ಭಾರತ್ ಜೋಡೋ ಯಾತ್ರೆಗೆ ದೇವೇಗೌಡರನ್ನು ಆಹ್ವಾನಿಸಿದ ಖರ್ಗೆ: ರಾಹುಲ್ರನ್ನು ಹೊಗಳಿ ಪತ್ರ ಬರೆದ ಗೌಡರು ಹೇಳಿದ್ದೇನು? ತಿಳಿಯಿರಿ
ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರನ್ನು ಭಾರತ್ ಜೋಡೋ ಯಾತ್ರೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ಪತ್ರದ ಮೂಲಕ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಏನಿದೆ? ರಾಹುಲ್ ಬಗ್ಗೆ ದೇವೇಗೌಡರು ಏನಂದರು? ತಿಳಿಯಿರಿ
ಬೆಂಗಳೂರು, ಜನವರಿ 24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಹ್ವಾನಿಸಲಾಗಿದೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರನ್ನು ವೈಯಕ್ತಿವಾಗಿ ಆಹ್ವಾನಿಸಿದ್ದಾರೆ. ಈ ಕುರಿತು ಸ್ವತಃ ದೇವೇಗೌಡರೇ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಭಾರತ್ ಜೋಡೋ ಸಮಾರೋಪ ಸಮಾರಂಭದ ಯಾತ್ರೆಯಲ್ಲಿ ಭಾಗವಹಿಸಲು ಮಲ್ಲಿಕಾರ್ಜುನ ಅವರು ನನ್ನನ್ನು ಆಹ್ವಾನಿಸಿದ್ದರು ಇದು ಜಮ್ಮು- ಕಾಶ್ಮಿರದ ಶ್ರೀನಗರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ನನಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದರೆ, ಆ ಸಮಾರಂಭಕ್ಕೆ ನನ್ನ ಆಳವಾದ ಮೆಚ್ಚುಗೆಯನ್ನು ತಿಳಿಸಿದ್ದೇನೆ. ರಾಹುಲ್ ಗಾಂಧಿ ಅವರು ಸೌಹಾರ್ದತೆಗಾಗಿ ರಾಷ್ಟ್ರದ ಉದ್ದಗಲಕ್ಕೂ ನಡೆದು ಸಾಧನೆ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ. ಈ ಟ್ವೀಟ್ ಜೊತೆ ತಮ್ಮ ಪತ್ರವನ್ನು ದೇವೇಗೌಡರು ಹಂಚಿಕೊಂಡಿದ್ದಾರೆ.

ದೇವಗೌಡರು ಹಂಚಿಕೊಂಡಿರುವ ಪತ್ರದಲ್ಲೇನಿದೆ?
ಮಲ್ಲಿಕಾರ್ಜುನ ಖರ್ಗೆ ಅವರೇ, ಶ್ರೀನಗರದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿರುವುದಕ್ಕೆ ತುಂಬಾ ಧನ್ಯವಾದಗಳು. ಮಹಾತ್ಮ ಗಾಂಧಿ ಅವರ ಜನ್ಮದಿನದಂದು ಸಮಾರಂಭವನ್ನು ಆಯೋಜಿಸಿರುವುದಕ್ಕೆ ನನ್ನ ಪ್ರಶಂಸೆ ಇದೆ. ನಾನು ವೈಯುಕ್ತಿಯ ಕಾರಣಗಳಿಗೋಸ್ಕರ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿ ಅವರಿಗೆ ನನ್ನ ಶುಭಾಶಯಗಳು. ಹಿಂಸೆ ಮತ್ತು ದ್ವೇಷದ ವಿರುದ್ಧ ರಾಹುಲ್ ಗಾಂಧಿ ಹೋರಾಡುತ್ತಿದ್ದಾರೆ. ಸೌಹಾರ್ದದ ಸಂದೇಶವನ್ನು ದೇಶದಾದ್ಯಂತ ಹರಡಲು 3500 ಕಿಮೀ ನಡೆದಿದ್ದಾರೆ. ನನ್ನ ಆಳವಾದ ಪ್ರಶಂಸೆಯನ್ನು ಅವರಿಗೆ ತಿಳಿಸಿ ಎಂದು ದೇವೇಗೌರು ಪತ್ರವನ್ನು ಬರೆದಿದ್ದಾರೆ.

ನಟಿ ಊರ್ಮಿಳಾ ಮಾತೋಂಡ್ಕರ್ ಭಾಗಿ
ಇಂದು ಬೆಳಿಗ್ಗೆ ಜಮ್ಮುವಿನ ನಗ್ರೋಟಾದಿಂದ ಪುನರಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರು ಸೇರಿಕೊಂಡರು. ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸೇನಾ ಗ್ಯಾರಿಸನ್ ಬಳಿಯಿಂದ ಮೆರವಣಿಗೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಮಾತೋಂಡ್ಕರ್ ಅವರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು ಸ್ವಾಗತಿಸಲು ಮಾರ್ಗದುದ್ದಕ್ಕೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.

ಖ್ಯಾತ ಲೇಖಕ ಪೆರುಮಾಳ್ ಮುರುಗನ್ ಭಾಗಿ
ಜಮ್ಮು ಕಾಶ್ಮೀರದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಖ್ಯಾತ ಲೇಖಕ ಪೆರುಮಾಳ್ ಮುರುಗನ್ ಭಾಗಿಯಾಗಿದ್ದಾರೆ. ಅವರು ಜೊತೆ ಜಮ್ಮು- ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಮಾಜಿ ಸಚಿವ ಅಬ್ದುಲ್ ಹಮೀದ್ ಕರ್ರಾ ಸಹ ಭಾಗಿಯಾಗಿದ್ದರು. ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು.

ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆ
ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಗುರುವಾರ ಪಂಜಾಬ್ನಿಂದ ಜಮ್ಮು-ಕಾಶ್ಮೀರ ಪ್ರವೇಶಿಸಿ ಸೋಮವಾರ ಜಮ್ಮು ನಗರಕ್ಕೆ ತಲುಪಿದೆ. ಜನವರಿ 31ರಂದು ಶ್ರೀನಗರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.












Click it and Unblock the Notifications