ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲೂ ತೂರಾಟ
ದೇಶದ ಸೆಮಿ ಹೈಸ್ಪೀಡ್ ರೈಲಾದ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಬೆಂಗಳೂರಿನ ಕೆಆರ್ ಪುರಂ ಬಳಿ ಕಲ್ಲೂ ತೂರಾಟ ನಡೆದಿದ್ದು, ಘಟನೆಯಲ್ಲಿ ರೈಲಿನ ಎರಡು ಗಾಜುಗಳಿಗೆ ಹಾನಿಯಾಗಿದೆ.
ಬೆಂಗಳೂರು, ಫೆಬ್ರವರಿ 25: ದಕ್ಷಿಣ ಭಾರತದ ಮೊದಲ ಮೈಸೂರು ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಶನಿವಾರ ಕಲ್ಲೂ ತೂರಾಟ ನಡೆಸಲಾಗಿದೆ.
ದೇಶದ ಸೆಮಿ ಹೈಸ್ಪೀಡ್ ರೈಲಾದ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಬೆಂಗಳೂರಿನ ಕೆಆರ್ ಪುರಂ ಬಳಿ ಕಲ್ಲೂ ತೂರಾಟ ನಡೆದಿದ್ದು, ಘಟನೆಯಲ್ಲಿ ರೈಲಿನ ಎರಡು ಗಾಜುಗಳಿಗೆ ಹಾನಿಯಾಗಿದೆ. ರೈಲು ಗಾಡಿ ಸಂಖ್ಯೆ 20608 ಮೈಸೂರು- ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇದರ ಪರಿಣಾಮ ಕೋಚ್ನ 2 ಕಿಟಕಿಗಳಿಗೆ ಹಾನಿಯಾಗಿದ್ದು, ಬೆಂಗಳೂರಿನ ಕೃಷ್ಣರಾಜಪುರಂ - ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ನಡುವೆ ಇಂದು ಈ ಘಟನೆ ನಡೆದಿದೆ. ಕಲ್ಲೂ ತೂರಾಟದಿಂದ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ.
ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ರೈಲ್ವೆ ಸಂರಕ್ಷಣಾ ಪಡೆ (RPF) ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಮೇಲೆ ಜನವರಿ 2023ರಲ್ಲಿ 21 ಕಲ್ಲು ತೂರಾಟ ಪ್ರಕರಣಗಳನ್ನು ಮತ್ತು ಫೆಬ್ರವರಿ 2023 ರಲ್ಲಿ 13 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇತ್ತೀಚೆಗಷ್ಟೇ ಕೇಂದ್ರ ರೈಲ್ವೆ ಸಚಿವರು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ಕೆಳಗೆ ವಂದೇ ಭಾರತ್ ರೈಲು ಹಾದುಹೋಗುತ್ತಿರುವ ಸಣ್ಣ ವಿಡಿಯೋವನ್ನು ಹಂಚಿಕೊಂಡಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು.
ಕಳೆದ ವರ್ಷ 2022ರ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿದ್ದ ಈ ರೈಲು ಇದುವರೆಗೂ ಯಾವುದೇ ಅಹಿತಕರ ಘಟನೆ ನಡೆಯದೇ ಸುಗಮವಾಗಿ ಚಲಿಸುತ್ತಿತ್ತು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಚೆನ್ನೈ ಹಾಗೂ ಮೈಸೂರು ನಡುವೆ ಬಿಟ್ಟಾಗಿನಿಂದಲೂ ಇದಕ್ಕೆ ಜನಪ್ರಿಯತೆ ಹೆಚ್ಚಿದ್ದು, ಜನರ ಓಡಾಟವು ಅಧಿಕಗೊಂಡಿತ್ತು.

ರೈಲ್ವೆ ಅಧಿಕಾರಿಗಳಿಂದ ತನಿಖೆ
ಬೆಂಗಳೂರಿನ ಕೆಆರ್ ಪುರಂ ಬಳಿ ಈಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಕಲ್ಲೂ ತೂರಾಟ ಮಾಡಿದ್ದು, ನೈರುತ್ಯ ರೈಲ್ವೆ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ರೈಲು ಸಂಖ್ಯೆ 20607/20608 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ವಾರದಲ್ಲಿ ಆರು ದಿನಗಳು (ಬುಧವಾರ ಹೊರತುಪಡಿಸಿ) ಮೈಸೂರು ಹಾಗೂ ಚೆನ್ನೈ ಎರಡೂ ಕಡೆಗಳಿಂದ ನಿರ್ವಹಿಸಲಾಗುತ್ತಿದೆ. ಎರಡೂ ಸೇವೆಗಳಿಗೆ ಕಟಪಾಡಿ ಜಂಕ್ಷನ್ ಮತ್ತು ಕೆಎಸ್ಆರ್ ಬೆಂಗಳೂರಿನಲ್ಲಿ ನಿಲುಗಡೆಗಳನ್ನು ಒದಗಿಸಲಾಗಿದೆ.

ಗಂಟೆಗೆ 180 ಕಿಮೀ ವೇಗದಲ್ಲಿ ಚಲನೆ
ಈ ವಂದೇ ಭಾರತ್ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದರೆ ಬೆಂಗಳೂರು ಮಾರ್ಗವಾಗಿ ಚೆನ್ನೈನಿಂದ ಮೈಸೂರಿಗೆ ಚಲಿಸುವಾಗ ಟ್ರ್ಯಾಕ್ ಪರಿಸ್ಥಿತಿಯಿಂದ ಈ ಮಾರ್ಗದಲ್ಲಿ ರೈಲು ಗಂಟೆಗೆ ಕೇವಲ 130 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಚೆನ್ನೈ ಮೈಸೂರು ವಂದೇ ಭಾರತ್ನ ಸರಾಸರಿ ವೇಗ ಗಂಟೆಗೆ 75 ರಿಂದ 77 ಕಿಮೀ ಆಗಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರಿಂದಲೂ ಸಕತ್ ಡಿಮಾಂಡ್ ಕೇಳಿ ಬರುತ್ತಿದೆ.

ವಂದೇ ಭಾರತ್ ಎಕ್ಸ್ಪ್ರೆಸ್ಗೆ 4 ವರ್ಷ
ಇತ್ತೀಚೆಗಷ್ಟೇ ದೇಶಕ್ಕೆ ಸಮರ್ಪಣೆಯಾದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯಶಸ್ವಿಯಾಗಿ 4 ವರ್ಷಗಳನ್ನು ಪುರೈಸಿದೆ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 11ರಂದು ಪ್ರಧಾನಿ ಮೋದಿ ಅವರು ಧಾರವಾಡಕ್ಕೆ ಬರಲಿದ್ದು ಈ ವೇಳೆ ಕರ್ನಾಟಕಕ್ಕೆ ಮತ್ತೋಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಈ ರೈಲು ಧಾರವಾಡದಿಂದ ಬೆಂಗಳೂರು ನಡುವೆ ಸಂಚರಿಸಲಿದೆ.

ಇರುವರೆಗೂ 10 ವಂದೇ ಭಾರತ್ ರೈಲುಗಳ ಸಂಚಾರ
ದೇಶದಲ್ಲಿ ಇರುವರೆಗೂ 10 ವಂದೇ ಭಾರತ್ ರೈಲುಗಳು ಓಡುತ್ತಿವೆ. ಮುಂಬೈನಲ್ಲಿ 9 ಹಾಗೂ 10ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕ್ರಮವಾಗಿ ಮುಂಬೈ ಸೊಲ್ಲಾಪುರ ಹಾಗೂ ಮುಂಬೈ ಶಿರಡಿ ನಡುವೆ ಸಂಚಾರ ಮಾಡುತ್ತವೆ. ತೆಲಂಗಾಣದಲ್ಲಿ ಸಿಕಂದರಬಾದ್ ಹಾಗೂ ವಿಶಾಖಪಟ್ಟಣಂ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ದುಷ್ಕರ್ಮಿಗಳು ಕಲ್ಲೂ ತೂರಾಟ ನಡೆಸಿದ್ದರು.












Click it and Unblock the Notifications