ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ
ಬೆಂಗಳೂರು, ಏಪ್ರಿಲ್, 18: ಬೆಂಗಳೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಜನರು ಪ್ರತಿದಿನ ಆಗಮಿಸುವುದು ಹೊಸ ಸುದ್ದಿ ಅಲ್ಲ. ಆದರೆ ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದಿಂದ ಕೆಲಸ ಅರಸಿ ಬರುತ್ತಿರುವವರ ಸಂಖ್ಯೆ ದ್ವಿಗುಣವಾಗಿದೆ.
ಕೆಲಸವೊಂದನ್ನೇ ಅರಸಿ ಜನರು ಬರುತ್ತಿಲ್ಲ.ಗ್ರಾಮೀಣ ಭಾಗದಲ್ಲಿ ಉಂಟಾಗಿರುವ ನೀರಿನ ಹಾಹಾಕಾರ ಅವರನ್ನು ನಗರದತ್ತ ಮುಖ ಮಾಡುವಂತೆ ಮಾಡಿದೆ. ಉತ್ತರ ಕರ್ನಾಟಕದ ಬಿಸಿಲಿನ ಧಗೆ ಸರಾಸರಿ 44 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಕೆಲವರು ಬೆಂಗಳೂರಿಗೆ ಆಗಮಿಸಿದರೆ ಇನ್ನು ಹಲವರು ಮೈಸೂರಿಗೆ ತೆರಳಿ ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ.[ನೀರು ಪೂರೈಕೆ ಲೋಪವಾದರೆ ಕಠಿಣ ಕ್ರಮ : ಸಿದ್ದು ಎಚ್ಚರಿಕೆ]
ದಿನಕ್ಕೆ 50 ಅಥವಾ ನೂರು ರು. ದುಡಿಯುವ ವ್ಯಕ್ತಿ ಬಿಂದಿಗೆ ನೀರಿಗೆ 10 ರು. ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪರಿಣಾಮ ನಗರಕ್ಕೆ ವಲಸೆ ಬಂದು ಪರ್ಯಾಯ ಕೆಲಸ ಹುಡುಕುವ ಆಯ್ಕೆಯನ್ನು ಜನ ಒಪ್ಪಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪೀಡಿತ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದು ಜನರು ಗುಳೆ ಹೋಗದಂತೆ ಮನವಿಯನ್ನು ಮಾಡಿದ್ದಾರೆ.
ವಲಸೆ ಆರಂಭ
ಕಲಬುರಗಿ, ವಿಜಯಪುರ, ಬೀದರ್ ನ ಜನರು ತಮ್ಮ ಸಾಕು ಪ್ರಾಣಿಗಳನ್ನು ಹುಟ್ಟಿದ ಬೆಲೆಗೆ ಮಾರಿ ನಗರಕ್ಕೆ ವಲಸೆ ಬರುತ್ತಿದ್ದಾರೆ.
ಬದುಕಲು ಸಾಧ್ಯವಿಲ್ಲ
"ಕುರಿಗಳನ್ನು ಮಾರಿ ನಗರಕ್ಕೆ ಬಂದಿದ್ದೇವೆ. ನಾವು ಅಲ್ಲೇ ಇದ್ದರೆ ಕುಡಿಯಲು ನೀರಿಲ್ಲದೇ ದಾಹದಿಂದಲೇ ಸಾವನ್ನಪ್ಪಬೇಕಿತ್ತು" ಎಂದು ಭಾನುವಾರ ನಗರದ ರೈಲ್ವೆ ನಿಲ್ದಾಣಕ್ಕೆ ಹೆಂಡತಿಯೊಂದಿಗೆ ಬಂದಿಳಿದ ಸಣ್ಣಪ್ಪ ಹೇಳುತ್ತಾರೆ.
ಮುಂಬೈ-ಮೈಸೂರು
ಉತ್ತರ ಕರ್ನಾಟಕದ ಜನ ಮುಂಬೈ ಮತ್ತು ಮೈಸೂರಿನ ಕಡೆಗೂ ವಲಸೆ ಹೋಗುತ್ತಿದ್ದಾರೆ. ಜೀವನ ನಿರ್ವಹಣೆ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದು ಗ್ರಾಮಕ್ಕೆ ಗ್ರಾಮವೇ ಖಾಲಿಯಾಗುತ್ತಿವೆ.
ಅಳಂದ ಅಳುವಿಗೆ ಉತ್ತರವಿಲ್ಲ
ತೀವ್ರ ಬರ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಲಬುರಗಿ ಜಿಲ್ಲೆಯ ಅಳಂದದಿಂದ ಅತಿ ಹೆಚ್ಚಿನ ಜನರು ಮಹಾನಗರಕ್ಕೆ ಆಗಮಿಸುತ್ತಿದ್ದಾರೆ.
ಹಣ ಬೇಕು
ಗ್ರಾಮೀಣ ಭಾಗದಲ್ಲಿ ಎಲ್ಲ ಕೆಲಸಗಳು ನಿಂತು ಹೋಗಿವೆ. ನಗರಕ್ಕೆ ಬಂದರೆ 300 ರಿಂದ 400 ರು. ದಿನಕ್ಕೆ ದುಡಿಯಬಹುದು ಎಂಬ ಲೆಕ್ಕಾಚಾರವೂ ವಲಸೆಗೆ ಪ್ರಮುಖ ಕಾರಣವಾಗಿದೆ.
ಮಳೆ ಬಂದರೆ ಜೀವನ
ಹವಾಮಾನ ಇಲಾಖೆ ನೀಡಿದ ವರದಿಯಂತೆ ಉತ್ತಮ ಮಳೆ ಬಂದರೆ ಉತ್ತರ ಕರ್ನಾಟಕದ ಜನರ ಜೀವನ ಮತ್ತೆ ಆರಂಭವಾಗಲಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಅನುಮಾನವೇ ಇಲ್ಲ.