ಕೃಷಿ ಪಂಪ್ಸೆಟ್ಗಳಿಗೆ ಹಗಲು 4 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆಗೆ ಶಾಸಕರ ಆಗ್ರಹ
ಬೆಂಗಳೂರು, ಮಾ. 10: ರಾಜ್ಯದಲ್ಲಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ಕನಿಷ್ಠ ನಾಲ್ಕು ತಾಸು ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಪಕ್ಷಭೇದ ಮರೆತು ಶಾಸಕರು ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪ್ರಶ್ನೋತ್ತರ ವೇಳೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ಟಿ.ಜಿ. ವೆಂಕಟರಮಣಯ್ಯ ಅವರು ಕೇಳಿದ ಪ್ರಶ್ನೆಗೆ ಬಹತೇಕ ಶಾಸಕರು ಧ್ವನಿಗೂಡಿಸಿದರು. ಇಂಧನ ಸಚಿವ ವಿ. ಸುನೀಲ್ ಕುಮಾರ್ ಪರವಾಗಿ ಲೋಕೋಪಯೋಗಿ ಸಚಿವ ಸಿ ಸಿ. ಪಾಟೀಲ್ ಉತ್ತರಿಸುವಾಗ ಹಲವು ಸದಸ್ಯರು ಹಗಲು ವೇಳೆ ನಾಲ್ಕು ತಾಸು ರೈತರ ಪಂಪ್ಸೆಟ್ ಗಳಿಗೆ ಮೂರು ಫೇಸ್ ವಿದ್ಯುತ್ ಕಲ್ಪಿಸಬೇಕು. ರಾತ್ರಿ ವೇಳೆ ಮೂರು ತಾಸು ತ್ರಿಫೇಸ್ ವಿದ್ಯುತ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ಜಿ.ವೆಂಕಟರಮಣಯ್ಯ ಮಾತನಾಡಿ, ರಾತ್ರಿ ವೇಳೆ ನಾಲ್ಕು ತಾಸು ವಿದ್ಯುತ್ ರೈತರ ಪಂಪ್ಸೆಟ್ ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಹಗಲು ವೇಳೆ ಮೂರು ಗಂಟೆ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದಾಗ ಇದಕ್ಕೆ ಧನಿ ಗೂಡಿಸಿದ ಶಿವಾನಂದ ಪಾಟೀಲ್, ಎಲ್ಲಾ ಕ್ಷೇತ್ರದಲ್ಲಿ ಇದೇ ಸಮಸ್ಯೆ ತಲೆದೋರಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಾಸಕರ ಪ್ರಶ್ನೆಗೆ ಧ್ವನಿಗೂಡಿಸಿ, ರಾಜ್ಯದಲ್ಲಿ ಪ್ರತಿ ನಿತ್ಯ ಏಳು ತಾಸು ಪಂಪ್ಸೆಟ್ಗಳಿಗೆ ವಿದ್ಯುತ್ ನೀಡುವ ಬದಲು, ಕೇವಲ ಮೂರು ನಾಲ್ಕು ತಾಸು ಪೂರೈಕೆ ಮಾಡಲಾಗುತ್ತಿದೆ. ಲೋಡ್ ಶೆಡ್ಡಿಂಗ್ ಇದೆ. ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ರಾತ್ರಿ ಬದಲು ಹಗಲು ವೇಳೆ ರೈತರ ಪಂಪ್ ಸೆಟ್ ಗಳಿಗೆ ಕನಿಷ್ಠ ನಾಲ್ಕು ತಾಸು ತ್ರಿಫೇಸ್ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೂ, ಲೋಡ್ ಶೆಡ್ಡಿಂಗ್ ಮಾಡುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದರು.
ಶಾಸಕರ ಪ್ರಶ್ನೆಗಳಿಗೆ ಇಂಧನ ಸಚಿವರ ಪರವಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಉತ್ತರ ನೀಡಿ, ರಾತ್ರಿ ವೇಳೆ ರೈತರ ಪಂಪ್ಸೆಟ್ ಗಳಿಗೆ ನಾಲ್ಕು ತಾಸು ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ಬೆಳಗ್ಗೆ ಸಮಯದಲ್ಲಿ ಮೂರು ತಾಸು ಪೂರೈಕೆ ಮಾಡಲಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದರು ಹಂಚಿಕೆ ಸಮಸ್ಯೆಯಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಇಂದನ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಸಿ.ಸಿ. ಪಾಟೀಲ್ ಉತ್ತರ ಕೊಟ್ಟರು.

ಸರಾಸರಿ 12,500 ಮೆಗಾ ವ್ಯಾಟ್ ಇರುತ್ತಿತ್ತು. ಆದರೆ ಪೀಕ್ ಅವರ್ ನಲ್ಲಿ 14,700 ಮೆ. ವ್ಯಾ. ವಿದ್ಯುತ್ಗೆ ಬೇಡಿಕೆ ಇದೆ. ಹೀಗಾಗಿ ಲೋಡ್ ಶೆಡ್ಡಿಂಗ ಅನಿವಾರ್ಯವಾಗಿದೆ. ದೊಡ್ಡಬಳ್ಳಾಪುರದ ಸಾಸಲುವಿನಲ್ಲಿ 66 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ನಿರ್ಮಿಸಲಾಗುವುದು ಎಂದು ಸಿ.ಸಿ. ಪಾಟೀಲ್ ಸ್ಪಷ್ಟನೆ ಕೊಟ್ಟರು. ಆಗಲೂ ಶಾಸಕು ತೃಪ್ತರಾಗಲಿಲ್ಲ. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಕಾಗೇರಿ, ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು ಹಗಲಿನಲ್ಲಿ ರೈತರ ಪಂಪ್ಸೆಟ್ ಗಳಿಗೆ ನಾಲ್ಕು ತಾಸು ವಿದ್ಯುತ್ ಪೂರೈಕೆ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದರು.












Click it and Unblock the Notifications