'ಸಿದ್ದರಾಮಯ್ಯಗೆ ತೊಂದರೆ ಕೊಟ್ರೆ ಸಂಪೂರ್ಣ ದೇಶದಲ್ಲಿ ಬಿಜೆಪಿ ಬೆಲೆ ತೆರಬೇಕಾದ ಕಾಲ ಬರುತ್ತೆ'
ಬೆಂಗಳೂರು, ಆಗಸ್ಟ್ 17: ಮೈಸೂರಿನ ಮುಡಾ ಅಕ್ರಮ ಪ್ರಕರಣದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಕೂಡ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ರಾಜ್ಯಪಾಲರ ಈ ನಡೆಗೆ ಕಾಂಗ್ರೆಸ್ ಮುಖಂಡರು ಕಿಡಿಕಾರುತ್ತಿದ್ದಾರೆ.
ಈ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ವಿರುದ್ಧ ಹೋದರೆ ಸಂಪೂರ್ಣ ದೇಶದಲ್ಲಿ ಬಿಜೆಪಿ ಬೆಲೆ ತೆರತಕ್ಕಂತಹ ಕಾಲ ಬರುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮುಧೋಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ರಾಜ ಭವನವನ್ನು ದುರ್ಬಳಕೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಕಳಂಕ ರಹಿತ ಸಿಎಂಗೆ ತೊಂದರೆ ಕೊಡುತ್ತಿದೆ.136 ಶಾಸಕರಿಂದ ಆಡಳಿತ ಮಾಡುತ್ತಿರುವ ಸರ್ಕಾರಕ್ಕೆ ಕೇಂದ್ರ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದರು.
ಇದನ್ನು ಸಮರ್ಪಕವಾಗಿ ಎದುರಿಸುವ ಶಕ್ತಿ ನಮಗಿದೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ನಿಮ್ಮ ದುರುದ್ದೇಶ ಮೆಟ್ಟಿ ನಿಲ್ಲುವ ಶಕ್ತಿ ಕಾಂಗ್ರೆಸ್ಗೆ ಇದೆ. ರಾಜ್ಯದಲ್ಲಿ ನೀವು ಮಾಡುತ್ತಿರುವ ಕುತಂತ್ರ ಫಲಿಸುವುದಿಲ್ಲ. ಕೇಂದ್ರ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರಿಗೆ ತೊಂದರೆ ಕೊಟ್ಟರೆ, ದೇಶದಲ್ಲೂ ಬಿಜೆಪಿ ಬೆಲೆ ತೆರತಕ್ಕಂತಹ ಕಾಲ ಬರುತ್ತದೆ. ಇದು ಬಿಜೆಪಿ ರಾಷ್ಟ್ರೀಯ ಮುಖಂಡ ಅಮಿತ್ ಶಾ ಅವರಿಗೆ ಹೇಳುತ್ತಿದ್ದೇನೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರಲ್ಲಿ ವಿನಂತಿ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಕುಗ್ಗಬಾರದು, ನಿಮ್ಮ ಜೊತೆ ನಾವಿದ್ದೇವೆ. ಬಿಜೆಪಿ ಕುತಂತ್ರಕ್ಕೆ ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ. ಬಿಜೆಪಿಯ ಕೆಟ್ಟ ಬುದ್ಧಿ, ಕೆಟ್ಟ ಸಂಸ್ಕೃತಿ ಮತ್ತೊಮ್ಮೆ ರಾಜ್ಯದ ಜನತೆಗೆ ಗೊತ್ತಾಗುತ್ತಿದೆ.
ರಾಷ್ಟ್ರ ಹಾಗೂ ರಾಜ್ಯದ ಜನತೆಗೆ ಬಿಜೆಪಿ ಕುತಂತ್ರ ಬುದ್ಧಿ ತಿಳಿಸುತ್ತೇವೆ. ಸಿಎಂ ಸಾಹೇಬ್ರೆ ನಿಮ್ಮ ಜೊತೆ ರಾಜ್ಯದ ಜನತೆ ಇದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications