1,120 ಕೋಟಿ ವೆಚ್ಚದಲ್ಲಿ ಮಲಪ್ರಭಾ ಕಾಲುವೆಗಳ ಆಧುನೀಕರಣ
ಮಲಪ್ರಭಾ ಕಾಲುವೆಗಳ ಆಧುನೀಕರಣಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ 1,120 ಕೋಟಿ ರೂ.ಗಳ ವಿವರವಾದ ಯೋಜನಾ ವರದಿ ಸಲ್ಲಿಸಿದೆ. ಇದಕ್ಕೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗುವುದು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು, ಮೇ 26: ಮಲಪ್ರಭಾ ಯೋಜನೆಯ ಎಡ ಮತ್ತು ಬಲದಂಡೆ ಕಾಲುವೆಗಳು ಅತ್ಯಂತ ದುಸ್ಥಿತಿಯಲ್ಲಿದ್ದು ಸಮರ್ಪಕವಾಗಿ ನೀರು ದೊರೆಯದ ಕಾರಣ ರೈತರು ತೊಂದರೆಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು 1120 ಕೋಟಿ ವೆಚ್ಚದಲ್ಲಿ ಈ ಕಾಲುವೆಗಳ ಆಧುನೀಕರಣ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಎರೆ ಮಣ್ಣಿನ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ಕಾಲುವೆ ತಳದಲ್ಲಿ ಕಾಂಕ್ರೀಟ್ ಒದಗಿಸಿ, ಬದಿಗಳಿಗೆ ಪಿ.ಸಿ.ಸಿ ಸ್ಲ್ಯಾಬ್ಗಳನ್ನು ಹಾಕಿ ಮಾಡಲಾಗಿತ್ತು. ಆದರೆ ಈ ಕಾಲುವೆಯ ಲೈನಿಂಗ್ ಸುಮಾರು 25 ವರ್ಷಗಳ ಹಿಂದ ನಿರ್ಮಿಸಿದ್ದು ಎರೆ ಮಣ್ಣಿನ ಗುಣ ಧರ್ಮದಿಂದ ಕುಗ್ಗುವಿಕೆ ಹಾಗೂ ಹಿಗ್ಗುವಿಕೆ ಪರಿಣಾಮದಿಂದ ಬಹಳಷ್ಟು ಕಡೆ ಕಾಲುವೆ ಹಾಳಾಗಿದ್ದು ದುಸ್ಥಿತಿಯಲ್ಲಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಹೀಗಾಗಿ ಕಾಲುವೆ ಆಧುನೀಕರಣ ಮಾಡಿ ಮುಖ್ಯ ಕಾಲುವೆ ಹಾಗೂ ಹಂಚು ಕಾಲುವೆಗಳ ಮುಖಾಂತರ ನೀರನ್ನು ತ್ವರಿತವಾಗಿ ಹಾಗೂ ಸರಾಗವಾಗಿ ಹರಿಸಲು ಮತ್ತು ನೀರು ಇಂಗುವುದನ್ನು ತಡೆಗಟ್ಟಿ ನೀರು ಉಳಿತಾಯ ಮಾಡಲು ಈ ಕಾಲುವೆಗಳ ಆಧುನೀಕರಣ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಅಚ್ಚುಕಟ್ಟಿನ ಕೊನೆಯ ಭಾಗದವರೆಗೆ ನೀರನ್ನು ಹರಿಸಲು ಸಾಧ್ಯವಾಗುತ್ತದೆ. ಮಲಪ್ರಭ ಯೋಜನೆಯಲ್ಲಿ ನೀರಿನ ಲಭ್ಯತೆಯ ಕೊರತೆಯಿದ್ದು, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಇನ್ನು ಈ ಯೋಜನೆಗಳಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞ ತಂಡ 1,120 ಕೋಟಿ ರೂಪಾಯಿಗಳ ವಿವರವಾದ ಯೋಜನಾ ವರದಿ ಸಲ್ಲಿಸಿದೆ. ಇದಕ್ಕೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆದು, ಟೆಂಡರ್ ಕರೆದು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಮೂಲಕ ಮಲಪ್ರಭಾ ಅಚ್ಚುಕಟ್ಟು 4 ಜಿಲ್ಲೆಗಳ ಜನರಿಗೆ ಅನುಕೂಲವಾಗುವ ರೀತಿ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.