ನನಗೆ ಹುದ್ದೆ ಬೇಕು ಎಂಬ ವರದಿಗಳು ಸುಳ್ಳು ಎಂ.ಬಿ. ಪಾಟೀಲ್
ಬೆಂಗಳೂರು, ಜೂನ್ 10: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ನಂತರ ಮಾಜಿ ಸಚಿವ ಎಂ.ಬಿ. ಪಾಟೀಲ್ ಗರಂ ಆಗಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿದ್ದ ಪಾಟೀಲ್, 'ತಾವು ಹುದ್ದೆ ಸಿಕ್ಕಿಲ್ಲವೆಂದು ಅಸಮಧಾನಗೊಂಡಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಬಂಡಾಯವೆದ್ದಿದ್ದ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್ ರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಗೆ ಬಂದು ಭೇಟಿಯಾಗುವಂತೆ ಹೇಳಿದ್ದರು. ಅದರಂತೆ ಶನಿವಾರ ದೆಹಲಿಗೆ ತೆರಳಿದ್ದ ಎಂ.ಬಿ. ಪಾಟೀಲ್ ರಾಹುಲ್ ಜೊತೆಗೆ ಚರ್ಚೆ ನಡೆಸಿದ್ದಾರೆ.
ಈ ಚರ್ಚೆಯ ನಂತರ ಪ್ರತಿಕ್ರಿಯೆ ನೀಡಿರುವ ಅವರು, "ನನ್ನ ತಲೆಯಲ್ಲಿ ಏನಿದೆಯೋ ಅದನ್ನು ರಾಹುಲ್ ಗಾಂಧಿಯವರಿಗೆ ಹೇಳಿದ್ದೇನೆ. ಅವರು ಶಾಂತರಾಗಿ ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ. ಮತ್ತು ನಾನು ನೀಡಿದ ಮಾಹಿತಿಯಿಂದ ಸಂತೋಷಗೊಂಡಿದ್ದಾರೆ. ಕೆಲವು ಮಾಧ್ಯಮಗಳು ನಾನು ಕೆಲವು ಹುದ್ದೆ ಬಯಸಿದ್ದೇನೆ ಎಂದು ವರದಿ ಮಾಡಿವೆ. ಇದು ಸುಳ್ಳು," ಎಂದು ಸ್ಪಷ್ಟ ಪಡಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್, "ಯಡಿಯೂರಪ್ಪನವರು ಸೋಲನ್ನು ಒಪ್ಪಿಕೊಳ್ಳಬೇಕು. ಅವರಿಗೆ ಜನರು ಬಹುಮತ ನೀಡಿಲ್ಲ.
ಕೆಲವು ಶಾಸಕರು ಅಸಮಧಾನಗೊಂಡಿದ್ದರು. ಆದರೆ ನಾವಿದನ್ನು ನಿವಾರಿಸಿಕೊಂಡಿದ್ದೇವೆ. ನಾನು ಎಲ್ಲಾ ಶಾಸಕರ ಜೊತೆಗೂ ಸಂಪರ್ಕದಲ್ಲಿದ್ದೇನೆ. ಯಾವುದೂ ತಪ್ಪಾಗುವುದಿಲ್ಲ," ಎಂದು ಖಡಕ್ಕಾಗಿ ಹೇಳಿದ್ದಾರೆ.












Click it and Unblock the Notifications