ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡ್ಡಾಯ
ಬೆಂಗಳೂರು, ಜನವರಿ 05: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯಲ್ಲಿ ಸಾಂಸ್ಕೃತಿಕ ಚಡುವಟಿಕೆಗಳ ಜತೆಗೆ ದೈಹಿಕ ಶಿಕ್ಷಣ, ಡಿಜಿಟಲ್ ಮತ್ತು ಹಣಕಾಸು ಜಾಗೃತಿ ಕಲಿಕೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯಗೊಳಿಸಲಾಗಿದೆ. ಉಳಿದ ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಸೇವಾ ಸದನದಲ್ಲಿ ಬುಧವಾರ ನಡೆದ ಸಂಗೀತ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯಲ್ಲಿ ನಮ್ಮತನಕ್ಕೆ ಆದ್ಯತೆ ನೀಡಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಧಾಮಂತ್ರಿ ನರೇಂದ್ರ ಮೋದಿ ಅವರು ತರುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ರಾಜ್ಯ ಸರ್ಕಾರವು ಅಷ್ಟೇ ಉತ್ಸಾಹ ಮತ್ತು ಬದ್ಧತೆಗಳಿಂದ ಅನುಷ್ಠಾನಕ್ಕೆ ತರುತ್ತಿದೆ. ಈ ಮೂಲಕ ಸಾರ್ವಜನಿಕರು ಹಲವು ದಶಕಗಳಿಂದ ಎದುರು ನೋಡುತ್ತಿದ್ದಂತಹ ಪರಿವರ್ತನೆ ಈ ನಾಡಿನಲ್ಲಿ ಆಗುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜದ ನಿಜವಾದ ಅಗತ್ಯಗಳೇನು ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡು ಮುಂದಡಿ ಇಡಬೇಕು. ಈ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಕರ್ನಾಟಕವು ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವು ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾಗಿದೆ. ಇಂತಹ ಶ್ರೀಮಂತಿಕೆಯ ಮೂಲಕ ಸುಂದರ ಮಲ್ಲೇಶ್ವರಂನ್ನು ಸೃಷ್ಟಿಸುವುದೇ ನಮ್ಮೆಲ್ಲರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಲಾವಿದರು ತೊಡಗಿಕೊಂಡಿದ್ದಾರೆ ಎಂದರು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾಣೆ ತರಬಲ್ಲ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಕೇಂದ್ರ ಸರ್ಕಾರವು 2020ರ ಜುಲೈ 29ಕ್ಕೆ ಜಾರಿ ಮಾಡಿತು. ಈ ನೀತಿಯನ್ನು ಅಳವಡಿಸಿಕೊಂಡು ಅನಷ್ಠಾನಕ್ಕೆ ತರುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಈ ನೀತಿಗೆ ಸಾಕಷ್ಟು ಟೀಕೆಗಳು, ಅನುಷ್ಠಾನಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದಗಿವೆ.
ಕಾರ್ಯಕ್ರಮದಲ್ಲಿ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್, ಹಿರಿಯ ಸಂಗೀತ ಕಲಾವಿದೆ ಪುಸ್ತಕಂ ರಮಾ ಮುಂತಾದವರು ಉಪಸ್ಥಿತರಿದ್ದರು.