MB Patil: ಲೋಕಸಭಾ ಚುನಾವಣೆ ನಂತರ ಸರ್ಕಾರ ಪತನ; ಎಂಬಿ ಪಾಟೀಲ್ ಭವಿಷ್ಯ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದು ತೀವ್ರ ಚರ್ಚೆ ಹುಟ್ಟುಹಾಕಿದೆ. ಶಿಂಧೆ ಹೇಳಿಕೆಗೆ ಕರ್ನಾಟಕ ಸರ್ಕಾರ ತಿರುಗೇಟು ಕೊಟ್ಟಿದ್ದು, ಹಗಲುಕನಸು ಕಾಣಬೇಡಿ ಎಂದು ಹೇಳಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಸರ್ಕಾರ ಪತನವಾಗಲಿದ್ದು, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದರು. ಸಚಿವ ಎಂಬಿ ಪಾಟೀಲ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಲೋಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರ ಸರ್ಕಾರವೇ ಪತನವಾಗಲಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಂಬಿ ಪಾಟೀಲ್, "ಬೀಳಲಿರುವುದು ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವಲ್ಲ! ಬದಲಿಗೆ ಏಕ್ ನಾಥ್ ಶಿಂಧೆ ಅವರ ಮಹಾರಾಷ್ಟ್ರ ಸರ್ಕಾರ ಈ ಲೋಕಸಭಾ ಚುನಾವಣೆ ನಂತರ ಪತನವಾಗಲಿದೆ." ಎಂದು ಹೇಳಿದ್ದಾರೆ.
ಬರೆದಿಟ್ಟುಕೊಳ್ಳಿ 1ತಿಂಗಳ ಅವಧಿಯಲ್ಲಿ ಏಕ್ ನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಿಎಂ ಅವರಿಗೆ ಶಾಕ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ರಚನೆ!
ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಪಕ್ಷವನ್ನು ತೊರೆದು ಹೋದ ಶಾಸಕರು ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರೆಲ್ಲಾ ಮರಳಿ ಬರಲಿದ್ದಾರೆ. ಕಾಂಗ್ರೆಸ್ ಒಳಗೊಂಡ ಸರ್ಕಾರ ಅಲ್ಲಿ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಯಾವುದೇ ಒಳಜಗಳವಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠವೆಂದರು 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತಿರುಗೇಟು
ಏಕನಾಥ್ ಶಿಂಧೆ ಅವರ ಹೇಳಿಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ಇದು ಕೇವಲ ಹಗಲುಗಗನಸು, ನಮ್ಮ ಶಾಸಕರು ಮಾರಾಟಕ್ಕಿಲ್ಲ ಎಂದು ಹೇಳಿದ್ದಾರೆ.
ಇದು ಕೇವಲ ಹಗಲುಗನಸು. ಈ ಹಿಂದೆ ಮಹಾರಾಷ್ಟ್ರ ಅಥವಾ ಕರ್ನಾಟಕದಲ್ಲಿ ಮಾಡಿದ್ದನ್ನು ಮತ್ತೆ ಮಾಡಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ ಎಂದು ಆಪರೇಷನ್ ಕಮಲವನ್ನು ಉಲ್ಲೇಖಿಸಿ ಹೇಳಿದರು.
ಮಹಾರಾಷ್ಟ್ರದ ಸತಾರಾದಲ್ಲಿ ಸೋಮವಾರ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿಂಧೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು 'ಮಹಾರಾಷ್ಟ್ರ ಮಾದರಿ'ಯನ್ನು ಬಳಸಿಕೊಳ್ಳಲಾಗುವುದು ಎಂದು ಸುಳಿವು ನೀಡಿದ್ದರು.












Click it and Unblock the Notifications