ಕಾದ ಎಣ್ಣೆಯಿಂದ ಬರಿಗೈಲಿ ವಡೆ ತೆಗೆಯುವ ಪವಾಡ ಕಂಡಿರಾ?
ಕಾರವಾರ, ಅಕ್ಟೋಬರ್ 6: ಬಿಸಿ ಎಣ್ಣೆ ಅಂದರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ಅದರಲ್ಲೂ ಬಿಸಿ ಎಣ್ಣೆಯಲ್ಲಿ ಕೈ ಹಾಕೋದಂದ್ರೆ ಸುಮ್ನೇನಾ!
ಆದರೆ, ಇದೇ ರೀತಿ ಕೈ ಹಾಕಿ, ವಡೆ ತೆಗಿಯುವ ಸಂಪ್ರದಾಯವೊಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆಯುತ್ತದೆ. ಹೌದು, ಕುಮಟಾದ ಕಾಮಾಕ್ಷಿ ದೇವಿಯ ಸನ್ನಿಧಿಯಲ್ಲಿ ಇಂಥದ್ದೊಂದು ವಿಶಿಷ್ಟ ಸಂಪ್ರದಾಯ ಅನೇಕ ವರ್ಷಗಳಿಂದ ರೂಢಿಯಲ್ಲಿದೆ.
ಕುಂದಗೋಳದ ಅಲ್ಲಾಪುರದಲ್ಲಿ ಕೆಂಡದ ಮೇಲೆ ಪುಟ್ಟ ಮಕ್ಕಳು
ನವರಾತ್ರಿಯ ಹದಿನೈದು ದಿನದ ಬಳಿಕದ ಆಶ್ವಯುಜ ಶುದ್ಧ ಹುಣ್ಣಿಮೆಯಂದು ಈ ವಡೆ ಸೇವೆಯನ್ನು ನಡೆಸಲಾಗುತ್ತದೆ. ಅನೇಕ ವರ್ಷಗಳಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪದ್ಧತಿಯಂತೆ ಇಲ್ಲಿ ಈ ಸೇವೆ ನಡೆದುಕೊಂಡು ಬರುತ್ತಿದೆ. ವಡೆ ತೆಗೆಯುವ ಸಂಪ್ರದಾಯದ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಪುನಸ್ಕಾರ ಸೇವೆಗಳು ನಡೆಯುತ್ತವೆ.
ತಾಯಿ ಕಾಮಾಕ್ಷಿ ಸ್ಫುರದ್ರೂಪಿಯಾಗಿ, ಕೈಯಲ್ಲಿ ಖಡ್ಗ ಹಿಡಿದು ದುಷ್ಟರ ಸಂಹಾರ ಮಾಡಿ, ಕಣ್ಣಲ್ಲಿ ವಿಜಯದ ಕಳೆಯನ್ನು ತುಂಬಿಕೊಂಡು ಲೋಕೋದ್ಧಾರಕ್ಕೆ ಅವತರಿಸಿದಂತೆ ಸರ್ವಾಲಂಕಾರ ಭೂಷಿತಳಾಗಿ ಈ ಬಾರಿಯೂ ಭಕ್ತರ ಕಣ್ಮನ ಸಳೆಯುತ್ತಿದ್ದಳು. ದೇವಿಗೆ ಒಂದೆಡೆ ಪೂಜೆ ನಡೆಯುತ್ತಿದ್ದರೆ, ಇನ್ನೊಂದೆಡೆ ಬಿಸಿ ಎಣ್ಣೆಯಲ್ಲಿ ಬರಿಗೈಯಲ್ಲಿ ವಡೆ ತೆಗೆಯಲಾಗುತ್ತಿತ್ತು.
ನೋಡೇ ಅನಭವಿಸಬೇಕು ಧಾರವಾಡ ನವರಾತ್ರಿ ಜಾತ್ರಿ
ಈ ಸೇವೆಯನ್ನು ನೋಡುವ ಸಲುವಾಗಿಯೇ ಸಾಕಷ್ಟು ಜನ ಇಲ್ಲಿ ಜಮಾಯಿಸಿದ್ದರು. ಅಂದ ಹಾಗೆ ಹೀಗೆ ಕಾದ ಎಣ್ಣೆಯಲ್ಲಿ ಕೈ ಹಾಕಿ, ವಡೆ ತೆಗೆಯುವುದಕ್ಕೆ ದೇವಿಯ ಪವಾಡವೇ ಕಾರಣ ಅಂತ ಇಲ್ಲಿನ ಭಕ್ತರು ನಂಬಿದ್ದಾರೆ.