ಪಂಚ ಗ್ಯಾರಂಟಿಯಿಂದ ಜನರಿಗಾದ ಉಪಯೋಗವೇನು?: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಕಲಬುರಗಿ, ಜನವರಿ 27: ಬಲಿಷ್ಠ ಸಂವಿಧಾನ ಇಲ್ಲದ ಕಾರಣಕ್ಕೆ ಇಂದಿಗೂ ಹಲವಾರು ದೇಶಗಳಲ್ಲಿ ಅರಾಜಕತೆ ಉಂಟಾಗುತ್ತಿರುವುದು ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ. ಆದರೆ ಹಲವಾರು ಪ್ರಾಂತ್ಯಗಳು, ವಿಭಿನ್ನ ಧರ್ಮಗಳು, ವೈವಿಧ್ಯಮಯ ಸಂಸ್ಕೃತಿ ಒಳಗೊಂಡ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು 75 ವರ್ಷ ಗತಿಸಿದರೂ ಈ ದೇಶ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿರುವುದನ್ನು ನೋಡಿದಾಗ, ಅದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ ಎಂದರೆ ಅತಿಶಯೋಕ್ತಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ದೇಶ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿರುವುದಕ್ಕೆ ಕಾರಣ ಸಂವಿಧಾನ. ಇದಕ್ಕಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನದ ಪಿತಾಮಹ ಎಂದು ನಾವು ಗೌರವದಿಂದ ಸ್ಮರಿಸುತ್ತೇವೆ ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ ಪರಿಕಲ್ಪನೆ ಮತ್ತು ತತ್ವಗಳನ್ನು ಅಕ್ಷರಶಃ: ನಮ್ಮ ಸರ್ಕಾರ ಅನುಸರಿಸುತ್ತಿದೆ. ಭಾರತದ ಸಂವಿಧಾನದ ಆಶಯಕ್ಕೆ ಬದ್ಧವಾಗಿ ನಾಡಿನ ಬಡವರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಬಡವ-ಬಲ್ಲಿದ ಎನ್ನದೆ ಸರ್ವರ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ ಎಂದರು.
ಬಾಬಾಸಾಹೇಬರ ಆಶಯದಂತೆ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಪ್ರಜಾಸತ್ತಾತ್ಮಕವಾಗಿ ನಾಡಿನ ಸಮಸ್ತ ಜನತೆಗೆ ನ್ಯಾಯ, ಸಮಾನತೆ, ಭಾತೃತ್ತ್ವ ಹಾಗೂ ಸ್ವಾತಂತ್ರ್ಯವನ್ನು ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಸಾಕಾರಗೊಳಿಸಿದೆ. ಸಂವಿಧಾನದ ಮೂಲ ಆಶಯವಾದ ಧರ್ಮ ನಿರಪೇಕ್ಷತೆಯ ತತ್ತ್ವಗಳನ್ನು ನಮ್ಮ ಸರ್ಕಾರ ಅಳವಡಿಸಿಕೊಂಡಿದ್ದು, ಸಾಮಾಜಿಕ, ಆರ್ಥಿಕ ಸಬಲೀಕರಣದ ಹಿನ್ನೆಲೆಯಲ್ಲಿ ಜಾತಿ ಮತ, ಧರ್ಮಗಳ ಬೇಧ ಭಾವವಿಲ್ಲದೆ ಪಂಚ ಗ್ಯಾರಂಟಿಗಳ ಫಲವನ್ನು ಹಂಚಲಾಗುತ್ತಿದೆ ಎಂದು ಹೇಳಿದರು.
ಬಡವರ ಕಲ್ಯಾಣಕ್ಕೆ ರೂಪಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ ಈ ಯೋಜನೆಗಳು ಬಡ ಜನರಿಗೆ ಆರ್ಥಿಕ ಭದ್ರತೆ ಒದಗಿಸಿವೆ. ಗ್ಯಾರಂಟಿ ಯೋಜನೆಯ ಲಾಭ ಪಡೆದ ಪ್ರತಿಯೊಬ್ಬ ಫಲಾನುಭವಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿದ್ದು, ಈಗಾಗಲೆ ಕ್ರಿಯಾ ಯೋಜನೆಗೂ ಸರ್ಕಾರ ಅನುಮೋದನೆ ನೀಡಿದೆ. ಈ ಸಾಲಿನಲ್ಲಿ ಮಂಡಳಿಯಿಂದ ಜಿಲ್ಲೆಗೆ 956.58 ಕೋಟಿ ರೂ. ಹಂಚಿಕೆ ಮಾಡಿದ್ದು, ಇದರಲ್ಲಿ 873 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.












Click it and Unblock the Notifications