Get Updates
Get notified of breaking news, exclusive insights, and must-see stories!

ಬಡತನ ನಿರ್ಮೂಲನೆಗಾಗಿ ಹುಟ್ಟಿದ ಮೈಕ್ರೋಫೈನಾನ್ಸ್‌ಗಳು ಮಾಡುತ್ತಿರುವುದೇನು?

ಬೆಂಗಳೂರು, ಫೆಬ್ರವರಿ 15: ಇವತ್ತು ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಸೂಲಿ ಸಂಬಂಧಿಸಿದ ವೀಡಿಯೋಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ವಸೂಲಿ ಮಾಡಲು ಬರುವವರ ಗೂಂಡಾವರ್ತನೆ, ಅಶ್ಲೀಲ ಬೈಗುಳಗಳು, ಬೆದರಿಕೆ, ಧಮಕಿ ಅದೆಲ್ಲವನ್ನೂ ಅನುಭವಿಸಿದವರು ಹಣವನ್ನು ಕಟ್ಟಲಾಗದೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಅವಮಾನದಿಂದಲೇ ಸಾವಿಗೆ ಶರಣಾಗುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಮೈಕ್ರೋಫೈನಾನ್ಸ್ ಗಳಿಗೆ ಗ್ರಾಹಕರೇ ಬಡವರು, ಮಧ್ಯಮವರ್ಗದವರು. ಹೀಗಾಗಿ ಅವರಿಗೆ ಅವರ ಸಾಮರ್ಥ್ಯ ಮೀರಿದ ಸಾಲವನ್ನು ನೀಡಿ ದುಪ್ಪಟ್ಟು ಹಣವನ್ನು ಬಡ್ಡಿಯಾಗಿ ಕೊಡಿ ಎಂದು ಪೀಡಿಸಿದರೆ ಅವರು ತಾನೆ ಏನು ಮಾಡಬೇಕು? ಸಾಲ ಪಡೆದು ಗುಡಿಸಲೋ ಅಥವಾ ಮಗಳಿಗೆ ಮದುವೆನೋ ಮಾಡಿರುತ್ತಾರೆ. ಬೆಳೆ ಬಂದರೆ ಸಾಲ ಕಟ್ಟಿಬಿಡಬಹುದೇನೋ ಧೈರ್ಯ ಇರುತ್ತದೆ.

Microfinance Exploring the Issues Faced by Borrowers

ಆದರೆ ಕೆಲವೊಮ್ಮೆ ಅಂದು ಕೊಂಡಿದ್ದು ಆಗದೇ ಹೋದರೆ ಸಾಲದ ಬಡ್ಡಿ ಕಟ್ಟಲಾಗದೆ ಕನಲಿ ಹೋಗಿ ಬಿಡುತ್ತಾರೆ. ದುಡ್ಡು ಇಟ್ಟುಕೊಂಡು ಬಡ್ಡಿಕಟ್ಟದೆ ಯಾರೂ ಕಳ್ಳಾಟ ಆಡುವುದಿಲ್ಲ. ದುಡ್ಡಿಲ್ಲದಾಗಲೇ ತಪ್ಪಿಸಿಕೊಂಡು ಓಡಾಡೋಕೆ ಶುರು ಮಾಡುತ್ತಾರೆ. ಹಾಗೆಂದು ಸಾಲವನ್ನು ವಾಪಸ್ ಕೊಡೋದಿಲ್ಲ ಅಂಥ ಹೇಳುತ್ತಿಲ್ಲ. ನ್ಯಾಯದಿಂದ ಬಡ್ಡಿ ತೆಗೆದುಕೊಳ್ಳಿ ಅಂತಿದ್ದಾರೆ.

ಇವತ್ತಿಗೂ ಬಡ್ಡಿಗೆ ಹಣ ನೀಡುವವರು ಎಲ್ಲ ಕಡೆಯೂ ಇದ್ದಾರೆ. ಅವರಿಗಿಂತಲೂ ಕ್ರೂರವಾಗಿ ಫೈನಾನ್ಸ್ ಸಂಸ್ಥೆಗಳು ನಡೆದುಕೊಳ್ಳುತ್ತಿರುವುದು ಮಾತ್ರ ಬೇಸರ ತರುವಂತಹದ್ದಾಗಿದೆ. ಬಹಳಷ್ಟು ಜನ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದ ತಪ್ಪಿಗೆ ಚಿನ್ನವನ್ನೆಲ್ಲ ಮಾರಿ ಸಾಲ ತೀರಿಸಿ ಅಬ್ಬಾ ಮಾರಿ ಹೋಯಿತೆಂದು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೆ ಕೆಲವರು ಖಾಲಿ ಕೈಯಾಗಿ ಕುಳಿತವರು ಇಲ್ಲದಿಲ್ಲ. ಸಾಲ ಕೊಡುವಾಗ ಏನನ್ನೂ ಹೇಳದೆ ಏಜೆಂಟರ ಮೂಲಕ ಸಾಲ ಕೊಡಿಸುವ ಸಂಸ್ಥೆಗಳು ವಸೂಲಿಗೆ ಇಳಿದಾಗ ಸಾಲಪಡೆದವರ ನಿದ್ದೆ ಗೆಡಿಸುವಂತೆ ಮಾಡಿಬಿಡುತ್ತಾರೆ.

Microfinance Exploring the Issues Faced by Borrowers

ಸದುದ್ದೇಶಕ್ಕಾಗಿ ಹುಟ್ಟಿಕೊಂಡ ಮೈಕ್ರೋಫೈನಾನ್ಸ್

ನಾವು ಮೈಕ್ರೋಫೈನಾನ್ಸ್ ಗಳ ಹಿಂದಿನ ಹುಟ್ಟು ಮತ್ತು ಬೆಳವಣಿಗೆಯನ್ನು ನೋಡಿದ್ದೇ ಆದರೆ ಅವುಗಳು ರೂಪುಗೊಂಡ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ಮೂಲ ಉದ್ದೇಶಗಳನ್ನು ಮರೆತು ಅವು ಕೇವಲ ಲಾಭ ಮಾಡುವ ಕಾಯಕದಲ್ಲಿ ತೊಡಗಿರುವುದು, ಆರ್ಥಿಕ ವಿಸ್ತರಣೆಗೆ ಮುಂದಾಗಿರುವುದು ಕಾಣಿಸುತ್ತಿದೆ. ಇದೆಲ್ಲದರ ನಡುವೆ ಮೈಕ್ರೋಫೈನಾನ್ಸ್ ಗಳ ಕುರಿತಂತೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿಗಳು ನಮಗೆ ದೊರೆಯುತ್ತವೆ. ಅವುಗಳ ಸ್ಥಾಪನೆಯ ಉದ್ದೇಶ ಏನಾಗಿತ್ತು ಎಂಬುದು ಗೊತ್ತಾಗುತ್ತದೆ.

ಇಷ್ಟಕ್ಕೂ ಈ ಮೈಕ್ರೋಫೈನಾನ್ಸ್ ಗಳು ಕೇವಲ ನಮ್ಮ ದೇಶದಲ್ಲಿ ಮಾತ್ರ ಕಾರ್ಯಾಚರಿಸುತ್ತಿಲ್ಲ. ಎಲ್ಲ ಕಡೆಯೂ ಇವೆ. ಅದರಲ್ಲೂ ಬಾಂಗ್ಲಾದೇಶ, ಕಾಂಬೋಡಿಯಾ, ಅಫ್ಘಾನಿಸ್ತಾನ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಇಂಡೋನೇಷ್ಯಾ ಮತ್ತು ಈಕ್ವೆಡಾರ್‌ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇವು ಕಾರ್ಯಾಚರಿಸುತ್ತಿವೆ. ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮೈಕ್ರೋಫೈನಾನ್ಸ್ ಗಳು ಕಿರುಬಂಡವಾಳವನ್ನು ಸಾಲದ ರೂಪದಲ್ಲಿ ನೀಡಿ ಬಳಿಕ ಅವರಿಂದ ಅದನ್ನು ವಸೂಲಿ ಮಾಡುವ ಉದ್ದೇಶದಿಂದ ಹುಟ್ಟಿಕೊಂಡಿವೆ. ಮತ್ತು ಈ ಮೈಕ್ರೋಫೈನಾನ್ಸ್ ಗಳಿಗೆ ತನ್ನದೇ ಆದ ಇತಿಹಾಸ ಇರುವುದನ್ನು ನಾವು ಕಾಣಬಹುದಾಗಿದೆ.

18ನೇ ಶತಮಾನದಲ್ಲಿ ಹುಟ್ಟಿಕೊಂಡ ಕಲ್ಪನೆ

18ನೇ ಶತಮಾನದಲ್ಲಿ ಇವುಗಳು ಐರಿಶ್ ನಲ್ಲಿ ಅಸ್ಥಿತ್ವಕ್ಕೆ ಬಂದವು ಎಂದು ಹೇಳಲಾಗುತ್ತಿದೆ. ಅಲ್ಲಿನ ಜೊನಾಥನ್ ಸ್ವಿಫ್ಟ್ ಎಂಬಾತ ಇದನ್ನು ಪರಿಚಯಿಸಿದನು. ಆಗ ಇದನ್ನು ಮೈಕ್ರೋಲೆಂಡಿಂಗ್ ಎಂದೇ ಕರೆಯಲಾಗುತ್ತಿತ್ತು. ಅವತ್ತಿನ ಉದ್ದೇಶಗಳೇ ಬೇರೆಯಾಗಿತ್ತು. ಆಗ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಆರ್ಥಿಕ ಸಹಾಯದ ಅಗತ್ಯವಿದ್ದ ಕಾರಣ ಇದು ಸಹಕಾರಿಯಾಗಿತ್ತು. ಮತ್ತು ಬಡವರು ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಕೂಡ ಇದರ ಬಹುಮುಖ್ಯ ಉದ್ದೇಶವಾಗಿತ್ತು.

ಕಾಲಾನಂತರದಲ್ಲಿ ಒಂದಷ್ಟು ಬದಲಾವಣೆಗೊಂಡು 1970ರ ಹೊತ್ತಿಗೆ ಆಧುನಿಕ ಮಾರ್ಪಾಡುಗೊಂಡು ಮೈಕ್ರೋಫೈನಾನ್ಸಿಂಗ್ ಆಯಿತು. 1983ರಲ್ಲಿ ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ಮೈಕ್ರೋಫೈನಾನ್ಸಿಂಗ್ ಕಲ್ಪನೆಯಡಿ ಮೊದಲ ಗ್ರಾಮೀಣ ಬ್ಯಾಂಕ್ ನ್ನು ಸ್ಥಾಪಿಸಿದರು. ಆ ಮೂಲಕ ಗ್ರಾಹಕರಿಗೆ ಸಾಲಗಳನ್ನು ನೀಡುವುದರ ಜೊತೆಗೆ, ಬಡತನವನ್ನು ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮತ್ತು ಜನರಲ್ಲಿ ಬ್ಯಾಂಕಿಂಗ್ ಅರಿವು ಮೂಡಿಸಿದಷ್ಟೇ ಅಲ್ಲದೆ, ಸಾಲ ಮತ್ತು ಉಳಿತಾಯ ಎರಡರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು.

ನಾಯಿಕೊಡೆಗಳಂತೆ ಹುಟ್ಟಿಕೊಂಡ ಮೈಕ್ರೋಫೈನಾನ್ಸ್

ಇದೆಲ್ಲವೂ ಕೆಲವು ವರ್ಷಗಳ ಹಿಂದಿನ ತನಕವೂ ಚೆನ್ನಾಗಿಯೇ ಇತ್ತು ಆದರೆ ಈಗ ಎಲ್ಲವೂ ಬದಲಾಗಿ ಹೋಯಿತು. ಮೈಕ್ರೋಫೈನಾನ್ಸ್ ಹೆಸರಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಸಂಸ್ಥೆಗಳು ಬಂಡವಾಳ ಹಾಕಿ ಲಾಭ ತರುವ ಉದ್ಯಮವಾಗಿ ಬದಲಾದವು. ಹೀಗಾಗಿ ದೇಶದ ಮಟ್ಟಿಗೆ ಹೇಳುವುದಾದರೆ ಆರ್ ಬಿಐನ ಮೂಲ ನಿಯಮವನ್ನು ಗಾಳಿಗೆ ತೂರಿ ಸಾಲ ನೀಡಿ ದುಪ್ಪಟ್ಟು ಬಡ್ಡಿ ವಸೂಲಿಗೆ ನಿಂತವು. ನಿಜಹೇಳಬೇಕೆಂದರೆ ಮೈಕ್ರೋಫೈನಾನ್ಸ್ ಗೆ ಸಾಲದ ವಿಚಾರದಲ್ಲಿ ತಮ್ಮದೇ ಆದ ಸಾಮಾನ್ಯ ನಿಯಮಗಳಿವೆ.

ಆ ನಿಯಮಗಳ ಬಗ್ಗೆ ನೋಡುವುದಾದರೆ, ಮೈಕ್ರೋಫೈನಾನ್ಷಿಯರ್‌ ಗಳು ಸಾಲಗಳ ಮೇಲೆ ಬಡ್ಡಿಯನ್ನು ಆರ್ ಬಿಐ ನಿಯಮದಡಿ ವಿಧಿಸಬೇಕು ಮತ್ತು ನಿಯಮಿತ ಮಧ್ಯಂತರಗಳಲ್ಲಿ ಪಾವತಿಗಳೊಂದಿಗೆ ನಿರ್ದಿಷ್ಟ ಮರುಪಾವತಿ ಯೋಜನೆಗಳನ್ನು ಸ್ಥಾಪಿಸಬೇಕು. ಕೆಲವು ಸಾಲದಾತರು ಸಾಲ ಪಡೆದವರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಖಾತೆಯಲ್ಲಿ ಮೀಸಲಿಡುವಂತೆ ಮಾಡಿ ಗ್ರಾಹಕರು ಡೀಫಾಲ್ಟ್ ಆದಾಗ ಅದನ್ನು ವಿಮೆಯಾಗಿ ಬಳಸಲು ಅವಕಾಶ ಮಾಡಿಕೊಡಬೇಕು. ಸಾಲಗಾರನು ಸಾಲವನ್ನು ಯಶಸ್ವಿಯಾಗಿ ಮರುಪಾವತಿಸಿದರೆ, ಖಾತೆಯಲ್ಲಿ ಹೆಚ್ಚುವರಿ ಉಳಿತಾಯವನ್ನು ಗಳಿಸಿದ್ದಾರೆ ಎಂದರ್ಥ.

ಮೈಕ್ರೋಫೈನಾನ್ಸ್‌ಗಳ ಕಪಿ ಮುಷ್ಠಿಯಿಂದ ಹೊರಬರಲಿ

ಇಲ್ಲಿ ಮೈಕ್ರೋಫೈನಾನ್ಸ್ ಗಳು ಅದ್ಯಾವುದನ್ನು ಮಾಡದೆ ನಿಯಮವನ್ನು ಉಲ್ಲಂಘಿಸುತ್ತಿವೆ. ಹಲವು ಕಾರಣಗಳನ್ನು ಮುಂದಿಟ್ಟು ನೀಡುವ ಸಾಲದಲ್ಲಿ ಶೇ.25ರಷ್ಟು ಹಣವನ್ನು ಮೊದಲೇ ಹಿಡಿದಿಟ್ಟುಕೊಂಡು ಅದಕ್ಕೂ ಸೇರಿಸಿ ಬಡ್ಡಿಯನ್ನು ವಸೂಲಿ ಮಾಡಿ ಬಡವರ ಬದುಕಿನಲ್ಲಿ ಆಟವಾಡುತ್ತಿರುವುದು ಇವತ್ತು ಕಂಡು ಬರುತ್ತಿದೆ. ಹೆಚ್ಚು ದಾಖಲೆಗಳನ್ನು ಕೇಳದೆ ಸುಲಭವಾಗಿ ಸಾಲ ನೀಡುತ್ತಾರೆ ಎಂಬ ಉದ್ದೇಶದಿಂದ ಅವರು ಹೇಳಿದಕ್ಕೆಲ್ಲ ಸಹಿ ಹಾಕಿ ಸಾಲ ಪಡೆದುಕೊಳ್ಳುವುದು ಸುಲಭ ಆದರೆ ನಂತರದ ಪರಿಣಾಮ ಅನುಭವಿಸುವಾಗಲೇ ಗೊತ್ತಾಗುವುದು. ಅದು ಏನೇ ಇರಲಿ ಸಾಲಗಾರರು ಮೈಕ್ರೋಫೈನಾನ್ಸ್ ಗಳ ಕಪಿ ಮುಷ್ಠಿಯಿಂದ ಆದಷ್ಟು ಬೇಗ ಹೊರ ಬರುವಂತಾಗಲಿ ಎನ್ನುವುದಷ್ಟೇ ನಮ್ಮ ಆಶಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+