ಏ.8ರಿಂದ ತುಮಕೂರು- ಬೆಂಗಳೂರು ನಡುವೆ ಮೆಮು ರೈಲು ಸೇವೆ ಆರಂಭ; ಆರಗ ಜ್ಞಾನೇಂದ್ರ ಚಾಲನೆ
ತುಮಕೂರು, ಏಪ್ರಿಲ್ 8: ಕಲ್ಪತರು ನಾಡು ತುಮಕೂರು ಮತ್ತು ರಾಜಧಾನಿ ಬೆಂಗಳೂರು ಮಧ್ಯೆ ಮೆಮು ರೈಲು ಸಂಚಾರಕ್ಕೆ ಇಂದು (ಶುಕ್ರವಾರ, ಏಪ್ರಿಲ್ 8) ಚಾಲನೆ ಸಿಗಲಿದೆ.
ಶುಕ್ರವಾರ ಬೆಳಗ್ಗೆ 10.45ಕ್ಕೆ ಮೆಮು ರೈಲು ಸಂಚಾರಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಲಿದ್ದಾರೆ. ತುಮಕೂರು ರೈಲ್ವೆ ನಿಲ್ದಾಣದ ಬಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇಂದು ತುಮಕೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಲಿದ್ದು, ತುಮಕೂರು ಹಾಗೂ ಕೆಎಸ್ಆರ್ ಬೆಂಗಳೂರು ಮೆಮು ರೈಲು ನಿತ್ಯ ಸೇವೆಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು- ತುಮಕೂರು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಕರ ಬೇಡಿಕೆಯಂತೆ ಹೆಚ್ಚುವರಿ ರೈಲನ್ನು ಓಡಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ. ಏಪ್ರಿಲ್ 8ರಿಂದ ಹೆಚ್ಚುವರಿ ರೈಲು ಸಂಚಾರ ನಡೆಸಲಿದೆ.
ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ನಗರಗಳ ನಡುವೆ ಇದುವರೆಗೂ 8 ಬೋಗಿಗಳ ಡೆಮು ರೈಲು ಸಂಚಾರ ನಡೆಸುತ್ತಿತ್ತು. ಈಗ ನೈಋತ್ಯ ರೈಲ್ವೆ ಡೆಮು ರೈಲು ರದ್ದುಗೊಳಿಸಿ 16 ಬೋಗಿಗಳ ಮೆಮು ರೈಲು ಓಡಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಚಿಕ್ಕಬಣಾವರ-ಹುಬ್ಬಳ್ಳಿ ರೈಲು ಮಾರ್ಗದ ವಿದ್ಯುದೀಕರಣದ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ 69.47 ಕಿ.ಮೀ ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದ್ದು, ಕೆಲವು ದಿನಗಳ ಹಿಂದೆ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ಸಹ ಪೂರ್ಣಗೊಳಿಸಿದ್ದಾರೆ. ಈಗ ಮಾರ್ಗದಲ್ಲಿ ಡೆಮು ಬದಲು ಮೆಮು ರೈಲು ಸಂಚಾರ ನಡೆಸಲಿದೆ.
ರೈಲು ವೇಳಾಪಟ್ಟಿ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಡುವ ರೈಲು ತುಮಕೂರಿಗೆ 11 ಗಂಟೆಗೆ ತಲುಪಲಿದೆ. ಇದೇ ರೈಲು 11.15ಕ್ಕೆ ತುಮಕೂರಿನಿಂದ ಹೊರಟು 1.25ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 3.20ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಡುವ ರೈಲು 5.25ಕ್ಕೆ ಕೆಎಸ್ಆರ್ ನಿಲ್ದಾಣವನ್ನು ರೈಲು ತಲುಪಲಿದೆ.












Click it and Unblock the Notifications