ಬಿಜೆಪಿಗೆ ಬಿಗ್ ಶಾಕ್: 'ಸೋಮಶೇಖರ್, ಹೆಬ್ಬಾರ್ ಅಷ್ಟೇ ಅಲ್ಲ ಬಹಳ ಜನ ಕಾಂಗ್ರೆಸ್ ಗೆ ಬರ್ತಾರೆ'
ಹುಬ್ಬಳ್ಳಿ, ಮಾರ್ಚ್ 06: ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದ್ರೆ, ಇತ್ತ ಬಿಜೆಪಿ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ಲಾನ್ ನಡೆಸಿದ್ದು, ಬಿಜೆಪಿ ಗೆ ಬಿಗ್ ಶಾಕ್ ಎದುರಾದಂತೆ ಕಾಣುತ್ತಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮಾತ್ರ ಅಲ್ಲ ಇನ್ನು ಬಹಳ ಜನ ಪಕ್ಷಕ್ಕೆ ಬರುವವರಿದ್ದರೆ ಎಂದು ಡಿಸಿಎಂ ಹೇಳಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಆಪರೇಷನ್ ಕಾಂಗ್ರೆಸ್ ಸುಳಿವು ನೀಡಿದ್ದಾರೆ. ಕೇವಲ ಇಬ್ಬರು ಮೂವರಲ್ಲ ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್ ಗೆ ಆಗಮಿಸಲಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಬಜೆಟ್ ನಲ್ಲಿ ಅಭಿವೃದ್ಧಿಗೆ 1.26 ಲಕ್ಷ ಕೋಟಿ ಅನುದಾನ
ಅಥಣಿಯಲ್ಲಿ 1 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ನಾವು ತೆರಳುತ್ತಿದ್ದು, ಸಿಎಂ ಸಿದ್ಧರಾಮಯ್ಯ ಕೂಡ ಆಗಮಿಸುತ್ತಿದ್ದಾರೆ. ಬಜೆಟ್ ನಲ್ಲಿ 1.26 ಲಕ್ಷ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇಡಿ ಪ್ರಕರಣ ರದ್ದು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಮಾಧ್ಯಮಗಳು ಇಡಿ ದಾಳಿಯಾದಾಗ ಒಂದು ರೀತಿ, ಬಂಧನ ಆದಾಗ ಇನ್ನೊಂದು ರೀತಿ ತೋರಿಸ್ತೀರಿ. ಈಗ ನನ್ನ ವಿರುದ್ಧದ ಪ್ರಕರಣ ರದ್ದಾದ ಮೇಲೆ ಸುಮ್ಮನೇ ಇದೀರ ಎಂದು ತಿಳಿಸಿದರು. ಇನ್ನೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕುರಿತು ಮಾತನಾಡಿ, ನಾಳೆ ಪಕ್ಷದ ಚುನಾವಣಾ ಸಮಿತಿ ಸಭೆ ದೆಹಲಿಯಲ್ಲಿ ನಡೆಯಲಿದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ" ಎಂದು ತಿಳಿಸಿದರು.
ಮಹಾದಾಯಿ ವಿಳಂಬ ಬಗ್ಗೆ ಜೋಶಿ ಚಕಾರ ಎತ್ತಲಿಲ್ಲ ಯಾಕೆ?
ಮಹದಾಯಿ ಕಾಮಗಾರಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರ ನೀಡಬೇಕು. ಇದೇ ವಿಚಾರದಲ್ಲಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು. ಆದರೂ ಯಾಕೆ ಇನ್ನೂ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ? ನಾನು ಸಚಿವನಾದ ನಂತರ ಇದಕ್ಕೆ ಟೆಂಡರ್ ಕರೆಯಲಾಗಿದೆ. ಅನುಮತಿ ಸಿಗುತ್ತಿದ್ದಂತೆ ಕೆಲಸ ಆರಂಭವಾಗಲಿದೆ. ಅನುಮತಿ ಕೊಡಿಸಿದರೆ ಅವರಿಗೂ ಒಂದು ಗೌರವ. ಅಧಿಕಾರ ಯಾರಿಗೂ ಶಾಶ್ವತವಲ್ಲ.
ಜೋಶಿ ಅವರಿಗೆ ಅಧಿಕಾರ ಇದೆ. ಅವರು ಅರ್ಧ ಗಂಟೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಕೆಲಸ ಆರಂಭಿಸುತ್ತೇವೆ. ಮಾಧ್ಯಮಗಳು ನನಗೆ ಉಲ್ಟಾ ಪಲ್ಟಾ ನನಗೆ ಪ್ರಶ್ನೆ ಕೇಳುತ್ತೀರಿ ಜೋಶಿ ಅವರನ್ನು ಯಾಕೆ ಕೇಳುವುದಿಲ್ಲ? ಪ್ರಹ್ಲಾದ್ ಜೋಶಿ ಯಾಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ? ಈ ಬಗ್ಗೆ ಅವರು ಉತ್ತರಿಸಲಿ" ಎಂದು ತಿಳಿಸಿದರು.
ಶೀಘ್ರವೇ ಫ್ಲಡ್ ಗೇಟ್ ಓಪನ್ ಆಗುತ್ತೆ ಎಂಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಕುರಿತು ಮಾತನಾಡಿ, ಸಧ್ಯದಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ" ಎಂದು ತಿರುಗೇಟು ನೀಡಿದರು.












Click it and Unblock the Notifications