ಆರ್ಎಸ್ಎಸ್ ಬ್ಯಾನ್; ಬಿಜೆಪಿಯವರಿಗೆ ನನ್ನ ಸವಾಲು ಎಂದ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜುಲೈ 02: ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಬ್ಯಾನ್ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಹೇಳಿಕೆಗೆ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ. RSS ನಿಷೇಧದ ನನ್ನ ಹೇಳಿಕೆಯ ಕುರಿತಾಗಿ ವಿಜಯೇಂದ್ರ ಅವರು ಹಾಗು ಸುನಿಲ್ ಕುಮಾರ್ ಅವರು ಸೇರಿದಂತೆ ಬಿಜೆಪಿಯ ನಾಯಕರು ಬಗೆಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕುರ್ಚಿ ಉಳಿಸಿಕೊಳ್ಳಲು, ರಾಜಕೀಯ ಭವಿಷ್ಯ ಕಂಡುಕೊಳ್ಳಲು RSS ರಕ್ಷಣೆಗೆ ನಿಲ್ಲುವುದು ಬಿಜೆಪಿಯವರಿಗೆ ಅತ್ಯಂತ ಅನಿವಾರ್ಯ, ಏಕೆಂದರೆ ಇವರೆಲ್ಲರ ಜುಟ್ಟು ನಾಗಪುರದ ಹಿಡಿತದಲ್ಲಿದೆ. ಇಷ್ಟವಿಲ್ಲದಿದ್ದರೂ ಬಿಜೆಪಿಯವರು RSS ಸಮರ್ಥನೆ ಮಾಡಿಕೊಳ್ಳಲೇಬೇಕು. RSS ಬಗೆಗೆ ಬಿಜೆಪಿಯವರ ಪ್ರೀತಿ ಗಂಟಲು ಮೇಲಿನದ್ದೇ ಹೊರತು ಹೃದಯದಾಳದ್ದಲ್ಲ, ನೈಜ ಅಭಿಮಾನ ಇದ್ದಿದ್ದರೆ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಶಾಲೆಯ ಬದಲು ಶಾಖೆಗೆ ಕಳಿಸುತ್ತಿದ್ದರು.

ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳೂ ಶಾಖೆಗೆ ಹೋಗಿ RSS ಚಡ್ಡಿ ಹಾಕಿಕೊಂಡು ಕೋಲಾಟ ಆಡುತ್ತಿಲ್ಲ, ಬಿಜೆಪಿಗರಿಗೂ ಗೊತ್ತಿದೆ, RSS ಸಂಪರ್ಕಕ್ಕೆ ಬಂದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ಬೆಂಕಿ ಬೀಳುತ್ತದೆಂದು. ಅಕಸ್ಮಾತ್ ಮೋದಿಯವರು ಬಿಜೆಪಿ ನಾಯಕರ ಮಕ್ಕಳಿಗಾಗಿ "ಸೆಲ್ಫಿ ವಿತ್ ಶಾಖೆ" ಎಂದು ಕರೆ ನೀಡಿದರೆ ಬಿಜೆಪಿಗರ ಬಂಡವಾಳ RSSಗೂ ತಿಳಿಯುತ್ತದೆ. RSS ಎಂಬ ವಿಷಕಾರಿ ಸಂಘಟನೆಯನ್ನು ಸರ್ದಾರ್ ವಲ್ಲಭಾಯ್ ಪಟೇಲರು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿ ನಿಷೇಧ ಹೇರಿದ್ದರು ಎಂಬ ಐತಿಹಾಸಿಕ ಸತ್ಯವನ್ನು ಮಾನ್ಯ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಅರಿತುಕೊಂಡರೆ ಒಳಿತು.
ದಂಡು, ದಾಳಿಗೆ ಹೆದರದಿದ್ದರೂ ಈ ದೇಶದ ಸಂವಿಧಾನಕ್ಕೆ ಹೆದರಲೇಬೇಕು. ಬಿ ವೈ ವಿಜಯೇಂದ್ರ ಅವರೇ, ಸುನೀಲ್ ಕುಮಾರ್ ಅವರೇ, ಈ ದೇಶದಲ್ಲಿ ಸಂವಿಧಾನವೇ ಪರಮೋಚ್ಚ ಶಕ್ತಿ. ಈ ದೇಶದ ಸಮಗ್ರತೆಗೆ ದಕ್ಕೆ ತರುವ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಬೆದರಿಕೆಯೊಡ್ದುವ RSS ಎಂಬ ಕ್ಯಾನ್ಸರ್ ಗೆ ಸಂವಿಧಾನದಲ್ಲಿ ಚಿಕಿತ್ಸೆ ಇದೆ ಎಂಬುದನ್ನು ಬಿಜೆಪಿಯವರು ಮರೆಯದಿರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಕುಟುಕಿದರು.
ಬಿಜೆಪಿಯವರಿಗೆ ನನ್ನ ಸವಾಲು ಎಂದ ಪ್ರಿಯಾಂಕ್ ಖರ್ಗೆ
* ಶತಮಾನೋತ್ಸವ ಆಚರಿಸಲು ಸಿದ್ದವಾಗಿರುವ RSS ಈ ನೂರು ವರ್ಷಗಳಲ್ಲಿ ದೇಶಕ್ಕಾಗಿ ಮಾಡಿದ ಕೇವಲ 10 ಸಾಧನೆಗಳನ್ನು ಹೇಳಿಬಿಡಲಿ.
* ದೇಶದ ಆರ್ಥಿಕತೆ ನೀಡಿದ ಕೊಡುಗೆ ಏನು, ಸಮಾಜದ ಸುಧಾರಣೆಗೆ ಮಾಡಿದ ಕೆಲಸವೇನು, ಅಸಮಾನತೆ, ಶೋಷಣೆಗಳ ನಿರ್ಮೂಲನೆಗೆ ಮಾಡಿದ್ದೇನು?
* ಬಡವರ ಕಲ್ಯಾಣಕ್ಕೆ ಹಮ್ಮಿಕೊಂಡ ಕಾರ್ಯಕ್ರಮಗಳೇನು? ದೇಶದ ಐಕ್ಯತೆಗೆ ದುಡಿದಿದ್ದೇನು?
* RSS ಸಮರ್ಥಿಸುವ ಬಿಜೆಪಿಗರು ಉತ್ತರಿಸಬೇಕು...
* ಸ್ವತಂತ್ರ ಚಳವಳಿಯ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹದ ವೇಳೆ ದೂರ ಉಳಿದಿದ್ದೇಕೆ?
* ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದೆ ಬ್ರಿಟಿಷರ ಪರ ಇದ್ದಿದ್ದೇಕೆ?
* ಸಂವಿಧಾನದ ಕರಡು ಪ್ರತಿ ಸುಟ್ಟಿದ್ದೇಕೆ?
* ರಾಷ್ಟ್ರಧ್ವಜವನ್ನು ವಿರೋಧಿಸಿದ್ದೇಕೆ?
* ದಶಕಗಳ ಕಾಲ ತಿರಂಗಾವನ್ನು ಹಾರಿಸದಿದ್ದಿದ್ದೇಕೆ?
* ದೇಶವು ಮೂರು ಯುದ್ಧಗಳನ್ನು ಎದುರಿಸಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ಬಲಿಷ್ಠ ಸಂಘಟನೆ?
* ದೊಗಲೆ ಚಡ್ಡಿ, ತುಂಡು ಕೋಲು ಹಿಡಿದ ಮಾತ್ರಕ್ಕೆ ಯಾರೂ ಸಂವಿಧಾನವನ್ನು ಎದುರಿಸುವಷ್ಟು ಶಕ್ತಿವಂತರಾಗುವುದೂ ಇಲ್ಲ, ದೇಶಭಕ್ತರೆನಿಸಿಕೊಳ್ಳುವುದೂ ಇಲ್ಲ.












Click it and Unblock the Notifications