ಮಹಾದಾಯಿ ಪ್ರತಿಭಟನೆ ಮಾಡಿದ್ದು ಕಾಂಗ್ರೆಸ್ ಪ್ರೇರಿತ ರೈತರು :ಬಿಎಸ್ ವೈ
ಮೈಸೂರು, ಜನವರಿ 23 : ಮಹಾದಾಯಿ ವಿಚಾರವಾಗಿ ಬೆಂಗಳೂರಿಗೆ ಬಂದು, ಬಿಜೆಪಿ ಕಚೇರಿ ಮುಂದೆ ಪ್ರತಿಭಟಿಸಿದವರು ಕಾಂಗ್ರೆಸ್ ಪ್ರೇರಿತ ರೈತರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿವರ್ತನಾ ಯಾತ್ರೆಯಲ್ಲಿ ಪ್ರತಿಯೊಂದು ಕ್ಷೇತ್ರದ ಜ್ವಲಂತ ಸಮಸ್ಯೆ ಆಲಿಸಿದ್ದೇನೆ. 224 ಕ್ಷೇತ್ರಗಳ ಅಭ್ಯರ್ಥಿಯನ್ನು ಗುರುತಿಸಲು ಪರಿವರ್ತನಾ ಯಾತ್ರೆ ಸಹಕಾರಿಯಾಗಿದೆ. ನವಕರ್ನಾಟಕ ನಿರ್ಮಾಣ ಯಾತ್ರೆ ಯಶಸ್ವಿಯಾಗಿ 84ನೇ ದಿನಕ್ಕೆ ಕಾಲಿಟ್ಟಿದೆ ಎಂದರು.
ಜ.25ರ ರಾಜ್ಯ ಬಂದ್ ಹಿಂದೆ ಸಿಎಂ ನೇರ ಕೈವಾಡ: ಬಿಎಸ್ವೈ
ಈವರೆಗೆ 10 ಸಾವಿರ ಕಿಲೋಮೀಟರ್ ಪರಿವರ್ತನಾ ಯಾತ್ರೆ ಪೂರ್ಣಗೊಳಿಸಿದ್ದೇನೆ. ಇದೊಂದು ದಾಖಲೆಯಾಗಿದ್ದು, 2 ಕೋಟಿ ಜನರನ್ನು ಉದ್ದೇಶಿಸಿ ಮಾತನಾಡಿದಂತಾಗಿದೆ ಎಂದರು.
ಪರಿವಾರ, ತಳವಾರ ಸಮುದಾಯ ಎಸ್.ಟಿ ಸೇರಿಸಲು ಪ್ರಯತ್ನಿಸುತ್ತೇನೆ. ರಾಜ್ಯದಲ್ಲಿ ಎಲ್ಲಿಯೂ ಕೆರೆ - ಕಟ್ಟೆ ತುಂಬಿಲ್ಲ. ಸಿದ್ದರಾಮಯ್ಯ ರೈತರ ಕಷ್ಟ ಕೇಳುತ್ತಿಲ್ಲ. ಹೀಗಾಗಿ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 20,000 ಕೋಟಿ ಹಣ ನೀರಾವರಿಗೆ ಮೀಸಲಿಟ್ಟು, ಐದು ವರ್ಷಗಳಲ್ಲಿ ರೈತರ ಸಮಸ್ಯೆ ಸಂಪೂರ್ಣ ಬಗೆಹರಿಸುವ ಭರವಸೆ ನೀಡಿದ್ದೇನೆ ಎಂದರು.
ನಿಯಮಗಳಿಲ್ಲದೆ ಅಧಿಕಾರಿಗಳ ವರ್ಗಾವಣೆ
ರಾಜ್ಯದಲ್ಲಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಕಷ್ಟ ಹೇಳಿಕೊಳ್ಳಲು ಸಿದ್ದರಾಮಯ್ಯ ಜನರ ಕೈಗೆ ಸಿಗುತ್ತಿಲ್ಲ. ಯಾವುದೇ ನಿಯಮಗಳಿಲ್ಲದೆ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ಇದು ಸಿದ್ದರಾಮಯ್ಯನವರಿಗೆ ಛೀಮಾರಿ ಹಾಕಲು ಕಾರಣವಾಗಿದೆ ಎಂದರು.
ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ: ಯಡಿಯೂರಪ್ಪ
ಉತ್ತರಪ್ರದೇಶದ ಫಲಿತಾಂಶ ಕರ್ನಾಟಕದಲ್ಲಿ ಪುನರಾವರ್ತನೆ
ಉತ್ತರ ಪ್ರದೇಶದ ಫಲಿತಾಂಶ ಕರ್ನಾಟಕದಲ್ಲಿ ಮರುಕಳಿಸುತ್ತದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ನಾನು ಯಾವುದೇ ಟೀಕೆ ಮಾಡುವುದಿಲ್ಲ. ಚುನಾವಣೆಗೆ ಒಂದು ತಿಂಗಳು ಇರುವಾಗ ಬರುವ ಸಮೀಕ್ಷೆಯಲ್ಲಿ ನಿಜಾಂಶ ಗೊತ್ತಾಗಲಿದೆ. ಮಹಾದಾಯಿ ವಿಚಾರವಾಗಿ ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಿದವರೆಲ್ಲ ಕಾಂಗ್ರೆಸ್ ಪ್ರೇರಿತ ರೈತರು ಎಂದರು.
ಬಜೆಟ್ ಮಂಡಿಸಲು ಆಗಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ನಿಮಗೆ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ಮುಖ್ಯಮಂತ್ರಿ ಬಗ್ಗೆ ಯಾರೂ ಮೃದು ಧೋರಣೆ ತೋರಲು ಸಾಧ್ಯವಾಗಿಲ್ಲ ಎಂದರು.
ಕಾಂಗ್ರೆಸ್ ಶಾಸಕರ ಮರ್ಯಾದೆ ಬೀದಿ ಪಾಲು ಮಾಡ್ತೇವೆ
ಇವರದು ದಪ್ಪ ಚರ್ಮದ ಸರಕಾರ. ಬಹುಮತ ಇದೆ ಎಂದು ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಿಮ್ಮ ಮೇಲಿನ ಎಲ್ಲ ಪ್ರಕರಣವನ್ನು ಸಿಐಡಿಯಿಂದ ಖುಲಾಸೆ ಮಾಡಿಸಲು ನಿಂತಿದ್ದೀರಾ? ನಿಮ್ಮ ವಿರುದ್ಧ ಚಾರ್ಜ್ ಶೀಟ್ ತಯಾರು ಮಾಡುತ್ತಿದ್ದೇವೆ. ಇದನ್ನು ಪ್ರತಿ ಮನೆಗೂ ಹಂಚುತ್ತೇವೆ. ನಿಮ್ಮೆಲ್ಲ ಶಾಸಕರ ಮಾನ- ಮರ್ಯಾದೆ ಬೀದಿಪಾಲು ಮಾಡುತ್ತೇವೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.