಾಟಕ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಹುಬ್ಬಳ್ಳಿಗೆ ಬಂದು ಪ್ರಚಾರ ಮಾಡಿದ್ದರು. ಆದರೆ ದೇಶದ ಬಿಜೆಪಿಯ ಪ್ರಚಾರ ಮುಖವೇ ಆದ ಮೋದಿ ಇಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ರ್ಯಾಲಿಗಳನ್ನು ಮಾಡಿದ್ದರು. ಇದು ಮೋದಿ ಮೋನಿಯಾ ಕರ್ನಾಟಕದಲ್ಲಿ ಮಕಾಡೆ ಮಲಗಿತು ಎಂಬುದಕ್ಕೆ ನಿದರ್ಶನದಂತೆ ಬಾಸವಾಯಿತು. ಕರ್ನಾಟಕದ ಸ್ಥಳೀಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಚಾರ ತಂತ್ರದ ಮುಂದೆ ಮೋದಿ ಅವರು ಸೋಲೊಪ್ಪಿಕೊಳ್ಳಬೇಕಾಯಿತು.












Click it and Unblock the Notifications