ಆಗಸ್ಟ್ 25ರಿಂದ ಏಳು ದಿನ ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ
ಮಂತ್ರಾಲಯ ಶ್ರೀ ಗುರುರಾಯರ 347ನೇ ಆರಾಧನಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆತಿದೆ. ಆಗಸ್ಟ್ 25 ರಿಂದ 31 ರವಗೆ ಅಂದರೆ 7 ದಿನಗಳ ಕಾಲ ರಾಯರ ಆರಾಧನೆ ಮಹೋತ್ಸವ ನಡೆಯಲಿದೆ.
ಇದಕ್ಕಾಗಿ ರಾಯರ ಸನ್ನಿಧಾನವನ್ನು ಲಕ್ಷಾಂತರ ರೂಪಯಿ ವ್ಯಚ್ಚದಲ್ಲಿ ಸಿಂಗರಿಸಲಾಗಿದೆ. ದೇಶದ ವಿವಿಧೆಡೆಯಿಂದ ಬರುವ ಭಕ್ತರಿಗೆ ವಸತಿ ಮತ್ತು ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.
ಆರಾಧನೆಯ ಮುಖ್ಯಘಟ್ಟ ಆಗಸ್ಟ್ 27 ರಂದು ಪೂರ್ವಾರಾಧನೆ ನಡೆಯಲಿದ್ದು, ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಚಿನ್ನದ ರಥೋತ್ಸವ ನಡೆಯಲಿದೆ. ರಾತ್ರಿ ಸಭಾ ಮಂಟಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿದವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಆಗಸ್ಟ್ 28 ರಂದು ನಡೆಯುವ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರವನ್ನು ತಂದು ರಾಯರಿಗೆ ಸಮರ್ಪಿಸಲಾಗುತ್ತಿದೆ. ಬೃಂದಾವನವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತಿದೆ. ಆಗಸ್ಟ್ 29 ರಂದು ನಡೆಯುವ ಉತ್ತರರಾಧನೆ ನಿಮಿತ್ತ ಬೆಳಗ್ಗೆ ರಾಯರ ಪೂಜೆ ನಂತರ ಮಹಾ ರಥೋತ್ಸವ ಜರುಗಲಿದೆ.
ಈ ಭಾರಿಯ ಮಠದ ಪ್ರಾಕಾರದ ದ್ವಾರಕ್ಕೆ 350 ಕೇಜಿ ಬೆಳ್ಳಿಯ ಹೊದಿಕೆ ಮಾಡಲಾಗಿದೆ. ರಾಯರ ಮಠಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಈ ಲೈಟಿಂಗ್ ಪ್ರತಿ ದಿನ ಒಂದೊಂದು ಬಣ್ಣದಲ್ಲಿ ಕಂಗೊಳಿಸಲಿದೆ. ಜೊತೆಗೆ ಮಠದಿಂದ ನಿರ್ಮಾಣಗೊಂಡಿರುವ ಆಸ್ಪತ್ರೆ ಕೂಡ ಉದ್ಘಾಟನೆಯಾಗಲಿದೆ.

ಒಟ್ಟಾರೆಯಾಗಿ ಶ್ರೀ ಮಠದಲ್ಲಿ ನಡೆಯುವ ಅದ್ದೂರಿ ಉತ್ಸವ ರಾಯರ ಆರಾಧನೆಗೆ ಸಕಲ ರೀತಿಯಲ್ಲಿ ಸಿದ್ದವಾಗಿದೆ. ಇನ್ನು ಈ ಭಾರಿ ತುಂಗಾಭದ್ರಾ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಭಕ್ತರ ಪುಣ್ಯ ಸ್ನಾನಕ್ಕೂ ಯಾವುದೇ ಅಡ್ಡಿ ಇರುವುದಿಲ್ಲ.












Click it and Unblock the Notifications