ಬಿಜೆಪಿಯವರಿಗೆ ಏನೇನು ಸಮಸ್ಯೆ ಇದ್ಯೋ? ಏನೇನೂ ನೋವಿದ್ಯೋ..?: ಎನ್.ಚಲುವರಾಯಸ್ವಾಮಿ
ಮಂಡ್ಯ, ಜೂನ್ 28: ಬಿಜೆಪಿಯಲ್ಲಿನ ಬಾಂಬೆ ಟೀಂ ಮೇಲೆ ಈಶ್ವರಪ್ಪ ಕಿಡಿ ಕಾರಿರುವುದನ್ನು ನೋಡಿದೆ. ಅವರ ಪಕ್ಷದಲ್ಲಿ ಆಂತರಿಕ ಜಗಳ ಆಡಬೇಡಿ ಎಂದು ಹೇಳೋಕೆ ನಾವ್ಯಾರು? ಅದು ಆಗುತ್ತಾ? ಅವರಿಗೆ ಏನೇನು ಸಮಸ್ಯೆ ಇದ್ಯೋ? ಏನೇನೂ ನೋವಿದ್ಯೋ..? ಎಂದು ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಏನೇನು ಮಾಡುತ್ತಾರೋ ಮಾಡಲಿ. ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ ಅವರು, ಬಿಜೆಪಿಯೊಳಗಿನ ಸಮಸ್ಯೆಯನ್ನು ಅವರ ನಾಯಕರೇ ಸರಿಪಡಿಸಿಕೊಳ್ಳಬೇಕು. ಕಾಂಗ್ರೆಸ್ನಿಂದ ಬಂದವರಿಂದ ಬಿಜೆಪಿಯೊಳಗಿನ ಶಿಸ್ತು ಹೋಗಿದೆ ಎನ್ನುವುದನ್ನು ಅಲ್ಲಿಗೆ ಕರೆದುಕೊಂಡು ಹೋದವರೇ ಹೇಳಬೇಕು.

ಕಾಂಗ್ರೆಸ್ನಿಂದ ಕರೆದುಕೊಂಡು ಹೋಗಿ ಸರಕಾರ ಮಾಡಿದರು. ಆದರೆ, ಅವರ ಆಡಳಿತದಲ್ಲಿ ಜನರಿಗೆ ಉಪಯೋಗವಾಗಲಿಲ್ಲ. ಒಳ್ಳೆಯ ಆಡಳಿತ ನೀಡುವುದಕ್ಕಾಗಿ ಕೆಟ್ಟ ಹೆಸರು ತಂದುಕೊಂಡರು. ಅದಕ್ಕಾಗಿಯೇ ಜನರು ಕಾಂಗ್ರೆಸ್ಗೆ 135 ಸ್ಥಾನಗಳನ್ನು ಕೊಟ್ಟು ಸ್ಥಿರ ಸರಕಾರ ರಚನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನ ಗ್ಯಾರಂಟಿಗಳಿಂದಾಗಿ ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಜನರಿಗೆ ಕಾಂಗ್ರೆಸ್ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುವುದು ಬಿಜೆಪಿಗೆ ಇಷ್ಟವಿಲ್ಲ. ಇದರಿಂದಾಗಿಯೇ ಹಣ ಕೊಟ್ಟರೂ ಕೇಂದ್ರ ಸರಕಾರ ಅಕ್ಕಿ ಕೊಡುತ್ತಿಲ್ಲ ಕೇಂದ್ರದ ವಿರುದ್ಧ ಅಸಮಾಧಾನದ ವ್ಯಕ್ತಪಡಿಸಿದು.
ಲೋಕಸಭೆಗೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ನವರು ಮೈತ್ರಿ ಮಾಡಿಕೊಳ್ಳುತ್ತಾರೋ? ಪರೋಕ್ಷವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅಥವಾ ಪೂರ್ಣ ವಿಲೀನ ಮಾಡಿಕೊಳ್ಳುತ್ತಾರೋ? ಅದು ಆ ಪಕ್ಷಗಳಿಗೆ ಬಿಟ್ಟಿದ್ದು. ಈಗ ಜನರು ನಮಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ಸಮರ್ಥವಾಗಿ ಎದುರಿಸುತ್ತೇವೆ. ಬಿಜೆಪಿ-ಜೆಡಿಎಸ್ಗೆ ಕಾಂಗ್ರೆಸ್ ಅಲ್ಲದೆ ಮತ್ಯಾವ ಪಕ್ಷ ಟಾರ್ಗೆಟ್ ಆಗಲು ಸಾಧ್ಯ ಎಂದು ಹೇಳಿದರು.
ಮಂಡ್ಯ ಕ್ಷೇತ್ರದಿಂದ ನಟಿ ರಮ್ಯ ಸ್ಪರ್ಧೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಟಿ ರಮ್ಯಾ ಅಥವಾ ಮತ್ಯಾರು ಅಭ್ಯರ್ಥಿ ಆಗುತ್ತಾರೆಂಬುದು ನನಗೆ ಗೊತ್ತಿಲ್ಲ. ಆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಸಾಕಷ್ಟು ಮಂದಿ ಆಕಾಂಕ್ಷಿತರಿದ್ದಾರೆ. ಹೊರಗಿನವರನ್ನು ಕರೆತರುವ ಅವಶ್ಯಕತೆಯಿಲ್ಲ. ಬೇರೆ ಪಕ್ಷದವರು ಹೊಂದಾಣಿಕೆ ಮಾಡಿಕೊಂಡರೂ ನಾವು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮುಂಗಾರು ವಿಳಂಬದಿಂಂದಾಗಿ ಕಾವೇರಿ, ಹೇಮಾವತಿ ನದಿಯಲ್ಲಿ ನೀರಿಲ್ಲ. ಇದರಿಂದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟವೂ ಕಡಿಮೆಯಗಿದೆ. ಜು. 5 ರೊಳಗೆ ಒಳ್ಳೆಯ ಮಳೆಯಾಗಲಿದೆ ಎಂಬ ವರದಿ ಹವಾಮಾನ ಇಲಾಖೆಯಿಂದ ಬಂದಿದೆ. ನಾವೂ ಕೂಡ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇವೆ. ನಾಡಿನ ಜನರು ಪ್ರಾರ್ಥಿಸಲಿ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು-ಬೆಂಗಳೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ನಾಡಪ್ರಭು ಕೆಂಪೇಗೌಡರು ಕಾರಣ. ಸದಾ ಅವರನ್ನು ನೆನೆಯೋದು ನಮ್ಮೆಲ್ಲರ ಕರ್ತವ್ಯ. ಕೆಂಪೇಗೌಡರ ಜಯಂತಿ ಆರಂಭಿಸಿದ ಕೀರ್ತಿ ಕಾಂಗ್ರೆಸ್ನದು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ಕಾಂಗ್ರೆಸ್. ಹೆಸರಿಟ್ಟ ಮೇಲೆ ಪ್ರತಿಮೆ ನಿರ್ಮಿಸುವುದು ಅನಿವಾರ್ಯ. ಯಾರಿದ್ದರೂ ಪ್ರತಿಮೆ ಮಾಡುತ್ತಿದ್ದರು. ಇನ್ನೊಂದು ಪ್ರತಿಮೆ ಇಡಲು ಆಗುತ್ತಿರಲಿಲ್ಲ. ಕೆಂಪೇಗೌಡರ ಹೆಸರು ನಾಮಕರಣವಾಗಿದ್ದರೆ ಬಿಜೆಪಿಯವರು ಬೇರೆ ಪ್ರತಿಮೆ ಇಟ್ಟಿರೋರು ಎಂದರು.












Click it and Unblock the Notifications