ಬಂದ್ ಭಾಗ್ಯ : ಹೊಟ್ಟೆಗೆ ಹಿಟ್ಟಿಲ್ಲ, ತಿನ್ನಲು ಮಾತ್ರೆಯೂ ಇಲ್ಲ
ಬೆಂಗಳೂರು, ಮೇ 30: ಇಂದು ದೇಶದಾದ್ಯಂತ ಕರೆ ನೀಡಿದ್ದ ಮೆಡಿಕಲ್ ಸ್ಟೋರ್ ಬಂದ್ ಬಿಸಿ ಕರ್ನಾಟಕದಲ್ಲಿಯೂ ತಟ್ಟಿದೆ. ಇನ್ನೊಂದೆಡೆ ಹೊಟೇಲ್ ಬಂದ್ ನಿಂದ ಗ್ರಾಹಕರು ಪರದಾಡುವಂತಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್ ಆಗಿವೆ. ಆದರೆ ಸರಕಾರಿ ಮೆಡಿಕಲ್ ಶಾಪ್ ಗಳು ಮಾತ್ರ ತೆರೆದಿವೆ. ಔಷಧಿಗಳ ಆನ್ಲೈನ್ ಮಾರಾಟ ಹಾಗೂ ಕೇಂದ್ರ ಸರ್ಕಾರದ ಆನ್ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಇಂದು ದೇಶಾದ್ಯಂತ ಮೆಡಿಕಲ್ ಸ್ಟೋರ್ ಗಳ ಬಂದಿಗೆ ಕರೆ ನೀಡಿತ್ತು.[ಮೇ 30ಕ್ಕೆ ಹೋಟೆಲ್ ಗಳು ಬಂದ್, ಊಟ-ತಿಂಡಿಗೆ ವ್ಯವಸ್ಥೆ ಮಾಡಿಕೊಳ್ರೀ...]
ಮುಷ್ಕರಕ್ಕೆ ಕರ್ನಾಟಕದ ಔಷಧಿ ಮಾರಾಟಗಾರರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿದ್ದರಿಂದ ಕರ್ನಾಟಕದಲ್ಲಿಯೂ ಮೆಡಿಕಲ್ ಗಳು ಬಂದ್ ಆಗಿವೆ.
ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಗಳು ಬಂದ್ ಇಲ್ಲ
ಆದರೆ ಬೆಡ್ ಗಳಿರುವ ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಸ್ಟೋರ್ ಗಳು ಬಂದ್ ಆಗಿಲ್ಲ. "ನಾವೂ ಈ ಹೋರಾಟವನ್ನು ಬೆಂಬಲಿಸಬೇಕು. ಆದರೆ ಒಳರೋಗಿಗಳಾಗಿ ದಾಖಲಾದವರಿಗೆ ಮೆಡಿಸಿನ್ ಎಲ್ಲೂ ಸಿಗುವುದಿಲ್ಲ. ಅವರಿಗೆ ಮೆಡಿಸಿನ್ ನೀಡದೇ ಇರಲು ಸಾಧ್ಯವಿಲ್ಲ. ಈ ಕಾರಣಕ್ಕೆ ಬೆಡ್ ಗಳಿರುವ ಆಸ್ಪತ್ರೆಗಳಲ್ಲಿ ಮೆಡಿಕಲ್ ಬಂದ್ ಇಲ್ಲ. ಜತೆಗೆ ನಮ್ಮದು ಸೈಕ್ಯಾಟ್ರಿಕ್ ಆಸ್ಪತ್ರೆ. ಈ ಮೆಡಿಸಿನ್ ಎಲ್ಲೂ ಸಿಗುವುದಿಲ್ಲ," ಎನ್ನುತ್ತಾರೆ ಜಯನಗರದ ನ್ಯೂರೋಸೈಕ್ಯಾಟ್ರಿಕ್ ಆಸ್ಪತ್ರೆಯಲ್ಲಿರುವ ಫಾರ್ಮಸಿಯ ಸಿಬ್ಬಂದಿ ಗಣೇಶ್.
ಹೀಗಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಮೆಡಿಕಲ್ ಸ್ಟೋರ್ ಗಳು ಓಪನ್ ಆಗಿವೆ. ತುರ್ತು ಔಷಧಿ ಬೇಕಾದವರು ಈ ರೀತಿಯ ಮೆಡಿಕಲ್ ಶಾಪ್ ಗಳಿಂದ ಔಷಧಿಗಳನ್ನು ಕೊಳ್ಳಬಹುದು.
ಕರ್ನಾಟಕದಾದ್ಯಂತ ಹೊಟೇಲ್, ರೆಸ್ಟೋರೆಂಟ್ ಬಂದ್
ಇನ್ನೊಂದೆಡೆ ಕೇಂದ್ರದ ಜಿಎಸ್ಟಿ ಕಾಯಿದೆ ವಿರೋಧಿಸಿ ಕರ್ನಾಟಕ ರಾಜ್ಯದಾದ್ಯಂತ ಹೊಟೇಲ್, ರೆಸ್ಟೋರೆಂಟ್ ಬಂದ್ ಗೆ ಕರೆ ನೀಡಲಾಗಿತ್ತು. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೊಟೇಲ್ ಗಳೂ ಮುಚ್ಚಿದ್ದು, ಗ್ರಾಹಕರು ಪರದಾಡುವಂತಾಗಿದೆ.[ದೇಶದೆಲ್ಲೆಡೆ ಮೇ 30ರಂದು ಮೆಡಿಕಲ್ ಶಾಪ್ ಬಂದ್]
ರಾಜ್ಯ ಹೋಟೇಲ್ ಸಂಘದ ಅಧ್ಯಕ್ಷ ರಾಜೇಂದ್ರ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದು, "ಜಿಎಸ್ಟಿಯಲ್ಲಿ ಹೊಟೇಲ್ ಮಾಲಿಕರಿಗೆ ಮೋಸ ಮಾಡಿದ್ದಾರೆ. ಹೀಗಾಗಿ ಮೊದಲ ಬಾರಿಗೆ ನಾವು ನಮಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ," ಎಂದು ಹೇಳಿದ್ದಾರೆ. ಹೊಟೇಲ್ ಮಾಲಿಕರು ಕೇಂದ್ರ ಸರಕಾರದ ಜಿಎಸ್ಟಿ ಕಾಯಿದೆ ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಬಳಿ ಪ್ರತಿಭಟನೆಯನ್ನೂ ನಡೆಸಿದರು.
"ನಾನು ಯಾವತ್ತೂ ಸಮೀಪದ ಹೊಟೇಲುಗಳಿಂದ ತಿಂಡಿ ತಂದು ಕೊಡುತ್ತಿದ್ದೆ. ಆದರೆ ಇವತ್ತು ಇಲ್ಲಿ ಎಲ್ಲೂ ಇಲ್ಲ ಹೊಟೇಲ್. ಹಾಗಾಗಿ ದೂರದಲ್ಲಿದ್ದ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಹೊಟೇಲಿನಿಂದ ತಿಂಡಿ ತಂದೆ ಎನ್ನುತ್ತಾರೆ," ಮನೆ ಮಾಲಿಕರೊಬ್ಬರಿಗೆ ಪ್ರತಿದಿನ ಊಟ ತಂದುಕೊಡುವ ಶಾಂತಮ್ಮ.
ಇನ್ನು ಪ್ರತಿದಿನ ಹೊಟೇಲಿನಲ್ಲಿ ಊಟ ಮಾಡುವವರು ಇಂದು ಕ್ಯಾರಿಯರ್ ಹಿಡಿದು ಕಚೇರಿಗಳಿಗೆ ತೆರಳುತ್ತಿರುವುದು ಹಲವು ಕಡೆಗಳಲ್ಲಿ ಕಂಡು ಬಂತು. ಹೀಗೆ ಹೊಟೇಲ್ ಬಂದ್ ಜನಸಾಮನ್ಯರನ್ನು ತಟ್ಟಿದೆ.