ಆನಂದ್ ಸಿಂಗ್ ಮೇಲೆ ಹಲ್ಲೆ, ಶಾಸಕ ಗಣೇಶ್ ಬಂಧನ ಸಾಧ್ಯತೆ
ಬೆಂಗಳೂರು, ಜನವರಿ 22: ಈಗಲ್ಟನ್ ರೆಸಾರ್ಟ್ನಲ್ಲಿ ಶನಿವಾರ ರಾತ್ರಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಇಂದು ಬಂಧಿಸುವ ಸಾಧ್ಯತೆ ಇದೆ.
ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ ಸಂದರ್ಭ ಈ ಇಬ್ಬರೂ ಶಾಸಕರ ನಡುವೆ ವಾಗ್ವಾದ ನಡೆದು, ಶಾಸಕ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದರು. ಆನಂದ್ ಸಿಂಗ್ ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಏಟು ತಿಂದಿರುವ ಶಾಸಕ ಆನಂದ್ ಸಿಂಗ್ ಅವರ ಹೇಳಿಕೆಯನ್ನೂ ಪಡೆದಿದ್ದಾರೆ. 'ಶಾಸಕ ಗಣೇಶ್, ಕೊಲ್ಲುವ ಉದ್ದೇಶದಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ' ಎಂದು ಆನಂದ್ ಸಿಂಗ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಆನಂದ್ ಸಿಂಗ್ ಅವರು ಹೇಳಿಕೆ ನೀಡಿದ ಬೆನ್ನಲ್ಲೆ ಶಾಸಕ ಗಣೇಶ್ಗೆ ಬಂಧನ ಭೀತಿ ಶುರುವಾಗಿದ್ದು, ಇಂದು ಗಣೇಶ್ ಅವರನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಬಿಡದಿ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಹಲ್ಲೆಯು ಗಂಭೀರವ ಸ್ವರೂಪದ್ದಾಗಿದ್ದು, ಆನಂದ್ ಸಿಂಗ್ ಪೊಲೀಸರಿಗೆ ನೀಡಿರುವ ಹೇಳಿಕೆಯೂ ಗಂಭೀರದ್ದೇ ಆಗಿರುವ ಕಾರಣ ಇಂದು ಗಣೇಶ್ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಹಲವು ಸೆಕ್ಷನ್ ಅಡಿ ಪ್ರಕರಣ
ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೆ.ಎನ್.ಗಣೇಶ್ ಮೊದಲ ಆರೋಪಿಯಾಗಿದ್ದಾರೆ. ಐಪಿಸಿ ಸೆಕ್ಷನ್ 323, 324, 307, 504 ಹಾಗೂ 506ರ ಅಡಿ ಪ್ರಕರಣವನ್ನು ಪೊಲೀಸರು ದಾಖಲು ಮಾಡಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿದೆ.

ಇಂದು ಅಥವಾ ನಾಳೆ ಬಂಧಿಸುವ ಸಾಧ್ಯತೆ
ಗಣೇಶ್ ಅವರನ್ನು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪೊಲೀಸರು ಆ ನಂತರ ಅವರನ್ನು ಬಂಧಿಸಿ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಇಂದಲ್ಲವಾದರೆ ನಾಳೆಯಾದರೂ ಅವರ ಬಂಧನ ಪಕ್ಕಾ ಎನ್ನಲಾಗುತ್ತಿದೆ.

ಶಾಸಕ ಗಣೇಶ್ ಅಮಾನತು
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಆದೇಶದ ಮೇರೆಗೆ ಜೆ.ಎನ್.ಗಣೇಶ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ವಿಚಾರಣಾ ಸಮಿತಿ ರಚನೆ ಮಾಡಲಾಗಿದೆ.

ಬಾಟಲಿಯಿಂದ ಹಲ್ಲೆ? ಹೂ ಕುಂಡದಿಂದ ಹಲ್ಲೆ?
ಕೆಲವು ಮೂಲಗಳ ಪ್ರಕಾರ ಗಣೇಶ್ ಅವರು ಆನಂದ್ ಸಿಂಗ್ ಅನ್ನು ಬಾಟಲಿಯಿಂದ ಹೊಡೆದರು ಎನ್ನಲಾಗಿದೆ. ಆದರೆ ಆನಂದ್ ಸಿಂಗ್ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ 'ಹೂ ಕುಂಡವನ್ನು ಮೇಲೆ ಎಸೆದು, ತಲೆಯನ್ನು ಗೋಡೆಗೆ ಜಜ್ಜಿದರು, ಕಿಬ್ಬೊಟ್ಟೆಗೆ ಸತತವಾಗಿ ಹೊಡೆದರು, ಕೊಲ್ಲಲು ಬಂದೂಕು ಕೇಳಿದರು, ಕೊಂದೇ ತೀರುವುದಾಗಿ ಅಬ್ಬರಿಸಿದರು' ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications