ಜನಾದೇಶ ಸಿಕ್ಕಿದ್ದರೆ ಖರ್ಗೆ ಸಿಎಂ ಆಗ್ತಿದ್ರು : ಆಂಜನೇಯ
ಯಾದಗಿರಿ,ಮೇ 01: ಸಮಾಜ ಕಲ್ಯಾಣ ಸಚಿವ ಎಚ್ ಅಂಜನೇಯ ಅವರು ದಲಿತ ಸಿಎಂ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ದಲಿತ ಸಿಎಂ, ಸಿದ್ದರಾಮಯ್ಯ ಅವರ ನಾಯಕತ್ವ, ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ.
2008ರಲ್ಲಿ ಜನಾದೇಶ ಸಿಕ್ಕಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು 'ದಲಿತ ಸಿಎಂ' ಆಗುತ್ತಿದ್ದರು. ಆದರೆ, ಜನ ಬಯಸಿದ್ದು ಬೇರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಗೆ ಜನಾದೇಶ ಸಿಕ್ಕಿತು. ಕೆಲ ನಿಮಿಷಗಳಲ್ಲೇ ಸಿಎಂ ಆಗಿ ಸಿದ್ದರಾಮಯ್ಯ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಇಂಥದ್ದೊಂದು ವ್ಯವಸ್ಥೆ ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ ಎಂದು ಎಚ್ ಆಂಜನೇಯ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆಗೆ ಯಾವ ಶಾಸಕರು ಕೇಳಿಲ್ಲ. ಹೈಕಮಾಂಡ್ ಕೂಡಾ ಈ ಬಗ್ಗೆ ಯಾವುದೇ ವರದಿ ಕೇಳಿಲ್ಲ. ಹೀಗಾಗಿ, ಅವಕಾಶ ಇಲ್ಲದೆ ದಲಿತರನ್ನು ಸಿಎಂ ಮಾಡಿ ಎಂದು ಕೇಳುವುದು ದಲಿತರನ್ನು ಅವಮಾನ ಮಾಡಿದಂತೆ.
ದಲಿತ ಸಿಎಂ ಬೇಕು ಎನ್ನುವ ಚರ್ಚೆಗೆ ಅಂತ್ಯ ಆಡುವುದು ಒಳ್ಳೆಯದು. ಜನ ಬಯಸಿದಾಗ ದಲಿತರಿಗೆ ಉನ್ನತ ಸ್ಥಾನ ಸಿಗುತ್ತದೆ. 2018ರ ಚುನಾವಣೆಯಲ್ಲಿ ಜನ ಬಯಸಿದರೆ ದಲಿತರ ಸಿಎಂ ಕಾಣಬಹುದು. ನಾನು ಕ್ಯಾಬಿನೆಟ್ ಮಂತ್ರಿಯಾಗಿದ್ದೇನೆ, ಸಿದ್ದರಾಮಯ್ಯ ಅವರ ಒಳ್ಳೆ ಕಾರ್ಯಗಳ ಪರ ಬ್ಯಾಟಿಂಗ್ ಮಾಡುತ್ತೇನೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications