ಮತ್ತೆ ಚರ್ಚ್ ಮೇಲೆ ದಾಳಿ:ಸಿದ್ದು ಸರಕಾರ ಏನನ್ನುತ್ತೆ ಈಗ?
ಬಂಟ್ವಾಳ, ಅ 15: ದಕ್ಷಿಣ ಭಾರತದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಚರ್ಚ್ ಮೇಲೆ ದಾಳಿಗಳು ನಡೆಯುತ್ತಿದ್ದವು. ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷ, ಬಿಜೆಪಿ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಸರಕಾರದ ರಾಜೀನಾಮೆಗೆ ಪಟ್ಟು ಹಿಡಿದಿದ್ದವು.
ಬಂಟ್ವಾಳದಲ್ಲಿರುವ ಲೇಡಿ ಆಫ್ ಲೊರೆಟ್ಟೊ ಚರ್ಚ್ ಮೇಲೆ ಭಾನುವಾರ (ಅ 13) ನಸುಕಿನಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಚರ್ಚಿನ ಲೇಡಿ ಲೊರೆಟ್ಟೊ ವಿಗ್ರಹದ ಗಾಜನ್ನು ದುಷ್ಕರ್ಮಿಗಳು ಪುಡಿಗೈದಿದ್ದಾರೆ.
ನಾನು ಎಂದಿನಂತೆ ಶನಿವಾರ (ಅ 12) ರಾತ್ರಿ ಹತ್ತು ಗಂಟೆ ಸುಮಾರಿಗೆ ಚರ್ಚಿನ ಮುಖ್ಯ ದ್ವಾರವನ್ನು ಮುಚ್ಚಿ ಮನೆಗೆ ತೆರಳಿದ್ದೆ. ನಮ್ಮ ಮನೆ ಚರ್ಚಿನಿಂದ 500 ಮೀಟರ್ ದೂರದಲ್ಲಿದೆ.

ಭಾನುವಾರ ಬೆಳಗ್ಗೆ ಐದು ಗಂಟೆಗೆ ಬಂದು ಚರ್ಚ್ ಬಾಗಿಲು ತೆರೆದೆ. ಭಾನುವಾರದಂದು ಸಾಮೂಹಿಕ ಪ್ರಾರ್ಥನೆ ಬೆಳಗ್ಗೆ ಎಂಟು ಗಂಟೆಗೆ ಆರಂಭವಾಗುತ್ತದೆ. ಹಾಗಾಗಿ ಆ ಕೆಲಸದಲ್ಲಿ ನಾನು ನಿರತನಾಗಿದ್ದೆ. ಪ್ರಾರ್ಥನೆಗೆ ಬಂದವರು ದಾಳಿ ನಡೆದಿರುವ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ಚರ್ಚಿನ ಪಾದ್ರಿ ಫಾದರ್ ಓಸ್ವಾಲ್ಡ್ ಲೊಸಾರ್ಡೊ ಹೇಳಿದ್ದಾರೆ.
ದಾಳಿಯಿಂದ ನಾವು ಮಾನಸಿಕ ಆಘಾತಕ್ಕೆ ಒಳಗಾಗಿದ್ದೇವೆ. ಬಂಟ್ವಾಳ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದೇವೆ. ನಾವು ಈ ಘಟನೆಯ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ. ನಮಗೆ ನ್ಯಾಯ ದೊರಕಿಸ ಕೊಡಬೇಕೆಂದು ಫಾದರ್ ಲೊಸಾರ್ಡೊ ಆಗ್ರಹಿಸಿದ್ದಾರೆ.
ಎಪ್ಪತ್ತು ವರ್ಷಗಳಷ್ಟು ಹಳೆಯದಾದ ಈ ಚರ್ಚ್ ಬಂಟ್ವಾಳ - ಮೂಡಬಿದರೆ ರಾಜ್ಯ ಹೆದ್ದಾರಿಯಲ್ಲಿದೆ. ಸ್ಥಳೀಯ ಶಾಸಕ ಮತ್ತು ಸಚಿವರೂ ಆಗಿರುವ ರಮಾನಾಥ್ ರೈ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ ಆರ್ ಲೋಬೋ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.











Click it and Unblock the Notifications