85 ಅಡಿಗೆ ಕುಸಿದ ಕೆಆರ್ಎಸ್ ನೀರಿನ ಮಟ್ಟ
ಮಂಡ್ಯ, ಮಾರ್ಚ್ 21 : ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 85.29 ಅಡಿಗೆ ಕುಸಿದಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದಲ್ಲಿ ಗರಿಷ್ಠ 124 ಅಡಿ ನೀರು ಸಂಗ್ರಹಿಸಬಹುದಾಗಿದೆ. ಶನಿವಾರ ನೀರಿನ ಮಟ್ಟ 85 ಅಡಿಗೆ ಕುಸಿದಿದೆ. ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಜಲಾಶಯದಲ್ಲಿ 9 ಟಿಎಂಸಿ ನೀರು ಕಡಿಮೆ ಇದೆ. [ಬೆಂಗಳೂರು ಬೇಸಿಗೆ ಬಲು ಭೀಕರ!]

ಸದ್ಯ, ಜಲಾಶಯಕ್ಕೆ 350 ಕ್ಯೂಸೆಕ್ ನೀರು ಹರಿದುಬರುತ್ತಿದೆ. ನಾಲೆ ಮತ್ತು ನದಿಯ ಮೂಲಕ ಕುಡಿಯುವ ನೀರಿನ ಉದ್ದೇಶಕ್ಕೆ ಒಟ್ಟು 3,403 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 49 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಈಗ 13 ಟಿಎಂಸಿ ನೀರು ಇದೆ. [ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಕರ್ನಾಟಕದ ಪತ್ರ]
ಕುಡಿಯುವ ನೀರಿಗೆ ಆದ್ಯತೆ : ಜಲಾಶಯದ ನೀರಿನ ಮಟ್ಟ 74.6 ಅಡಿ ತಲುಪುವವರೆಗೆ ನಾಲೆಗಳಿಗೆ ನೀರು ಹರಿಸಬಹುದಾಗಿದೆ. 74.6 ಅಡಿಯಿಂದ 60 ಅಡಿ ಮಟ್ಟದವರೆಗಿನ ನೀರನ್ನು ಕುಡಿಯುವ ನೀರಿಗಾಗಿ ಮೀಸಲಾಗಿಡಬೇಕು. [ಬರಿದಾಗುತ್ತಿದೆ ಕೆಆರ್ ಎಸ್; ಕಾವೇರಿ ತವರಲ್ಲಿಯೂ ಬರ]
ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕನಿಷ್ಠ 4 ಟಿಎಂಸಿ ನೀರನ್ನು ಕಾಯ್ದಿರಿಸಬೇಕು ಎನ್ನುತ್ತಾರೆ ನೀರಾವರಿ ನಿಗಮದ ಇಂಜಿನಿಯರ್ಗಳು. ಜಲಾಶಯದ ನೀರಿನಮಟ್ಟ 60 ಅಡಿಗೆ ಕುಸಿದರೆ ಡೆಡ್ ಸ್ಟೋರೇಜ್ ತಲುಪುತ್ತದೆ. ಆ ನೀರನ್ನು ಯಾವ ಉದ್ದೇಶಕ್ಕೂ ಬಳಕೆ ಮಾಡಲು ಸಾಧ್ಯವಿಲ್ಲ. [ಜಲಾಶಯಗಳ ನೀರು ಕುಡಿಯುವ ನೀರಿಗಾಗಿ ಮಾತ್ರ]
ಕೆಲವು ದಿನಗಳ ಹಿಂದೆ ಸಚಿವ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಶ್ವೇಶ್ವರಯ್ಯ ಮತ್ತು ಇತರ ನಾಲೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈಗ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಅಲ್ಲಿಯ ತನಕವೂ ನೀರು ಪೂರೈಕೆ ಮಾಡುವುದು ಕಷ್ಟ ಎನ್ನುತ್ತಾರೆ ಅಧಿಕಾರಿಗಳು.
ಅಂದಹಾಗೆ ಕೆಆರ್ಎಸ್ ಜಲಾಶಯದಲ್ಲಿ ಸೋಮವಾರ 84.22 ಅಡಿ ನೀರಿನ ಸಂಗ್ರಹವಿದೆ.












Click it and Unblock the Notifications