ಮಹದಾಯಿ ಹೋರಾಟ 2ನೇ ದಿನ : ಬಿಎಸ್ವೈ ಆಗಮನಕ್ಕೆ ಪಟ್ಟು
ಬೆಂಗಳೂರು, ಡಿಸೆಂಬರ್ 24 : 'ಯಡಿಯೂರಪ್ಪ ಅವರು ಬರಬೇಕು ಅಲ್ಲಿಯ ತನಕ ಜಾಗ ಬಿಟ್ಟು ಕದಲುವುದಿಲ್ಲ' ಎಂದು ಕರ್ನಾಟಕ ಬಿಜೆಪಿ ಕಚೇರಿ ಮುಂದೆ ನೂರಾರು ರೈತರು ಧರಣಿ ಕುಳಿತಿದ್ದಾರೆ.
ಎರಡು ದಿನಗಳಿಂದ ಮಹದಾಯಿ ಹೋರಾಟಗಾರರು ಮಲ್ಲೇಶ್ವರಂನಲ್ಲಿರುವ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. ಆದರೆ, ಯಡಿಯೂರಪ್ಪ ಅವರು ಮಾತ್ರ ಸ್ಥಳಕ್ಕೆ ಆಗಮಿಸಿಲ್ಲ. ಹಾವೇರಿಯಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದ್ದು, ಯಡಿಯೂರಪ್ಪ ಅದರಲ್ಲಿ ಬ್ಯುಸಿಯಾಗಿದ್ದಾರೆ.

ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ನವಲಗುಂದ, ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸುಮಾರು 400ಕ್ಕೂ ಅಧಿಕ ರೈತರು ಬೆಂಗಳೂರಿಗೆ ಆಗಮಿಸಿದ ಧರಣಿ ಕುಳಿತಿದ್ದಾರೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಧರಣಿ ವಾಪಸ್ ಪಡೆಯುವಂತೆ ಮಾಡಿದ ಮನವಿಗೆ ರೈತರು ಸ್ಪಂದಿಸಿಲ್ಲ. ಯಡಿಯೂರಪ್ಪ ಅವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.
ಪ್ರತಿಭಟನಾ ನಿರತ ರೈತರು ಬಿಜೆಪಿ ಕಚೇರಿ ಮುಂದೆಯೇ ಅಡುಗೆ ಮಾಡಿ, ಊಟ ಮಾಡುತ್ತಿದ್ದಾರೆ. ಹಲವಾರು ಸಂಘಟನೆಗಳ ಸದಸ್ಯರು ರೈತರಿಗೆ ಬೆಂಬಲ ನೀಡಿದ್ದು, ಕುಡಿಯುವ ನೀರು ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಮಹದಾಯಿ ವಿವಾದ ಬಗೆಹರಿಸುವಂತೆ 891 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಯಾವ ರಾಜಕೀಯ ಪಕ್ಷಗಳು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನೀರು ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.












Click it and Unblock the Notifications