ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಪರ ಸಚಿವ ಸುಧಾಕರ್ ಬ್ಯಾಟಿಂಗ್
ಬೆಂಗಳೂರು, ಜನವರಿ 5: ಸಂಪೂರ್ಣ ಸ್ವದೇಶಿ ನಿರ್ಮಿತ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿರುವುದು ಚರ್ಚೆಗೆ ಒಳಗಾಗಿದೆ. ಮೂರನೇ ಹಂತದ ಪ್ರಯೋಗ ಇನ್ನೂ ಮುಗಿದಿಲ್ಲ. ಹಾಗೂ ಲಸಿಕೆ ಸುರಕ್ಷತೆ ಮತ್ತು ದಕ್ಷತೆಗೆ ಸಂಬಂಧಿಸಿದಂತೆ ನಿಖರ ದತ್ತಾಂಶಗಳಿಲ್ಲದೆ ಲಸಿಕೆಗೆ ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Recommended Video
ಇದು ಆತುರದ ನಿರ್ಧಾರವಾಗಿದ್ದು, ಲಸಿಕೆ ಸುರಕ್ಷಿತವಾಗಿದ್ದರೂ ಪರಿಣಾಮಕಾರಿಯಾಗಿಲ್ಲದೆ ಹೋದರೆ ಬಳಕೆಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ವ್ಯರ್ಥ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಈಗಾಗಲೇ ಭಾರತ್ ಬಯೋಟೆಕ್ ಸ್ಪಷ್ಟೀಕರಣಗಳನ್ನು ನೀಡಿದೆ.
ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿರುವ ಕ್ರಮವನ್ನು ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಭಾರತ್ ಬಯೋಟೆಕ್ ಜಾಗತಿಕವಾಗಿ ವಿಶ್ವಾಸಾರ್ಹತೆ ಹೊಂದಿರುವ ಕಂಪೆನಿಯಾಗಿದೆ. ಇದು ಲಸಿಕೆ ಉತ್ಪಾದನೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಅನೇಕ ದೇಶಗಳಿಗೆ ವಿವಿಧ ಲಸಿಕೆಗಳನ್ನು ನೀಡಿದೆ. ಇಂತಹ ಕಂಪೆನಿಯ ವಿಜ್ಞಾನಿಗಳ ಕಠಿಣ ಶ್ರಮವನ್ನು ಕೆಡಿಸುವಂತಹ ಟೀಕೆಗಳನ್ನು ಮಾಡಬೇಡಿ ಎಂದು ಅವರು ಕಂಪೆನಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಮುಂದೆ ಓದಿ.

ಜಗತ್ತು ಭಾರತದತ್ತ ನೋಡುತ್ತಿದೆ
'ಭಾರತ್ ಬಯೋಟೆಕ್ನ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ಗೆ ಅನುಮತಿ ನೀಡಿರುವುದು ಭಾರತದ ಸ್ವದೇಶಿ ನಿರ್ಮಿತ ಹೊಸ ಲಸಿಕೆ ವ್ಯವಸ್ಥೆಯಲ್ಲಿ ಮಹತ್ವದ ಮೈಲುಗಲ್ಲನ್ನು ಸೃಷ್ಟಿಸಿದೆ. ಈ ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಸಾಮಾನ್ಯ ಹೋರಾಟದಲ್ಲಿ ಜಗತ್ತು ಲಸಿಕೆಗಳ ಅತಿ ದೊಡ್ಡ ರಫ್ತುದಾರ ದೇಶಗಳಲ್ಲಿ ಒಂದಾದ ಭಾರತದತ್ತ ನೋಡುತ್ತಿದೆ' ಎಂದು ಅವರು ಹೇಳಿದ್ದಾರೆ.

ಭಾರತ್ ಬಯೋಟೆಕ್ ವಿಶ್ವಾಸಾರ್ಹ ಕಂಪೆನಿ
'ಭಾರತ್ ಬಯೋಟೆಕ್ ಜಾಗತಿಕ ಪ್ರತಿಷ್ಠಿತ ಕಂಪೆನಿಯಾಗಿದ್ದು, ಇನ್ಫ್ಲೂಯೆಂಜಾ ಎಚ್1ಎನ್1, ರೊಟಾವೈರಸ್, ಜಪಾನೀಸ್ ಎನ್ಸೆಫಾಲಿಟಿಸ್, ರೇಬಿಸ್, ಚಿಕೂನ್ಗುನ್ಯಾ, ಝೈಕಾ ಮತ್ತು ಟೈಫಾಯ್ಡ್ಗೆ ಜಗತ್ತಿನ ಮೊದಲ ಟೆಟಾನಸ್-ಟಾಕ್ಸೈಡ್ ಲಸಿಕೆ ಸೇರಿದಂತೆ 16 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಅನುಭವ ಹಾಗೂ ವಿಶ್ವಾಸಾರ್ಹತೆ ಹೊಂದಿದೆ' ಎಂದು ತಿಳಿಸಿದ್ದಾರೆ.

150ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ನೀಡಿದ್ದಾರೆ
'ವಿನಮ್ರ ಹಿನ್ನೆಲೆಯಿಂದ ಬಂದ ಭಾರತ್ ಬಯೋಟೆಕ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಕೃಷ್ಣ ಎಲ್ಲಾ, ಬಹಳ ಉತ್ಕಟಭಾವದ ವೃತ್ತಿಪರ. ಯುನಿಸೆಫ್ ಮತ್ತು ಇತರೆ ಮಾರ್ಗಗಳ ಮೂಲಕ 150ಕ್ಕೂ ಅಭಿವೃದ್ಧಿಶೀಲ ದೇಶಗಳಲ್ಲಿನ ಸವಲತ್ತು ರಹಿತ ಜನರಿಗೆ 4 ಬಿಲಿಯನ್ಗೂ ಅಧಿಕ ಡೋಸ್ ಲಸಿಕೆಗಳನ್ನು ರವಾನಿಸುವ ವಿಶ್ವಾಸಾರ್ಹತೆ ಹೊಂದಿದ್ದಾರೆ' ಎಂದು ಶ್ಲಾಘಿಸಿದ್ದಾರೆ.

ವಿಜ್ಞಾನಿಗಳ ಶ್ರಮಕ್ಕೆ ಕಳಂಕ ಅಂಟಿಸಬೇಡಿ
'ಕೋವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗದಲ್ಲಿ 24,000 ಸ್ವಯಂಸೇವಕರು ಇದ್ದಾರೆ. ಅದರ ದತ್ತಾಂಶ ಶೀಘ್ರದಲ್ಲಿಯೇ ಲಭ್ಯವಾಗಲಿದೆ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮಕ್ಕೆ ಕಳಂಕ ತರುವಂತಹ ಅನಗತ್ಯ ಟೀಕೆಟಿಪ್ಪಣಿಗಳಿಂದ ಜನರು ದೂರ ಇರಬೇಕು ಎಂದು ಆರೋಗ್ಯ ಸಚಿವನಾಗಿ ಮಾತ್ರವಲ್ಲ, ಒಬ್ಬ ವೈದ್ಯಕೀಯ ವೃತ್ತಿಪರನಾಗಿ ಪ್ರತಿಯೊಬ್ಬರಿಗೂ ಮನವಿ ಮಾಡುತ್ತೇನೆ' ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications