ಹೊಸ ಪಕ್ಷ ಘೋಷಣೆ, ಜನಾರ್ದನ ರೆಡ್ಡಿ ಭೇಟಿಯಾದ ಬಿಜೆಪಿ ನಾಯಕ!
ಬೆಂಗಳೂರು, ಡಿಸೆಂಬರ್ 26; ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣಗೆ ಕೆಲವೇ ದಿನಗಳು ಇರುವಾಗ ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.
ಡಿಸೆಂಬರ್ 25ರ ಭಾನುವಾರ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದರು. "ನಾನು ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ" ಎಂದು ಹೇಳಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ಕರ್ನಾಟಕದ ಬಿಜೆಪಿ ನಾಯಕರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯಿಂದ ಯಾವ-ಯಾವ ನಾಯಕರು ಕರ್ನಾಟಕ ರಾಜ್ಯ ಪ್ರಗತಿ ಪಕ್ಷಕ್ಕೆ ಹೋಗಲಿದ್ದಾರೆ? ಎಂಬುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಜನಾರ್ದನ ರೆಡ್ಡಿ, "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ" ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಜನಾರ್ದನ ರೆಡ್ಡಿ ಭೇಟಿಯಾದ ಮಾಜಿ ಶಾಸಕ
ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ ಜನಾರ್ದನ ರೆಡ್ಡಿಯನ್ನು ಮಾಜಿ ಶಾಸಕ, ಬಿಜೆಪಿ ನಾಯಕ ಪ್ರತಾಪ್ ಗೌಡ ಪಾಟೀಲ್ ಭೇಟಿ ಮಾಡಿದರು. ಮಸ್ಕಿ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿ ಗೆಲುವು ಕಂಡಿರುವ ಪ್ರತಾಪ್ ಗೌಡ ಪಾಟೀಲ್ 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದಾರೆ. ಬಳಿಕ ಪಕ್ಷದಲ್ಲಿಯೂ ಯಾವುದೇ ಸ್ಥಾನಮಾನಗಳು ಸಿಕ್ಕಿಲ್ಲ.

ಜನಾರ್ದನ ರೆಡ್ಡಿ ನಡೆ ಕುತೂಹಲ
ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷದ ಮೂಲಕ ಜನಾರ್ದನ ರೆಡ್ಡಿ ಉತ್ತರ ಕರ್ನಾಟಕದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಪಕ್ಷಕ್ಕೆ ಯಾರು, ಯಾರು ಸೇರುತ್ತಾರೆ? ಎಂದು ಈಗ ಚರ್ಚೆಗಳು ನಡೆಯುತ್ತಿವೆ.
ಏಕಾಂಗಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, "ಮುಂದಿನ 15 ದಿನದೊಳಗೆ ಪಕ್ಷದ ಲಾಂಛನ ಬಿಡುಗಡೆ ಮಾಡುತ್ತೇನೆ. ಪಕ್ಷದ ಕಚೇರಿ ಉದ್ಘಾಟನೆ ಮಾಡುತ್ತೇನೆ. ಪತ್ನಿಯೂ ನನ್ನ ಜೊತೆ ಇರುತ್ತಾರೆ, ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ" ಎಂದು ಮಾತ್ರ ಹೇಳಿದ್ದಾರೆ. ಯಾವ ನಾಯಕರು ಅವರ ಜೊತೆ ಬರಲಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿಲ್ಲ.

ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಸೋಲು
2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಸ್ಕಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. 60,387 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿದರು, ಬಳಿಕ ಬಿಜೆಪಿ ಸೇರಿದರು. ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 55,731 ಮತಗಳನ್ನು ಪಡೆದು ಕಾಂಗ್ರೆಸ್ನ ಬಸನಗೌಡ ತುರ್ವಿಹಾಳ ವಿರುದ್ಧ ಸೋಲು ಕಂಡರು. ಬಳಿಕ ಪಕ್ಷದಲ್ಲಿ ಯಾವುದೇ ಸ್ಥಾನ ಮಾನ ಸಿಕ್ಕಿಲ್ಲ. ಹೆಚ್. ವಿಶ್ವನಾಥ್ ಉಪ ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್ ಸದಸ್ಯರಾದರು. ಆದರೆ ಪ್ರತಾಪ್ ಗೌಡ ಪಾಟೀಲ್ ಯಾವುದೇ ಸ್ಥಾನಮಾನ ಪಡೆಯುವಲ್ಲಿ ವಿಫಲರಾದರು.

ಪಕ್ಷ ಬಿಟ್ಟು ಸೋತಿದ್ದ ಪ್ರತಾಪ್ ಗೌಡ ಪಾಟೀಲ್
ಪ್ರತಾಪ್ ಗೌಡ ಪಾಟೀಲ್ (ಬಿಜೆಪಿ) ಮತ್ತು ಬಸನಗೌಡ ತುರ್ವಿಹಾಳ (ಕಾಂಗ್ರೆಸ್) 2018ರ ವಿಧಾನಸಭೆ ಚುನಾವಣೆಯಲ್ಲಿಯೂ ಮುಖಾಮುಖಿಯಾಗಿದ್ದರು. ಆದರೆ ಪ್ರತಾಪ್ ಗೌಡ ಪಾಟೀಲ್ 60,174 ಮತಗಳನ್ನು ಪಡೆದ ಬಸನಗೌಡ ತುರ್ವಿಹಾಳ ಸೋಲಿಸಿದ್ದರು. ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಚಿತ್ರಣ ಬದಲಾಯಿತು. ಉಪ ಚುನಾವಣೆಯಲ್ಲಿ ಬಸನಗೌಡ ತುರ್ವಿಹಾಳ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆದ್ದರು. ಪ್ರತಾಪ್ ಗೌಡ ಪಾಟೀಲ್ ಪಕ್ಷ ಬದಲಾಯಿಸಿ ಉಪ ಚುನಾವಣೆಯಲ್ಲಿ ಸೋಲು ಕಂಡರು.












Click it and Unblock the Notifications