ಮಂಡ್ಯ ಉಪಚುನಾವಣೆ: ಮೊಮ್ಮಗನಿಗಾಗಿ ದೇವೇಗೌಡ್ರ ಟ್ರಯಲ್ ರನ್ ಸಕ್ಸಸ್
Recommended Video
ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಮೂರು ಲಕ್ಷಕ್ಕೂ ಹೆಚ್ಚುಮತಗಳ ಅಂತರದಿಂದ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ್ರಿಗೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಬಿಫಾರಂ ಸಿಗುತ್ತೋ, ದೇವೇಗೌಡ್ರೇ ಬಲ್ಲರು?
ಲೋಕಸಭಾ ಉಪಚುನಾವಣೆಯನ್ನು ಮೂರೂ ಪಕ್ಷಗಳು ನಿರೀಕ್ಷಿಸರಿರಲಿಲ್ಲ, ಆದರೂ ಎದುರಾದ ಚುನಾವಣೆಯನ್ನು ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿ ಭರ್ಜರಿ ಜಯಭೇರಿ ಬಾರಿಸಿದ್ದಾಗಿದೆ. ಈ ಉಪಚುನಾವಣೆ ಒಂದು ರೀತಿಯಲ್ಲಿ ಮತದಾರ ಮೂಡ್ ಹೇಗಿದೆ ಎಂದು ಪರೀಕ್ಷಿಸಲು ದೇವೇಗೌಡರಿಗೆ ಸಿಕ್ಕಿದ ಸದಾವಕಾಶವಾಗಿತ್ತು.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮುಖಂಡರ ಆರೋಪ, ಪ್ರತ್ಯಾರೋಪ ಅತಿರೇಕದ ಹಂತಕ್ಕೆ ಹೋಗಿತ್ತು, ಇನ್ನು ಕಾರ್ಯಕರ್ತರ ನಡುವಣ ಜಿದ್ದು ಮಾರಮಾರಿ ಮಟ್ಟಕ್ಕೆ ತಲುಪಿತ್ತು. ಆದರೆ, ಬದಲಾದ ರಾಜಕೀಯ ಸಮೀಕರಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದರೂ, ಕಾರ್ಯಕರ್ತರ ದ್ವೇಷ ಹಾಗೇ ಮುಂದುವರಿದಿತ್ತು.
ಮಂಡ್ಯ ಉಪಚುನಾವಣೆ: ಸೋಲಿನಲ್ಲೂ ಬಿಜೆಪಿಯ ಸಾಧನೆ ಮುಂದಿನ ಚುನಾವಣೆಗೆ ದಿಕ್ಸೂಚಿ?
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯದಿಂದ ತಮ್ಮ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಅಥವಾ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಪೂರ್ವತಯಾರಿ ಮಾಡಿಕೊಂಡಿರುವುದು ಗೊತ್ತಿರುವ ವಿಚಾರ. ಆದರೂ, ಉಪಚುನಾವಣೆಯಲ್ಲಿ ಗೌಡ್ರು, ಮೊಮ್ಮಕ್ಕಳ ಭವಿಷ್ಯದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಮುಂದಾಗಲಿಲ್ಲ.
ಹಿಂದೊಮ್ಮೆ ಖುದ್ದು ತಾವೇ ಯಾರ ವಿರುದ್ದ ಪ್ರತಿಭಟನೆ ನಡೆಸಿದ್ದರೋ, ಅವರನ್ನೇ ದೇವೇಗೌಡರು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿದರು. IRS ಅಧಿಕಾರಿಯಾಗಿದ್ದ ಲಕ್ಷ್ಮೀ ಅಶ್ವಿನ್ ಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಶಿವರಾಮೇ ಗೌಡರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು.
ಇದು ನಾಲ್ಕೈದು ತಿಂಗಳಿಗೆ ಮಾತ್ರ ನಡೆಯುವ ಚುನಾವಣೆಯಲ್ಲವೇ
ಶಿವರಾಮೇ ಗೌಡರಿಗೆ ಟಿಕೆಟ್ ನೀಡಿದ್ದಕ್ಕೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಪ್ರತಿಕ್ರಿಯೆ ಹೀಗಿತ್ತು, ' ನಾನು ದೇವೇಗೌಡರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಶಿವರಾಮೇ ಗೌಡ ಬಹಳ ನೊಂದಿದ್ದಾನೆ. ಇನ್ನು ಇದು ನಾಲ್ಕೈದು ತಿಂಗಳಿಗೆ ಮಾತ್ರ ನಡೆಯುವ ಚುನಾವಣೆಯಲ್ಲವೇ ' ಎಂದು ದೇವೇಗೌಡರು ಹೇಳಿದ್ದಾರೆಂದು ರೇವಣ್ಣ ಹೇಳಿದ್ದಾರೆ.
ಉಪ ಚುನಾವಣೆ ಮುಗೀತು, ಸಂಪುಟ ವಿಸ್ತರಣೆಗೆ ವಿಳಂಬವಿಲ್ಲ: ದೇವೇಗೌಡ
ಗೌಡರ ಆಲೋಚನೆ ಮೇಲ್ನೋಟಕ್ಕೆ ಫಲಕೊಟ್ಟಿದೆ
ದೇವೇಗೌಡರ ಹೇಳಿಕೆಯನ್ನು ಅರ್ಥೈಸಿಕೊಳ್ಳುವುದಾದರೆ, ಮುಂಬರುವ ಲೋಕಸಭಾ ಚುನಾವಣೆಗೆ ಉಪಚುನಾವಣೆಯ ವಿಜೇತ ಅಭ್ಯರ್ಥಿ ಶಿವರಾಮೇ ಗೌಡರಿಗೆ ಬಿಫಾರಂ ಸಿಗುವುದು ಡೌಟು. ಮೊಮ್ಮಕ್ಕಳಲ್ಲಿ ಒಬ್ಬರನ್ನು ಮಂಡ್ಯದಿಂದ ಗೌಡ್ರು ಕಣಕ್ಕಿಳಿಸುವುದು ಬಹುತೇಕ ನಿಶ್ಚಿತ. ಅದಕ್ಕೂ ಮುನ್ನ, ಇಲ್ಲಿನ ಮತದಾರರ ನಾಡಿಮಿಡಿತ ಅರಿಯುವ ಕೆಲಸವನ್ನೂ ಮಾಡಬೇಕು, ಕ್ಷೇತ್ರವನ್ನೂ ಉಳಿಸಿಕೊಳ್ಳಬೇಕು ಎನ್ನುವ ಗೌಡರ ಆಲೋಚನೆ ಮೇಲ್ನೋಟಕ್ಕೆ ಫಲಕೊಟ್ಟಿದೆ.
ರಾಮನಗರ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿ
ವಿಧಾನಸಭಾ ಕ್ಷೇತ್ರಗಳ ಪಕ್ಷವಾರು ವೋಟ್ ಶೇರ್
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪಕ್ಷವಾರು ವೋಟ್ ಶೇರ್ ಆಧರಿಸಿ ಮುಂದಿನ ರಾಜಕೀಯ ಹೆಜ್ಜೆಯಿಡಲು ಜೆಡಿಎಸ್ಸಿಗೆ ಅನುಕೂಲವಾಗಲಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಗಮನಾರ್ಹ ಸಾಧನೆ, ಯಾವ ಯಾವ ಅಸೆಂಬ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಕೋಟೆಯನ್ನು ಇನ್ನಷ್ಟು ಬಲಪಡಿಸಬೇಕು ಎನ್ನುವ ಲೆಕ್ಕಾಚಾರ ಹಾಕಲು ಉಪಚುನಾವಣೆಯ ಫಲಿತಾಂಶ ಗೌಡರಿಗೆ ಅನುಕೂಲವಾಗಲಿದೆ ಎಂದೇ ಹೇಳಲಾಗುತ್ತಿದೆ.
ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: ಶಿವರಾಮೇಗೌಡರ ಭರ್ಜರಿ ಗೆಲುವು
ಪ್ರಜ್ವಲ್ ಅಥವಾ ನಿಖಿಲ್ ಗೆ ಮಂಡ್ಯ ಕ್ಷೇತ್ರದ ಟಿಕೆಟ್?
ಹಾಲೀ ಲೋಕಸಭೆಯ ಅವಧಿ ಮುಗಿಯಲು ಇನ್ನೂ ಐದಾರು ತಿಂಗಳು ಬಾಕಿಯಿದೆ. ಮುಂಬರುವ ಚುನಾವಣೆಯಲ್ಲಿ ಪ್ರಜ್ವಲ್ ಅಥವಾ ನಿಖಿಲ್ ಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಕ್ಕಿದ್ದೇ ಆದಲ್ಲಿ, ಈ ಸಮಯವನ್ನು ವ್ಯರ್ಥ ಮಾಡದೇ ಎಲ್ಲೆಲ್ಲಿ ಪಕ್ಷ ಸಂಘಟನೆ ಮಾಡಬೇಕು, ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಬೇಕು ಎನ್ನುವ ರಾಜಕೀಯ ಟಿಪ್ಸ್ ದೇವೇಗೌಡರಿಂದ ಮೊಮ್ಮಕ್ಕಳಿಗೆ ಸಿಗಲಿದೆ.
ಮೊಮ್ಮಕ್ಕಳ ರಾಜಕೀಯ ಎಂಟ್ರಿಗೆ ವೇದಿಕೆ ರೂಪಿಸಲು ಅನುಕೂಲ
ಒಟ್ಟಿನಲ್ಲಿ, ದೇವೇಗೌಡರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ, ಮೊಮ್ಮಕ್ಕಳ ರಾಜಕೀಯ ಎಂಟ್ರಿಗೆ ವೇದಿಕೆ ರೂಪಿಸಲು ಅನುಕೂಲವಾಯಿತು. ಪ್ರಜ್ವಲ್ ರೇವಣ್ಣ ನನ್ನ ಉತ್ತರಾಧಿಕಾರಿ ಎಂದು ದೇವೇಗೌಡರು ಬಹಳಷ್ಟು ಬಾರಿ ಹೇಳಿದ್ದರು. ಹಾಗಾಗಿ, ಮೊಮ್ಮಗನಿಗಾಗಿ ಸೇಫ್ ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ಗೌಡ್ರು, ಮಂಡ್ಯ ಅಥವಾ ಹಾಸನ ಕ್ಷೇತ್ರದಿಂದ ಪ್ರಜ್ವಲ್, ನಿಖಿಲ್ ಕಣಕ್ಕಿಳಿಸಬಹುದು.