ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆ ಬಳಿಕ ಬೆಳಗಾವಿ ಭೇಟಿ ಮುಂದೂಡಿದ ಮಹಾರಾಷ್ಟ್ರ ಸಚಿವರು
ಬೆಳಗಾವಿ, ಡಿಸೆಂಬರ್ 06: ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ತಮ್ಮ ಬೆಳಗಾವಿ ಭೇಟಿಯನ್ನು ಮುಂದೂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಸಚಿವರ ಭೇಟಿ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಸಿದ್ದರು.
ಪಿಎಫ್ ಐ ಸೇರಿ ಎಂದು ಪೋಸ್ಟರ್ ಅಂಟಿಸಿರುವವರ ವಿರುದ್ದ ಕ್ರಮ: ಬಸವರಾಜ ಬೊಮ್ಮಾಯಿ
ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರನ್ನು ಗಡಿ ಮಂತ್ರಿಗಳನ್ನಾಗಿ ಮಹಾರಾಷ್ಟ್ರ ಸರ್ಕಾರ ನೇಮಿಸಿದೆ. ಮಹಾರಾಷ್ಟ್ರವು ದಶಕಗಳಿಂದ ಗಡಿ ಖ್ಯಾತೆ ತೆಗೆಯುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ವಿವಾದವು ಸುಪ್ರೀಂ ಕೋರ್ಟ್ನಲ್ಲಿ ಇದೆ. ಇಷ್ಟಾಗಿಯೂ ಮಹಾರಾಷ್ಟ್ರ ಸರ್ಕಾರ ಕರ್ನಾಟಕದೊಂದಿಗೆ ಗಡಿ ಸಂಘರ್ಷವನ್ನು ಮುಂದುವರಿಸುತ್ತಲೇ ಬಂದಿದೆ.
ಮಹಾರಾಷ್ಟ್ರ ಸಚಿವರು ಬರುವುದಿಲ್ಲ ಎಂದ ಎಂಇಎಸ್
ಈ ವಿಚಾರವಾಗಿ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಸರಿತಾ ಪಾಟೀಲ್, ' ಇಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಕಿತ್ತು. ಆದರೆ, ಅವರು ಬರುವುದಿಲ್ಲವೆಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆ ಇಂದ ಗೊತ್ತಾಗಿದೆ. ಈ ಕಾರಣಕ್ಕಾಗಿ, ಇಂದು ನಡೆಯಬೇಕಿದ್ದ ಮಹಪರಿನಿರ್ವಾನ್ ದಿವಾಸವನ್ನು ರದ್ದು ಮಾಡಲಾಗಿದೆ' ಎಂದು ಹೇಳಿದ್ದಾರೆ.
'ಅವರ(ಮಹಾರಾಷ್ಟ್ರ ಸಚಿವರು) ಭೇಟಿಯನ್ನು ಈಗ ರದ್ದುಗೊಳಿಸಲಾಗಿದೆ. ಆದರೆ, ಅವರು ಬೇರೆ ದಿನಕ್ಕೆ ಭೇಟಿ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ. ಈ ವರ್ಷ ಕೊನೆ ಆಗುವುದರೊಳಗೆ ಬೆಳಗಾವಿಗೆ ಭೇಟಿ ನೀಡಬೇಕೆಂದು ನಾನು ಅವರಲ್ಲಿ ವಿನಂತಿಸುತ್ತೇನೆ. ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ಅಡಿವೇಶನ ಇದೆ. ಆ ದಿನ ಅವರು ಭೇಟಿ ನೀಡಬೇಕೆಂದು ಮಹಾರಾಷ್ಟ್ರ ಏಕಿಕರಣ ಸಮಿತಿಯ ಪರವಾಗಿ ವಿನಂತಿಸುತ್ತೇನೆ' ಎಂದು ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಆರಂಭದಲ್ಲಿ ಡಿಸೆಂಬರ್ 3 ರಂದು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ, ಡಿಸೆಂಬರ್ 6ಕ್ಕೆ ತಮ್ಮ ಭೇಟಿಯನ್ನು ಮುಂದೂಡಿದ್ದರು.
ಬೆಳಗಾವಿ ಗಡಿ ತಂಟೆಯ ವಿಚಾರವಾಗಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಈ ಪ್ರಕರಣವು ನ್ಯಾಯಾಲಯದಲ್ಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನ್ಯಾಯಾಯಲದಲ್ಲಿಯೇ ಹೋರಾಟ ಮಾಡಬೇಕೆಂದು ನಾನು ವಿನಂತಿಸುತ್ತೇನೆ' ಎಂದು ತಿಳಿಸಿದ್ದರು.
'ಮಹಾರಾಷ್ಟ ಸಚಿವರ ಬೆಳಗಾವಿ ಭೇಟಿಯು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುತ್ತದೆ. ನಾವು ಈಗಾಗಲೇ ಅವರೊಂದಿಗೆ (ಏಕನಾಥ್ ಶಿಂಧೆ) ಮಾತುಕತೆ ನಡೆಸಿದ್ದೇವೆ. ಆದ್ದರಿಂದ, ಸಚಿವರು ಭೇಟಿ ನೀಡಲು ಇದು ಸರಿಯಾದ ಸಮಯವಲ್ಲ. ಈ ವಿಷಯವು ನ್ಯಾಯಾಲಯದಲ್ಲಿದೆ ಮತ್ತು ಅದನ್ನು ಕಾನೂನುಬದ್ಧವಾಗಿ ಹೋರಾಡಬೇಕೆಂದು ನಾನು ಮಹಾರಾಷ್ಟ್ರ ಸಿಎಂಗೆ ಮನವಿ ಮಾಡುತ್ತೇನೆ' ಎಂದು ಬೊಮ್ಮಾಯಿ ಹೇಳಿದ್ದರು.
ಮಹಾರಾಷ್ಟ್ರ- ಕರ್ನಾಟಕ ಗಡಿಗಳಲ್ಲಿ ಮುನ್ನೆಚ್ಚರಿಕೆ ಕ್ರಮ
ಗಡಿ ವಿವಾದ ಭುಗಿಲೇಳುತ್ತಿದ್ದಂತೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪೊಲೀಸರ ಪ್ರಕಾರ, ಆರು ಕೆಎಸ್ಆರ್ಪಿ ತುಕಡಿಗಳನ್ನು ನಿಪ್ಪಾನಿ ತಾಲ್ಲೂಕಿನಲ್ಲಿ ನಿಯೋಜಿಸಲಾಗಿದೆ. ಕುಗಾನೊಲ್ಲಿ ಚೆಕ್ ಪೋಸ್ಟ್ನಲ್ಲಿ 450 ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಹೆಚ್ಚುವರಿ ಎಸ್ಪಿ, ಡಿಎಸ್ಪಿಗಳು, ಪೊಲೀಸ್ ಇನ್ಸ್ಪೆಕ್ಟರ್ಗಳು, ಉಪ-ಇನ್ಸ್ಪೆಕ್ಟರ್ಗಳು ಮತ್ತು 450 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನಿಪ್ಪಾನಿ ಮತ್ತು ಚಿಕ್ಕೋಡಿ ತಾಲ್ಲೂಕಿನೊಳಗೆ ಬರುವ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಗಡಿಗೆ ಪ್ರವೇಶಿಸುವ ಪ್ರತಿ ವಾಹನವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಹಿರೇಬಾಗೇವಾಡಿ ಬಳಿ ಕರವೇ ಪ್ರತಿಭಟನೆ
ಮಹಾರಾಷ್ಟ್ರದ ಗಡಿ ತಂಟೆಯನ್ನು ವಿರೋಧಿಸುತ್ತಲೇ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಇಂದು ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಬಳಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ವಾಹನಗಳಿಗೆ ಕಪ್ಪು ಮಸಿ ಬಳಿದು ದರಣಿ ನಡೆಸಿದ್ದಾರೆ. ಮಹಾರಾಷ್ಟ್ರ ಗಡಿ ತಂಟೆಯ ವಿರುದ್ಧ ಘೋಷಣೆ ಕೂಗಿದ್ದಾರೆ. 'ಜೀವ ಕೊಡುತ್ತೇವೆ, ಆದರೆ, ಬೆಳಗಾವಿಯನ್ನು ಬಿಡುವುದಿಲ್ಲ' ಎಂದು ಘೋಷಣೆಗಳನ್ನು ಮೊಳಗಿಸಿದ್ದಾರೆ