ಚುನಾವಣೆಗೂ ಮುನ್ನ ನಾಪತ್ತೆಯಾದ ಮಾಯಾವತಿ, ಓವೈಸಿ, ಪವಾರ್
ಬೆಂಗಳೂರು, ಏಪ್ರಿಲ್ 12: ಕರ್ನಾಟಕ ವಿಧಾನಸಭೆ ಚುನಾವಣೆಯ ಅಚ್ಚರಿಯ ಬೆಳವಣಿಗೆಯಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ಎನ್ ಸಿಪಿಯ ಶರದ್ ಪವಾರ್ ನಾಪತ್ತೆಯಾಗಿದ್ದಾರೆ. ಈ ಹಿಂದೆ ಈ ಮೂರು ಜನ ನಾಯಕರು ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟಿದ್ದರು ಮತ್ತು ಈ ಸಂಬಂಧ ಕಾರ್ಯೋನ್ಮುಖರಾಗಿದ್ದರು. ಆದರೆ ಅವರೀಗ ಚುನಾವಣಾ ಕಣದಿಂದ ಹಿಂದೆ ಸರಿದಂತೆ ಭಾಸವಾಗುತ್ತಿದೆ.
ಓವೈಸಿ ಕರ್ನಾಟಕ ಎಂಟ್ರಿ ಸಮಾಚಾರ ಮತ್ತು ಗೌಡ್ರ ಲೆಕ್ಕಾಚಾರ
ಮಾಯಾವತಿ ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಕೈ ಜೋಡಿಸಿದ್ದು ಹಳೆ ಕಥೆ. 224 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಜೆಡಿಎಸ್ ಪಕ್ಷ ಬಿಎಸ್ಪಿಗೆ ಬಿಟ್ಟು ಕೊಟ್ಟಿತ್ತು. ಇದಾದ ಬಳಿಕ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾಯಾವತಿ ಭಾಗವಹಿಸಿ ಕೇಂದ್ರ ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಾಯಾವತಿ ವಾಗ್ದಾಳಿ ನಡೆಸಿದ್ದರು.
ಬಿಜೆಪಿಯ 'ಬಿ' ಟೀಂ
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಮತಗಳನ್ನು ತಿಂದು ಬಿಎಸ್ಪಿ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಂತೂ ಮಾಯಾವತಿಯವರನ್ನು ಬಿಜೆಪಿಯ 'ಬಿ' ಟೀಂ ಎಂಬ ಆರೋಪವನ್ನೂ ಮಾಡಿದ್ದರು.
ಹಾಗೆ ನೋಡಿದರೆ ಮಾಯಾವತಿ ಕರ್ನಾಟಕದಲ್ಲಿ ಅರ್ಧ ಡಜನ್ ನಷ್ಟು ಸಮಾವೇಶಗಳನ್ನು ಉದ್ದೇಶಿಸಿ ಭಾಷಣ ಮಾಡಬೇಕಾಗಿತ್ತು. ಜೆಡಿಎಸ್ ಅಂತೂ ಬಿಎಸ್ಪಿ ಜತೆಗಿನ ಮೈತ್ರಿಯನ್ನೇ ತನ್ನ ಘನ ಸಾಧನೆ ಎಂಬಂತೆ ಬಿಂಬಿಸಿತ್ತು. ಆದರೆ ಏಕಾಏಕಿ ಮಾಯಾವತಿಯವರ 'ಆನೆ' ಎಲ್ಲೂ ಕಾಣಿಸುತ್ತಿಲ್ಲ. ಬಿಎಸ್ಪಿ ಅಭ್ಯರ್ಥಿಗಳಂತೂ ಇನ್ನೂ ಪ್ರಚಾರವನ್ನೇ ಆರಂಭಿಸಿಲ್ಲ. ಹೀಗಾಗಿ ಮೈತ್ರಿಯ ಕಥೆ ಏನು ಎಂಬುದು ತಿಳಿಯುತ್ತಿಲ್ಲ.
ಆನೆ-ತೆನೆಹೊತ್ತ ಮಹಿಳೆ ದೋಸ್ತಿ: ಎಲ್ಲೆಲ್ಲಿ ಬಿಎಸ್ಪಿ ಸ್ಪರ್ಧೆ?
ಮನಸ್ಸು ಬದಲಾಯಿಸಿದ್ರಾ ಮಾಯಾವತಿ?
ಇಂಥಹದ್ದೊಂದು ಬೆಳವಣಿಗೆಗೆ ಕಾರಣ ಮನಸ್ಸು ಬದಲಾಯಿಸಿ ಮಾಯಾವತಿ ಎನ್ನಲಾಗಿದೆ. ಗೋರಖ್ ಪುರ್ ಮತ್ತು ಫುಲ್ಪುರ್ ಲೋಕಸಭೆ ಉಪಚುನಾವಣೆಗಳಲ್ಲಿ ಎಸ್ಪಿಗೆ ಬೆಂಬಲ ನೀಡಿದ್ದರಿಂದ ಬಿಜೆಪಿ ನೆಲಕಚ್ಚಿತ್ತು. ಬಿಜೆಪಿಯನ್ನು ಸೋಲಿಸಿದ ನಂತರ ಕಮಲ ಪಕ್ಷವನ್ನು ಸೋಲಿಸಲು ಸಾಧ್ಯ ಎಂಬ ಧೈರ್ಯ ಅವರಿಗೆ ಬಂದಂತೆ ಕಾಣಿಸುತ್ತಿದೆ. ಹಾಗಾಗಿ ಅವರು ತನ್ನ ವಿರೋಧಿ ಬಿಜೆಪಿ ಕಾಂಗ್ರೆಸ್ ಅಲ್ಲ ಎಂಬ ತೀರ್ಮಾನಕ್ಕೂ ಬಂದಿರಬಹುದು.
ಇನ್ನು ಅವರ ಪಕ್ಷದವರೂ ಕೂಡ ಕರ್ನಾಟಕದಲ್ಲಿ ಮಾಯಾವತಿ ತಟಸ್ಥ ಧೋರಣೆ ತಾಳುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ತಟಸ್ಥ ಧೋರಣೆ ತಾಳಲು ಹೊರಟವರಲ್ಲಿ ಮಾಯಾವತಿ ಮೊದಲಿಗರೇನೂ ಅಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಗೆ ಮತ ನೀಡಬೇಡಿ: ಮಾಯಾವತಿ ಆಕ್ರೋಶ
ಓವೈಸಿ ಎಲ್ಲಿ?
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಎನ್ ಸಿಪಿಯ ಶರದ್ ಪವಾರ್ ಕೂಡ ಮೌನಕ್ಕೆ ಶರಣಾಗಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ಜೆಡಿಎಸ್ ಜತೆ ಕೈ ಜೋಡಿಲಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆರಂಭದಲ್ಲಿ ಎಐಎಂಐಎಂ ಜತೆ ಮೈತ್ರಿಗೆ ಕಾಂಗ್ರೆಸ್ ಉತ್ಸುಕವಾಗಿತ್ತು. ಆದರೆ ಕಾಂಗ್ರೆಸ್ ಬೇಡಿಕೆಯನ್ನು ಓವೈಸಿ ತಳ್ಳಿ ಹಾಕಿದ್ದರು. 50 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಐಎಂಐಎಂ ಮುಂದಾಗತ್ತು. ಇದರ ನಡುವೆಯೇ ಓವೈಸಿ ಮತ್ತು ಜೆಡಿಎಸ್ ಜತೆ ಮಾತುಕತೆಗಳು ನಡೆಯುತ್ತಿದ್ದವು. ಆದರೆ ಅಲ್ಲಿಂದ ಮುಂದೆ ಯಾವ ಬೆಳವಣಿಗಳೂ ನಡೆದ ಬಗ್ಗೆ ವರದಿಗಳು ಬಂದಿಲ್ಲ.
ಉತ್ತರ ಪ್ರದೇಶ: ವಿಧಾನಪರಿಷತ್ ಚುನಾವಣೆಯಲ್ಲೂ ಎಸ್ಪಿ-ಬಿಎಸ್ಪಿ ಮೈತ್ರಿ
ಬಿಜೆಪಿಗೆ ಲಾಭ ಮಾಡುವ ಮನಸ್ಸು ಎನ್ ಸಿಪಿಗಿಲ್ಲ
ಇನ್ನು ಎನ್ ಸಿಪಿಯದ್ದು ಇದೇ ಕಥೆ. ದೇದೇಗೌಡರು ಬೆಳಗಾವಿ ಮತ್ತು ಬಿಜಾಪುರ ಭಾಗದಲ್ಲಿ ಎನ್ ಸಿಪಿಗೆ 7 ಸ್ಥಾನಗಳನ್ನು ಬಿಟ್ಟುಕೊಡಲು ಹೊರಟಿದ್ದರು. ಇಲ್ಲಿ ಉಭಯ ಪಕ್ಷಗಳು ಬೃಹತ್ ಸಮಾವೇಶ ನಡೆಸಲೂ ಮುಂದಾಗಿದ್ದವು. ಆದರೆ ಕನ್ನಡ ವಿರೋಧಿ ಎಂಇಎಸ್ ಜತೆ ಶರದ್ ಪವಾರ್ ಕೈಜೋಡಿಸಿದ್ದಾರೆ ಎನ್ನುವ ಆರೋಪದಿಂದ ದೇವೇಗೌಡರು ಗರಂ ಆಗಿದ್ದರು. ಇದರಿಂದ ಈ ಮೈತ್ರಿಯೂ ಮುರಿದು ಬಿದ್ದಿದೆ.
ಇದಲ್ಲದೆ ಪವಾರ್ ಗೆ ಕಾಂಗ್ರೆಸ್ ಮತಗಳನ್ನು ಕಿತ್ತುಕೊಂಡು ಬಿಜೆಪಿಗೆ ಸಹಾಯ ಮಾಡುವುದರ ಬಗ್ಗೆಯೂ ಅಷ್ಟಾಗಿ ಮನಸ್ಸಿಲ್ಲ.
ಈ ಬಗ್ಗೆ ದೇವೇಗೌಡರು ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆ ಪ್ರಕಾರ ಬಿಎಸ್ಪಿ ಜೊತೆಗಿನ ಮೈತ್ರಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಆದರೆ ಉಳಿದ ವಿವರಗಳನ್ನು ಅವರು ನೀಡಿಲ್ಲ.