ರಮೇಶ್ ಜಾರಕಿಹೊಳಿ ವಾಸವಾಗಿದ್ದ ಸರ್ಕಾರಿ ನಿವಾಸದ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣು! ಕಾರಣವೇನು?
ಬೆಂಗಳೂರು, ಜೂನ್ 09: ಸಿದ್ದರಾಮಯ್ಯ ಸರ್ಕಾರದ ಹಲವು ಸಚಿವರುಗಳಿಗೆ ಸರ್ಕಾರಿ ಬಂಗಲೆಯನ್ನ ನೀಡಿದ್ದು, ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿರುವ ಸರ್ಕಾರಿ ಬಂಗಲೆಯಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಳಿದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಳಿದುಕೊಂಡಿದ್ದ ಸರ್ಕಾರಿ ನಿವಾಸದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿಯವರು ಸಹ ಈ ಹಿಂದೆ ಇದೆ ನಿವಾಸಕ್ಕಾಗಿ ಸಾಕಷ್ಟು ಪಟ್ಟು ಹಿಡಿದಿದ್ದು, ಕೊನೆ ಕ್ಷಣದಲ್ಲಿ ಈ ನಿವಾಸವನ್ನ ರಮೇಶ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು, ಇದೀಗ ಇದೇ ನಿವಾಸದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಳಿದುಕೊಳ್ಳಲು ತಿರ್ಮಾನಿಸಿದ್ದಾರೆ ಎನ್ನಲಾಗಿದೆ.

ಸ್ಯಾಂಕಿ ರಸ್ತೆಯಲ್ಲಿ ಇರುವ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿ ಇರುವ ಬಲಭಾಗದ ನಾಲ್ಕನೇ ನಿವಾಸದಲ್ಲಿ ಈ ಹಿಂದೆ ರಮೇಶ್ ಜಾರಕಿಹೊಳಿ ಉಳಿದುಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಇದೇ ಸರ್ಕಾರಿ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ವಾಸ್ತವ್ಯ ಹೂಡಿದ್ದರು.
ಈ ಹಿಂದೆ ಈ ನಿವಾಸವನ್ನ ಅದೃಷ್ಟದ ನಿವಾಸ ಎಂದು ಹೇಳಲಾಗಿದ್ದು, ಈ ನಿವಾಸಕ್ಕಾಗಿಯೇ ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ಲಾಬಿ ನಡೆಸಿದ್ದು, ಇದೀಗ ಇದೇ ನಿವಾಸದಲ್ಲಿ ಉಳಿದು ಕೊಳ್ಳಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪೂರಕ ಎಂಬಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಬೆಳಗ್ಗೆ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಗೆ ಆಗಮಿಸಿ ಸರ್ಕಾರಿ ಬಂಗಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಿವಾಸದ ಕೀ ಇಲ್ಲದ ಕಾರಣದಿಂದ ಹೊರಗಡೆ ಮಾತ್ರ ಪರಿಶೀಲನೆ ನಡೆಸಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಖಾತೆ, ಕೊಠಡಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನ ನೇಮಕ ಮಾಡಿದ್ದು, ಇದೀಗ ಸಚಿವರುಗಳು ತಮ್ಮಗೆ ಇಷ್ಟವಿರುವ ಸರ್ಕಾರಿ ನಿವಾಸವನ್ನ ಪಡೆಯುವ ಪ್ರಯತ್ನವನ್ನ ನಡೆಸುತ್ತಿದ್ದಾರೆ.












Click it and Unblock the Notifications